ಕುಂದಾಪುರ: ಲಾರಿಗಳೆರಡರ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಲಾರಿ ಚಾಲಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ನಾವುಂದ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಲಾರಿ ಚಾಲಕ ಕೇರಳದ ಕ್ಯಾಲಿಕಟ್ ನಿವಾಸಿ ಮಹಮ್ಮದ್ಅಫ್ಜಲ್(35) ಎಂಬವರು ಸ್ಥಳದಲ್ಲೇ ಸಾವಪ್ಪಿದ ದುರ್ದೈವಿ.
ಘಟನೆ ವಿವರ: ಬೈಂದೂರು ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ಕಬ್ಬಿಣದ ಸರಳು ಸಾಗಣೆಯ ಲಾರಿ ಹಾಗೂ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಸಾಗುತ್ತಿದ್ದ ಔಷಧಿ ವಸ್ತುಗಳ ಸಾಗಣಿಕೆ ಲಾರಿ ನಡುವೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದೆ. ಅಪಘಾತದ ತೀಚ್ರತೆಗೆ ಎರಡೂ ಲಾರಿಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಔಷಧಿ ಸಾಗಣಿಕೆ ವಾಹನದ ಚಾಲಕ ಮೊಹಮ್ಮದ್ ಅಫ್ಜಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಇನ್ನೊಂದು ಲಾರಿಯ ಚಾಲಕ ಹಾಗೂ ಕ್ಲೀನರ್ ಕೂಡ ಅಪಘಾತದಿಂದಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.
ಮುಂಜಾನೆ ವೇಳೆ ಈ ಭೀಕರ ಅಪಘಾತ ಸಂಭವಿಸಿದ್ದು ಔಷಧಿ ಸಾಗಣಿಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜುಗೊಂದ ಪರಿಣಾಮ ಮೃತ ಚಾಲಕನ ಮೃತದೇಹವನ್ನು ಹೊರತೆಗೆಯುವುದು ಕಷ್ಟವಾಗಿತ್ತು. ಸ್ಥಳಿಯರು ಹಾಗೂ 24/7 ಹೆಲ್ಪ್ಲೈನ್ ನವರು ಸತತ ಪರಿಶ್ರಮದಿಂದ ಮೃತದೇಹ ಹೊರತೆಗೆದಿದ್ದಲ್ಲದೇ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ತೊಡಗಿದ್ದರು.
ಬೈಂದೂರು ಪೊಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.