ಮಂಗಳೂರು,ಏ.01: ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅವರು ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಇಂದು ನಗರದ ಪ್ರಭಾತ್ ಥಿಯೇಟರ್ ಜೊತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ 13 ಥಿಯೇಟರ್ಗಳಲ್ಲಿ ಬಿಡುಗಡೆಗೊಂಡಿತು.
ಪ್ರಭಾತ್ ಥಿಯೇಟರ್ನಲ್ಲಿ ದೀಪ ಬೆಳಗಿಸುವ ಮೂಲಕ ಚಲನ ಚಿತ್ರವನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆ ಸಮಾರಂಭದಲ್ಲಿ ಜಯಕಿರಣ ಪತ್ರಿಕೆಯ ಮಾಲಕ ಪ್ರಕಾಶ್ ಪಾಂಡೇಶ್ವರ, ಎಕ್ಕಸಕ್ಕ ತುಳು ಚಿತ್ರ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ಸೂಂಬೆ ತುಳು ಚಿತ್ರ ನಿರ್ಮಾಪಕ ಆಶ್ವಿತ್ ಕೊಟ್ಟಾರಿ, ರಂಗಭೂಮಿಯ ಹಿರಿಯ ಕಲಾವಿದ ತಮ್ಮ ಲಕ್ಷ್ಮಣ್, ಖ್ಯಾತ ವೈದ್ಯ ಡಾ. ರಾಜಶೇಖರ ಹೊಂಗರಕಿ, ಉದ್ಯಮಿ ಪ್ರಕಾಶ್ ಭಂಡಾರಿ, ನಿರ್ದೇಶಕ ಪ್ರಜ್ವಲ್ ಕುಮಾರ್, ನಿರ್ಮಾಪಕ ಶ್ರೀನಿವಾಸ ಉಜಿರೆ, ಸಹ ನಿರ್ಮಾಪಕಿ ಪ್ರಭಾ ಶ್ರೀನಿವಾಸ್, ನಾಯಕ ನಟ ವಿ.ಜೆ ವಿನೀತ್, ನಾಯಕಿ ಶ್ರುತಿ ಕೋಟ್ಯಾನ್ ಹಾಗೂ ಇತರ ಕಲಾವಿದರು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.
ತುಳು ಚಲನ ಚಿತ್ರ ಇಂದು ೪೬ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇಂದು ಬಿಡುಗಡೆಗೊಂಡಿರುವ ರಂಬಾರೂಟಿ ಚಿತ್ರ 46ನೇ ವರ್ಷದ ಮೊದಲ ಚಿತ್ರವಾಗಿ ಹೊರಬಂದಿದೆ. ಈ ಚಿತ್ರದಲ್ಲಿ ಹೊಸಬರೇ ಇದ್ದರು ಅವರ ಪ್ರತಿಭೆ ಇನ್ನಷ್ಟು ಪ್ರಕಾಶಮಾನವಾಗಲಿ ಎಂದು ರಂಗಭೂಮಿಯ ಹಿರಿಯ ಕಲಾವಿದ ತಮ್ಮ ಲಕ್ಷ್ಮಣ್ ಹೇಳಿದರು.
ಏಪ್ರಿಲ್ ತಿಂಗಳು ತುಳುವರಿಗೆ ಹೊಸ ವರ್ಷ, ಈ ತಿಂಗಳ ಆರಂಭದಲ್ಲಿ ಬಿಡುಗಡೆಗೊಂಡ ತುಳುಚಿತ್ರವನ್ನು ತುಳುವರು ಪ್ರೋತ್ಸಹಿಸಲೇಬೇಕು. ಚಿತ್ರದಲ್ಲಿ ದುಡಿದ ಎಲ್ಲಾ ಹೊಸ ಕಲಾವಿದರೂ ಮುಂದೆ ಯಶಸ್ವೀ ಕಲಾವಿದರಾಗಲಿ ಎಂದು ಎಕ್ಕಸಕ್ಕ ತುಳು ಚಿತ್ರ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ಹಾರೈಸಿದರು.
