ಉಡುಪಿ: ಅಮಾಯಕರ ಬಳಿ ತಾನು ವೀಸಾ, ಪಾಸ್ಪೋರ್ಟ್ ಶೀಘ್ರದಲ್ಲಿ ಮಾಡಿಸಿ ಕೊಡುವುದಾಗಿ ಅಲ್ಲದೇ ಮೆಕ್ಕಾ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಅವರಿಂದ ಹಣ ಪಡೆದು ಪಂಗನಾಮ ಹಾಕಿ ವಂಚಿಸಿದ್ದ ಖತರ್ನಾಕ್ ವಂಚಕನೋರ್ವನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
(ಅಬ್ದುಲ್ ಖಾದರ್)
ಲಕ್ಷಾಂತರ ರೂ. ವಂಚಿಸಿ ಸದ್ಯ ಪೊಲೀಸರ ಅತಿಥಿಯಾದ ವಂಚಕ ಮಂಗಳೂರು ಮೂಲದ ಅಲ್ ಇಕಾಲಾಸ್ ಟೂರ್ಸ್-ಟ್ರಾವೆಲ್ಸ್ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಖಾದರ್. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಶುಕ್ರವಾರ ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಲಕ್ಷಾಂತರ ಹಣಕ್ಕೆ ಪಂಗನಾಮ..
ಸುಮಾರು ಒಂದು ವರ್ಷಗಳ ಹಿಂದೆ ಸಾಸ್ತಾನ ಸಮೀಪದ ಮೈದ ಕುಟ್ಟಿ ಎನ್ನುವವರ ಬಳಿ ಮೆಕ್ಕಾ ಮದೀನಾ ಯಾತ್ರೆಗೆ ತೆರಳಲು ವೀಸಾ ಹಾಗೂ ಪಾಸ್ಪೋರ್ಟ್ ಮಾಡಿಸಿ ಕೊಡುವುದಾಗಿ 8 ಲಕ್ಷ ಹಣ ಪಡೆದಿದ್ದ, ಆದರೇ ಹಲವು ಸಮಯಗಳದಾರೂ ವೀಸಾ ಪಾಸ್ಪೋರ್ಟ್ ಮಾಡಿಸಿಕೊಟ್ಟಿರಲಿಲ್ಲ. ಈ ಬಗ್ಗೆ ಮೈದ ಕುಟ್ಟಿ ವಿಚಾರಿಸಿದಾಗ ಅವರಿಗೆ ಏನೇನೋ ಸಬೂಬು ಹೇಳಿದ್ದಲ್ಲದೇ ಬ್ಲ್ಯಾಂಕ್ ಚೆಕ್ ನೀಡಿದ್ದ. ಇದೇ ಸಮಯದಲ್ಲಿ ತನಗೂ ಮೂರುವರೆ ಲಕ್ಷ ಮೋಸ ಮಾಡಿದ್ದಾನೆಂದು ಮೈದ ಕುಟ್ಟಿ ಅವರ ಕುಟುಂಬಿಕರೋರ್ವರು ದೂರಿದ್ದರು. ಈ ಪೈಕಿ ಮೈದ ಕುಟ್ಟಿ ಕೋಟ ಪೊಲೀಸ್ ಠಾಣೆಯಲ್ಲಿ ಹಾಗೂ ಇನ್ನೋರ್ವರು ಉಡುಪಿಯಲ್ಲಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಿದ್ದರು.
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆರೋಪಿ ಅಬ್ದುಲ್ ಖಾದರ್ ನಾಪತ್ತೆಯಾಗಿದ್ದ. ಮುಂಬೈಯಲ್ಲಿನ ಹೋಟೇಲೊಂದರಲ್ಲಿ ಈತ ಇರುವ ಬಗ್ಗೆ ಸುಳಿವು ಪಡೆದ ಪೊಲೀಸರು ಸ್ಥಳೀಯ ಪೊಲೀಸರ ಬೆಂಬಲ ಪಡೆದು ಬಂಧಿಸಿದ್ದಾರೆ.
ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಇನ್ನೂ ಹಲವು ಕಡೆಗಳಲ್ಲಿ ಹಲವು ಜನರಿಗೆ ಮೋಸ ಮಾಡಿದ ಬಗ್ಗೆಯೂ ಮಾಹಿತಿ ಇದ್ದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ವಂಚಿಸಿ ಪಡೆದ ಹಣದಲ್ಲಿ ಈತ ಐಷಾರಾಮಿ ಜೀವನವನ್ನು ನಡೆಸುತ್ತಿದ್ದ ಎನ್ನಲಾಗಿದೆ.