ಮಂಗಳೂರು, ಎ.9: ಚಾರ್ಮಾಡಿ ಅಧ್ಯಯನ ಪ್ರವಾಸ ತೆರಳಿದ್ದ ವೇಳೆ ನಿನ್ನೆ ಹೃದಯಾಘಾತಕೊಳಗಾಗಿ ನಿಧನರಾದ ಯುವ ಪತ್ರಕರ್ತ ಪ್ರಜಾವಾಣಿ ಪತ್ರಿಕೆಯ ವರದಿಗಾರ ಹೈಮದ್ ಹುಸೈನ್ ಅವರಿಗೆ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ನುಡಿನಮನ ಸಲ್ಲಿಸಿ ಮಾತನಾಡಿದ ಪ್ರಜಾವಾಣಿ ಮುಖ್ಯ ಉಪಸಂಪಾದಕ ಬಿ.ವಿ.ಸುರೇಶ್ ಅವರು, ಹುಸೇನ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಸೃಜನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದರು, ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಹೇಳಿದರು.
ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಲಾವಿದ ದಿನೇಶ್ ಹೊಳ್ಳ, ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ರವಿ ಕಾಮಿಲ, ಆರಿಫ್ ಪಡುಬಿದ್ರೆ, ಪುಷ್ಪರಾಜ್ ಬಿ.ಎನ್., ಸತ್ಯಾ ಕೆ., ಗುರುವಪ್ಪ ಬಾಳೆಪುಣಿ, ಸುರೇಶ್ ಬೆಳಗಜೆ, ಸುಬ್ರಹ್ಮಣ್ಯ, ವೇಣು ವಿನೋದ್, ಸುರೇಶ್ ಡಿ. ಪಳ್ಳಿ, ನರಸಿಂಹ ಮೂರ್ತಿ, ಶ್ರೀನಿವಾಸ, ವಿಜಯ್ ಕೋಟ್ಯಾನ್ ಪಡು, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿ ಹಾಗೂ ಮತ್ತಿತರ ಪತ್ರಕರ್ತರು ಹೈಮದ್ ಹುಸೈನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶೃದ್ಧಾಂಜಲಿ ಅರ್ಪಿಸಿದರು.
ಶುಕ್ರವಾರ ನಿಧನ:
ಯುಗಾದಿಯ ಪ್ರಯುಕ್ತ ಪತ್ರಿಕೆಗಳಿಗೆ ಶುಕ್ರವಾರ ರಜೆಯಿದ್ದ ಕಾರಣ ಪತ್ರಕರ್ತರೆಲ್ಲರೂ ಚಾರ್ಮಾಡಿ ಅಧ್ಯಯನ ಪ್ರವಾಸ ತೆರಳಿದ್ದರು. ಪತ್ರಕರ್ತರ ತಂಡ ಹಾಗೂ ಸಹ್ಯಾದ್ರಿ ಸಂಚಯ ಪರಿಸರ ಜಾಗೃತಿ ತಂಡದ ಸುಮಾರು ಮುವತ್ತಾರು ಮಂದಿ ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆ ತೆರಳಿತ್ತು.
ಈ ಸಂದರ್ಭ ಚಾರ್ಮಾಡಿಯ ಕಾಡಿನ ಮಧ್ಯೆ ಹೈಮದ್ ಹುಸೆನ್ ಅವರು ಹೃದಯಾಘಾತಕೊಳಗಾಗಿದ್ದು, ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಹೈಮದ್ ಹುಸೇನ್ ಅವರಿಗೆ ಇತ್ತೀಚೆಗೆ ವರ್ಗಾವಣೆಯಾಗಿದ್ದು, ಕೆಲವೆ ದಿನಗಳಲ್ಲಿ ಹಾವೇರಿಯಲ್ಲಿ ಕೆಲಸಕ್ಕೆ ಹಾಜರಾಗಬೇಕಿತ್ತು.