ರಂಬಾರೂಟಿ ಚಿತ್ರದ ನಾಯಕ ನಟ ವಿ.ಜೆ ವಿನೀತ್, ಹೊಸ ಯುವಕರು ಮಾಡಿದ ಹೊಸ ಪ್ರಯತ್ನವನ್ನು ತುಳುವರು ಪ್ರೋತ್ಸಾಹಿಸಿ, ಯಶಸ್ವಿಗೋಳಿಸಬೇಕೆಂದು ವಿಂತಿಸಿದರು.
ನಿರ್ಮಾಪಕ ಶ್ರೀನಿವಾಸ ಉಜಿರೆ ಮಾತನಾಡಿ ಚಿತ್ರದ ಸೋಲು ಗೆಲುವು ಪ್ರೇಕ್ಷಕರ ಕೈಯಲ್ಲಿದೆ, ಹೊಸಬರ ಪ್ರಯತ್ನವನ್ನು ಬೆನ್ನು ತಟ್ಟಿ ಚಿತ್ರವನ್ನು ಗಲ್ಲಿಸಬೇಕೆಂದು ವಿನಂತಿಸಿದರು.
ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅತಿಥಿಗಳನ್ನು ಸ್ವಾಗತಿಸಿದರು. ನಾಯಕ ನಟ ವಿ.ಜೆ ವಿನೀತ್ ಧನ್ಯವಾದ ವಿತ್ತರು.
ಏಕ ಕಾಲದಲ್ಲಿ 13 ಥಿಯೇಟರ್ನಲ್ಲಿ ಬಿಡುಗಡೆ;
ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ಪ್ರಕಾಶ್ ಕಾಬೆಟ್ಟು, ಶ್ರೀನಿವಾಸ್ ಉಜಿರೆ ಚಿತ್ರದ ನಿರ್ಮಾಣ ಮಾಡಿದ್ದಾರೆ. ಮಂಗಳೂರಿನ ಪ್ರಭಾತ್, ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐಯೋನೆಕ್ಸ್, ಕಾರ್ಕಳದಲ್ಲಿ ರಾಧಿಕ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುರತ್ಕಲ್ ನಲ್ಲಿ ನಟರಾಜ್, ಬಿಸಿ ರೋಡಿನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಸುಳ್ಯ ಸಂತೋಷ್ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಂಡಿದೆ.
ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅವರು ಶಾರ್ಟ್ಫಿಲ್ಮ್ ಆಲ್ಬಂ ಸಾಂಗ್, ಜಾಗೃತಿ ಚಿತ್ರ ಟೆಲಿಫಿಲ್ಮ್ಗಳಲ್ಲಿ ತೊಡಗಿಸಿಕೊಂಡು ಅನುಭವವಿರುವವರು. ನಾಯಕ ನಟ ವಿ.ಜೆ ವಿನೀತ್, ನಾಯಕಿಯರಾಗಿ ಶ್ರುತಿ ಕೋಟ್ಯಾನ್, ಚಿರಶ್ರೀ ಅಂಚನ್ ಅಬಿನಯಿಸಿದ್ದಾರೆ. ಪ್ರಮುಖ ಹಾಸ್ಯ ಕಲಾವಿದರಾಗಿ ಶಬರೀಶ್ ಕಬ್ಬಿನಾಲೆ. ಹರೀಶ್ ಶೆಟ್ಟಿ, ssಸನಿಲ್ ಗುರು, ಸಂದೇಶ್ ಶೆಟ್ಟಿ ಸೇರಿ ಒಟ್ಟು ೪೧ ಮಂದಿ ಹೊಸನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹರೀಶ್ ಶೆಟ್ಟಿ, ಶಾನಿಲ್ ಗುರು ಖಳನಟರು.
ಸಿನೆಮಾ 2014 ಆಗಸ್ಟ್ 16 ರಂದು ಮಂಗಳೂರಿನ ಅತ್ತಾವರ ಉಮಾಮಹೇಶ್ವರ ದೇವಸ್ಥಾನದಲ್ಲಿ ಶುಭಾರಂಭ ಗೊಂಡು ವಾರಾಂತ್ಯಗಳ ಶೆಡ್ಯೂಲ್ ಮಾಡಿಕೊಂಡು 9 ತಿಂಗಳ ಚಿತ್ರೀಕರಣ ಹಾಗೂ 3 ತಿಂಗಳ ಪೋಸ್ಟ್ ಪ್ರೊಡಕ್ಷನ್ನಲ್ಲಿ ಚಿತ್ರ ಪೂರ್ಣಗೊಂಡಿದೆ.
