ಮಂಗಳೂರು, ಮಾ 31: ಕಳೆದ 2010 ಡಿ.16ರಂದು ಯೆಯ್ಯಾಡಿ ಸಮೀಪದ ಬಾರೆಬೈಲ್-ಕಂಪದಕೋಡಿ ಎಂಬಲ್ಲಿ ಮೂರುವರೆ ವರ್ಷದ ಮಗುವನ್ನು ವಾಮಾಚಾರಕ್ಕೆ ಬಳಸಿ ಕತ್ತು ಹಿಸುಕಿ ಕೊಲೆಗೈದಿದ್ದ ಪ್ರಕರಣದ ಆರೋಪಿಗಳ ಅಪರಾಧ ಸಾಬೀತಾಗಿದ್ದು, ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಸಾಧ್ಯತೆಯಿದೆ.
ಕಮಾಲಾಕ್ಷ ಪುರುಷ(80) ಹಾಗೂ ಚಂದ್ರಕಲಾ(30) ಅವರು ಮನೆ ಪಕ್ಕದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಬಿಹಾರ ಮೂಲದ ಫಿರನ್ ಕುಮಾರ್ ಝಾ ಹಾಗೂ ಅಂಜಲಿ ದೇವಿ ದಂಪತಿಯ ಪುತ್ರಿ ಪ್ರಿಯಾಂಕಾಳನ್ನು ಹತ್ಯೆಗೈದ ಅಪರಾಧಿಗಳಾಗಿದ್ದಾರೆ.
ಘಟನೆ ನಡೆದ ದಿನವೂ ಪ್ರಿಯಾಂಕಾಳನ್ನು ಚಂದ್ರಕಲಾ ಮನೆಗೆ ಕರೆದೊಯ್ದಿದ್ದಳು. ಬಳಿಕ ಮಗು ನಾಪತ್ತೆಯಾಗಿದ್ದು ಹುಡುಕಾಟ ನಡೆಸಿದಾಗ ಮನೆ ಪಕ್ಕದ ಅಡಿಕೆ ತೋಟದಲ್ಲಿ ಮಗುವಿನ ಶವ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ಮಗುವಿನ ಮೈಮೇಲೆ ಬಿಸಿ ನೀರು ಹಾಕಿದ್ದ ಗುರುತು ಮತ್ತು ಸುಟ್ಟ ಗಾಯ ಕಂಡುಬಂದಿತ್ತು. ಪ್ರಕರಣದ ತನಿಖೆ ನಡೆಸಿದ್ದ ಕದ್ರಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
18 ಜನ ಸಾಕ್ಷಿ ಹೇಳಿದ್ದು, ಮೂರು ಜನರು ವಿರುದ್ಧವಾಗಿ ಸಾಕ್ಷಿ ನುಡಿದಿದ್ದರು. ಕೃತ್ಯ ನಡೆದ ದಿನ ಚಂದ್ರಕಲಾ ಮನೆಯಲ್ಲಿ ಪೂಜೆ ನಡೆದಿದ್ದನ್ನು ನೋಡಿದ್ದ ಸ್ಥಳೀಯರು ಪ್ರಮುಖ ಸಾಕ್ಷಿಯಾಗಿದ್ದರು. ಆರೋಪಿಗಳು ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದರು. ನಿನ್ನೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಪರಾಧವು ಸಾಬೀತಾಗಿದ್ದು, ಇಂದು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ಮಗುವಿನ ಕೊಲೆ ಮಾಡಿದ್ದಕ್ಕಾಗಿ 302 ಕಲಂನಡಿ ಹಾಗೂ ಸಾಕ್ಷ್ಯ ನಾಶಕ್ಕಾಗಿ 201 ಕಲಂನಡಿಯಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತಿದ್ದು, ನ್ಯಾಯಪರ ವಕೀಲರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಂತೆಯೂ ಆಗ್ರಹಿಸಿದ್ದಾರೆ.