ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆಗೆ ನನ್ನ ವಿರೋಧ – ಪಕ್ಷಾತೀತ ಹೋರಾಟಕ್ಕೆ ನನ್ನ ಬೆಂಬಲ : ಶಾಸಕ ಜೆ..ಆರ್.ಲೋಬೊ

Pinterest LinkedIn Tumblr

Jr_lobo_protest_1

ಮಂಗಳೂರು,ಮಾ.17 : ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ಜಿಲ್ಲೆಗೆ ಮಾರಕವಾದ ಎತ್ತಿನಹೊಳೆ ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ಅವರು ಭೇಟಿ ನೀಡಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.

ನೀರಿನ ಲಭ್ಯತೆ ಇಲ್ಲದ ಈ ಯೋಜನೆಗೆ ನನ್ನ ವಿರೋಧವಿದೆ. ಸ್ಥಳೀಯ ಶಾಸಕನಾಗಿ ರಾಜಕಿಯೇತರವಾಗಿ ನಡೆಯುವ ಈ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾವು ಜಿಲ್ಲೆಯ ಒಂದು ಭಾಗವಾಗಿ ಚಿಕ್ಕ ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದೇವೆ ಇದನ್ನು ಕೇಳುವುದು ಸರಕಾರದ ಕರ್ತವ್ಯ. ನೇತ್ರಾವತಿ ಮತ್ತು ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು. ಇದನ್ನು ಜನರ ಜತೆಯಲ್ಲಿ ಹಂಚಿ ಜನರ ಸಂಶಯಗಳನ್ನು ನಿವಾರಣೆಗೊಳಿಸಬೇಕು.

Jr_lobo_protest_2 Jr_lobo_protest_3

ಒಂದು ವೇಳೆ ಸಾಕಷ್ಟು ನೀರಿನ ಲಭ್ಯತೆವಿದ್ದು, ಪಶ್ಚಿಮ ಘಟ್ಟಕ್ಕೆ ಹಾಗೂ ಕರಾವಳಿ ಪ್ರದೇಶಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮನದಟ್ಟಾದರೆ ಈ ಯೋಜನೆಗೆ ನನ್ನ ವಿರೋಧವಿಲ್ಲ. ಸಾಕಷ್ಟು ನೀರಿನ ಲಭ್ಯತೆ ಇಲ್ಲದೆ ಕರಾವಳಿ ಮತ್ತು ಪಶ್ಚಿಮ ಘಟ್ಟಕ್ಕೆ ತೊಂದರೆಯಾಗುವುದಾದರೆ ಈ ಭಾಗದ ಜನಸಾಮಾನ್ಯರ ಹಾಗೂ ಪಕ್ಷಾತೀತ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.

ಬೆಂಗಳೂರು ಮತ್ತು ಕೋಲಾರ, ಚಿಕ್ಕಬಳ್ಳಾಪುರ ಪ್ರದೇಶಗಳಿಗೆ ಪರ್‍ಯಾಯ ನೀರಿನ ವ್ಯವಸ್ಥೆಗೆ ಶರಾವತಿ ಯೋಜನೆಯಿಂದ ವಿದ್ಯುತ್ ಉತ್ಪಾದನೆಯ ನಂತರ ಕೆಳಗೆ ಹರಿದು ಹೋಗುವಂತಹ ನೀರಿನ ಒಂದು ಭಾಗವನ್ನು ಬಯಲು ಸೀಮೆ ಮತ್ತು ಬೆಂಗಳೂರಿಗೆ ತರಲು ಸರಕಾರ ಯೋಜನೆ ರೂಪಿಸಬೇಕು. ಈ ಬಗ್ಗೆ ಸರಕಾರದ ಗಮನ ಸೆಳೆಯಲು ನಾನು ಪ್ರಯತ್ನಿಸುತ್ತೇನೆ. ನೇತ್ರಾವತಿ ನದಿ ಪ್ರಾಧಿಕಾರ ಬೇಡಿಕೆಗೆ ನಾನು ಸ್ಪಂದಿಸುತ್ತೇನೆ ಹಾಗೂ ಸಮಗ್ರ ಕರಾವಳಿ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಲೋಬೋ ಹೇಳಿದರು.

Write A Comment