ಮಂಗಳೂರು, ಎ. 3: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದು ಅನಿವಾರ್ಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಅಮರನಾಥ ಶೆಟ್ಟಿ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಚಾರ ನಿಗ್ರಹ ದಳ ರಚನೆ ಮಾಡುವ ಮೂಲಕ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ.ವಿರೋಧ ಪಕ್ಷಗಳನ್ನು ಮಟ್ಟಹಕಲೆಂದೇ ಸಿದ್ದರಾಮಯ್ಯರು ಎಸಿಪಿ ರಚನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಡಾ. ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಬಹಳಷ್ಟು ಉತ್ತಮ ಕೆಲಸಗಳಾಗಿವೆ. ಆದರೆ ನ್ಯಾ. ಭಾಸ್ಕರ್ ರಾವ್ರವರ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಬಳಿಕ ಅದಕ್ಕೆ ಅರ್ಹರನ್ನು ನೇಮಕಾತಿ ಮಾಡುವ ಬದಲು ಭ್ರಷ್ಟಾಚಾರಕ್ಕೆ ಮತ್ತಷ್ಟು ಕಾರಣವಾಗುವ ಎಸಿಬಿ ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಪ್ರತಿಪಕ್ಷ ಹಾಗೂ ಕಾಂಗ್ರೆಸ್ ನಿಂದಲೂ ಪ್ರಬಲವಾದ ವಿರೋಧವಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕಾಗಿ ಹಠ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ಲೋಕಾಯುಕ್ತಕ್ಕೆ ನೇಮಕಾತಿ ಮಾಡುವ ಬದಲು ರಾಜ್ಯ ಸರಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಗೆ ಅಧಿಸೂಚನೆ ಹೊರಡಿಸಿರುವುದು ಲೋಕಾಯುಕ್ತವನ್ನು ದುರ್ಬಲಗೊಳಿಸುವ ಹುನ್ನಾರ ಎಂದು ಆರೋಪಿಸಿದರು.
ದ್ವಿತೀಯ ಪಿಯುಸಿಯ ಮರು ಪರೀಕ್ಷೆಯ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಮಾತನಾಡಿದ ಅವರು, 2ನೇ ಬಾರಿ ಕೆಮೆಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ರಾಜ್ಯ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಬಣ್ಣಿಸಿದ ಅವರು, ಇದಕ್ಕೆ ಕಾರಣರಾದವರನ್ನು ಅಮಾನತು ಮಾಡುವುದಲ್ಲ, ಬದಲಾಗಿ ಅವರನ್ನು ಜೈಲಿಗಟ್ಟಬೇಕು ಅಥವಾ ಕೆಲಸದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಯುವಜನತಾದಳ ರಾಜ್ಯ ಉಪಾಧ್ಯಕ್ಷ ಅಶ್ವಿನ್ ಪಿರೇರಾ, ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ, ಮುನೀರ್ ಮುಕ್ಕಚ್ಚೇರಿ, ಜೆಡಿಎಸ್ ನಾಯಕರಾದ ಎಸ್.ಪಿ.ಚಂಗಪ್ಪ, ರಾಮ್ ಗಣೇಶ್, ರತ್ನಾಕರ ಸುವರ್ಣ, ರಹೀಂ, ವಸಂತ ಪೂಜಾರಿ, ಗೋಪಾಲಕೃಷ್ಣ ಅತ್ತಾವರ,ಮುನೀರ್ ಮುಕ್ಕಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.