ಲಾಯ್ ವೆಲೆನ್ ಟಿನ್ ಸಲ್ಡಾನ ಸಂಗೀತ ನೀಡಿದ್ದಾರೆ. ಬಲ..ಬಲ… ಗೊಬ್ಬುಗಾ ನಮ ಲಗೋರಿ, ಎಂಚಿ ಸಾವ್ಯ ಸಾಂಗ್ ಈಗಾಗಲೇ ಹಿಟ್ ಹಾಡುಗಳ ಸಾಲಿನಲ್ಲಿ ಸೇರಿವೆ. ತುಳುವಿನಲ್ಲಿ ಸಾಮಾನ್ಯವಾಗಿ ಬಳಸುವ ಆಡುಮಾತಿಗೆ ಒಂದಷ್ಟು ಇಂಗ್ಲೀಷ್ ಪದಪುಂಜ ಬೆರೆಸಿ ರ್ಯಾಪ್ ಸಾಂಗ್ ಕಟ್ಟಲಾಗಿದೆ ಸೌಮ್ಯೇಶ್ ಬಂಗೇರರ ಸಾಹಿತ್ಯಕ್ಕೆ ಅವರದ್ದೇ ಧ್ವನಿಯಿದೆ ಇದು ಈ ಚಿತ್ರದ ವಿಶೇಷತೆ.
ರಾಪ್ ಮತ್ತು ರೀಮಿಕ್ಸ್ ಹಾಡುಗಳೊಂದಿಗೆ ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಆರು ಹಾಡುಗಳಿವೆ. ಹಾಡುಗಳ ಚಿತ್ರೀಕರಣವನ್ನು ಕರಾವಳಿ ತೀರದ ಹಲವೆಡೆಯಲ್ಲದೆ ಪ್ರಕೃತಿ ರಮಣೀಯ ಪಶ್ಚಿಮಘಟ್ಟದ ಕಳಸ, ಹೆಬ್ರಿ, ಕಾರ್ಕಳ ಸಮೀಪದ ಹಲವು ಸುಂದರ ತಾಣಗಳಲ್ಲಿ ನಡೆಸಲಾಗಿದೆ.
ಸುನಾದ್ ಗೌತಮ್ ಕಾರ್ಕಳ ಅವರು ಹಿನ್ನೆಲೆ ಸಂಗೀತವನ್ನು ನೀಡಿದರೆ. ಪ್ರಜ್ವಲ್ ಕುಮಾರ್ ಅತ್ತಾವರ ಅವರು ಚಿತ್ರಕ್ಕಾಗಿ ನಾಲ್ಕು ಹಾಡುಗಳನ್ನು ಬರೆದಿದ್ದು, ದೀಪಕ್ ಕೋಡಿಕಲ್, ಅವಿನಾಶ್ ಪೂಜಾರಿ, ಲಾಯ್ ವೆಲೆಂಟಿನ್ ಸಲ್ದಾನ, ಮೆಲ್ವಿನ್ ಆಂಟನಿ ಡಿಸೋಜ, ಸವಿತಾ ಪುತ್ತೂರು, ಶೆರ್ವಿನ್ ಅಮ್ಮನ್ನ ಧ್ವನಿ ನೀಡಿದ್ದಾರೆ. ಎಂಚಿ ಸಾವು ಯಾ ಎಂಬ ಹಾಡನ್ನು ಸೌಮೇಶ್ ಬಂಗೇರ ಅವರೇ ರಚಿಸಿ, ರಾಗ ಸಂಯೋಜಿಸಿ ಹಾಡಿದ್ದಾರೆ.
