(ವರದಿ,ಚಿತ್ರ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಬಾರಂದಾಡಿ ಗ್ರಾಮದ ಜನರು ಇಂದು ಖುಷಿಯಾಗಿದ್ರು. ಹಲವು ತಿಂಗಳುಗಳ ಸಮಸ್ಯೆಗೆ ಪರಿಹಾರ ಸಿಕ್ಕ ಸಂತಸದ ಕ್ಷಣಗಳಿದು. ಅವರ ಸಂತೋಷಕ್ಕೆ ಕಾರಣ ಏನು ಅಂತೀರಾ..ಹಾಗಿದ್ರೇ ಈ ವರದಿ ಓದಿ..
ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪುಟ್ಟ ಗ್ರಾಮವೇ ಕುಂದಬಾರಂದಾಡಿ. ಇಲ್ಲಿ ಎರಡು ದಶಕಗಳ ಹಿಂದೆ ಸಾರ್ವಜನಿಕ ಉದ್ದೇಶಕ್ಕಾಗಿ ಕುಡಿಯುವ ನೀರಿನ ಸಲುವಾಗಿ ಕೊಳವೆ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಸ್ಥಳಿಯ ಹತ್ತಾರು ಮನೆಗಳು ಈ ನೀರನ್ನೇ ಅವಲಂಭಿಸಿದ್ದರು. ಆದರೇ ಕೆಲವು ತಿಂಗಳುಗಳಿಂದ ಈ ಕೊಳವೆಬಾವಿಗೆ ಮೋಟಾರ್ ಪಂಪು ಅಳವಡಿಸಿದ ಸ್ಥಳೀಯ ಹಾಲು ಡೇರಿ ಈ ಕೊಳವೆಬಾವಿಯನ್ನು ಒತ್ತುವರಿಮಾಡಿಕೊಂಡು ನೀರು ಪೂರೈಕೆ ಮಾಡಿಕೊಳ್ಳುತ್ತಿತ್ತು. ಅಲ್ಲದೇ ಹಾಲುಡೇರಿಯ ಆವರಣದಲಿಯೇ ಇದ್ದ ಈ ಬೋರ್ವೆಲ್ ಹ್ಯಾಂಡಲನ್ನು ಕಿತ್ತೆಸೆದು ಜನರು ನೀರು ಸೇದಲು ಆಗದಂತೆ ಮಾಡಿತ್ತು.
ಒಂದೆಡೆ ಕುಂದಬಾರಂದಾಡಿಯಲ್ಲಿರುವ ತೆರೆದ ಬಾವಿಯು ಬತ್ತುವ ಹಂತದಲ್ಲಿದ್ದು ನೀರು ಕುಡಿಯಲು ಯೋಗ್ಯವಿರಲಿಲ್ಲ, ಇನ್ನೊಂದೆಡೆ ಸಾರ್ವಜನಿಕ ಉಪಯೋಗಕ್ಕಾಗಿದ್ದ ಕೊಳವೆಬಾವಿಯ ನೀರು ಜನರ ಉಪಯೋಗಕ್ಕೆ ಸಿಗದ ಕಾರಣ ಹಲವು ತಿಂಗಳುಗಳಿಂದ ಜನರು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಜನರ ಸಂಕಷ್ಟಕ್ಕೆ ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಪಂದಿಸಿದ್ದಾರೆ. ಸಮಸ್ಯೆ ಬಗ್ಗೆ ‘ಕನ್ನಡಿಗ ವರ್ಲ್ಡ್’ ವಿಸ್ತ್ರತ ವರದಿ ಮೂಲಕ ಬೆಳಕು ಚೆಲ್ಲುವ ಕಾರ್ಯವನ್ನು ಎಪ್ರಿಲ್ ೪ರಂದು ಸೋಮವಾರ ಮಾಡಿತ್ತು.
ಜನರಿಗೆ ಸ್ಪಂದಿಸಿದ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸಂಬಂದಪಟ್ಟ ಅಧಿಕಾರಿಗಳಿಗೆ ಶೀಘ್ರವೇ ಕೊಳವೆಬಾವಿ ಒತ್ತುವರಿ ತೆರವುಗೊಳಿಸಿ ಈ ಹಿಂದೆ ಇದ್ದಂತೆ ಕೊಳವೆ ಬಾವಿಗೆ ಹ್ಯಾಂಡಲ್ ಅಳವಡಿಸುವಂತೆ ಆದೇಶಿಸಿದ್ದರು. ಈ ಬಗ್ಗೆ ಸ್ಥಳಿಯ ಹಕ್ಲಾಡಿ ಪಂಚಾಯತ್ ಹಾಲುಡೇರಿಗೆ ಸೂಚಿಸಿದ್ದು ಅದರಂತೆಯೇ ಹಾಲುಡೇರಿ ಮೋಟಾರ್ ತೆರವುಗೊಳಿಸಿದ್ದಲ್ಲದೇ ತನ್ನ ಸ್ವಂತ ಖರ್ಚಿನಿಂದ ಬೋರ್ ವೆಲ್ ಕೆಲಸಗಾರರನ್ನು ಕರೆಯಿಸಿ ಹ್ಯಾಂಡಲ್ ಅಳವಡಿಸುವ ಕಾರ್ಯ ಮಾಡಿದೆ. ಈ ಬಗ್ಗೆ ಕುಂದಾಪುರದಲ್ಲಿ ಮಾತನಾಡಿದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಈಗಾಗಲೇ ಒತ್ತುವರಿ ತೆರವುಗೊಳಿಸಿದ ಬಗ್ಗೆ ಮಾಹಿತಿ ನೀಡಿದ್ರು.ರು.
ಇತ್ತ ಕೊಳವೆಬಾವಿಗೆ ಹ್ಯಾಂಡ ಅಳವಡಿಸುತ್ತಿದ್ದಂತೆಯೇ ತುಂಬಾ ದಿನಗಳಿಂದ ನೀರಿಗೆ ಪರಿತಪಿಸುತ್ತಿದ್ದ ಜನರು ಮನೆಯಲ್ಲಿನ ಕೊಡಪಾನಗಳನ್ನು ತಂದು ಸಂತಸದಿಂದಲೇ ಪಂಪು ಹೊಡೆದು ನೀರು ಸೇದಿ ಮನೆಗೆ ಕೊಂಡೊಯ್ದರು.