ಥಾಯ್ಲ್ಯಾಂಡಿನ ಮುಥಾಯ್ ಎಂಬ ಮಾರ್ಷಲ್ ಆರ್ಟ್ನ ಸೊಗಡು ಚಿತ್ರಕ್ಕೆ ಹೊಸ ಮೆರುಗು. ಕಾರ್ತಿಕ್ ಎಸ್. ಕಟೀಲ್ ಸ್ಟಂಟ್ನಲ್ಲಿ ಡ್ಯೂಪ್ ಇಲ್ಲದೇ ಫೈಟ್ ಚಿತ್ರೀಕರಣ ಮಾಡಲಾಗಿದೆ. ಮಾರ್ಷಲ್ ಆರ್ಟ್ನ ಪೂರ್ಣ ಪ್ರಮಾಣದ ಬಳಕೆ ತುಳು ಚಿತ್ರರಂಗಕ್ಕೆ ಹೊಸದು. ಮಾತ್ರವಲ್ಲ ಮಂಗಳೂರಿನ ಡಿಸಾರ್ಡ ರ್ ತಂಡದ ಬೈಕ್ ಸ್ಟಂಟ್ ಕಲಾವಿದನನ್ನು ಚಿತ್ರದಲ್ಲಿ ಪರಿಚಯಿಸಲಾಗಿದೆ. ಟೈಟಲ್ ತಕ್ಕಂತೆ ಪ್ರೇಕ್ಷಕನಿಗೆ ಮನರಂಜನೆ ಕ್ಲೈಮಾಕ್ಸ್ ನಲ್ಲಿ ಪೂರ್ಣ ಚಿತ್ರಣ ತೆರೆದಿಡುವ ಚಿತ್ರವಿದು. ಕಥಾವಸ್ತುವಿನ ಹಿಂದೆ ಪಾತ್ರಗಳಿಗೆ ಜೀವ ನೀಡಲಾಗಿದೆ ಹಾಸ್ಯದ ಲೇಪನವೂ ಇರುವುದರಿಂದ ತುಳು ಸಿನಿರಸಿಕರನ್ನು ಸೆಳೆದುಕೊಳ್ಳುವಲ್ಲಿ ಚಿತ್ರ ಯಶಸ್ಸು ಕಾಣಲಿದೆ.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ವಹಿಸಿದ್ದು, ಪ್ರಸಾದ್ ಕುಮಾರ್ ಕಾರ್ಕಳ ಚಿತ್ರಕ್ಕಾಗಿ ಕ್ಯಾಮರಾ ಕೆಲಸ ಮಾಡಿದ್ದಾರೆ. ಚಿತ್ರದ ಸಂಕಲನ ಕಿಶನ್ ನಾಯ್ಕ್ ನಡೆಸಿದ್ದು, ಹಾಡುಗಳ ಚಿತ್ರೀಕರಣ ಮತ್ತು ಸಂಕಲವನ್ನು ಪ್ರತೀಕ್ ಶೆಟ್ಟಿ ನಿರ್ವಹಿಸಿದ್ದಾರೆ.
ವಿವೇಕ್ ಗೌಡ ಸಹ ನಿರ್ದೇಶಕರಾಗಿ, ಪ್ರಭಾ ಶ್ರೀನಿವಾಸ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ, ನವೀನ್ ಶೆಟ್ಟಿ ಮತ್ತು ಅವಿನಾಶ್ ಪೂಜಾರಿ ನೃತ್ಯಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಕಾರ್ತಿಕ್ ಎಸ್ ಕಟೀಲ್ ಸಾಹಸ ದೃಶ್ಯಗಳ ಸಂಯೋಜಿಸಿದ್ದು, ಪ್ರಚಾರ ವಿನ್ಯಾಸ ಶ್ರೀಕಾಂತ್ ದೇವಾಡಿಗ ಅವರದು.
ಈಗಾಗಲೇ ಚಿತ್ರದ ಟ್ರೇಲರ್ ಹಾಡುಗಳು ಯುಟ್ಯೂಬ್ ನಲ್ಲಿ ದಾಖಲೆಯ ವಿಕ್ಷಕರನ್ನು ಹೊಂದಿದೆ. ಹೊಚ್ಚ ಹೊಸ ಕಾಮಿಡಿ ದೃಶ್ಯಗಳ ಸಹಿತ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ರಂಬಾರೂಟಿ ಸಿನಿಮಾ ತುಳು ಚಿತ್ರರಸಿಕರಿಗೆ ಹೊಸ ಅನುಭವ ನೀಡಲಿದೆ.