
ನವದೆಹಲಿ,ಮಾ.11: ವಿದೇಶಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ವಿಚಾರ ಸಂಕಿರಣ, ಯೋಗ ತರಬೇತಿ ಹಾಗೂ ಹರಿದ್ವಾರ, ಋಷಿಕೇಶ ಐತಿಹಾಸಿಕ ಸ್ಥಳಗಳಿಗೆ ಪ್ರವಾಸವನ್ನು ಇತ್ತೀಚೆಗೆ ಹಿಂದೂ ಫೌಂಡೇಷನ್ ನೇತೃತ್ವದಲ್ಲಿ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಮತ್ತು ಪತಾಂಜಲಿ ಯೋಗಪೀಠದ ಸಹಭಾಗಿತ್ವದಲ್ಲಿ 5 ದಿವಸಗಳ ಹಮ್ಮಿಕೊಂಡಿತ್ತು.
ಸುಮಾರು 30 ರಾಷ್ಟ್ರಗಳ 200 ವಿದೇಶಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಪ್ರವಾಸದಲ್ಲಿ ರಾಯಭಾರಿ ಕಚೇರಿ, ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ನಾಯಕರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ವಿಶೇಷ ಆಹ್ವಾನಿತರಾಗಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಆರ್ಕಿಟೆಕ್ಟ್ ಡಾ, ಹರ್ಷಕುಮಾರ ರೈ ಮಾಡಾವು, ಪತಾಂಜಲಿ ಯೋಗಪೀಠದ ಬಾಬಾ ರಾಮ್ದೇವ್ ಅವರನ್ನು ಭೇಟಿ ಮಾಡಿ ಪತಾಂಜಲಿ ಸಂಸ್ಥೆಯ ಆರ್ಯುವೇದ ಮತ್ತು ಸ್ವದೇಶಿ ಉತ್ಪನ್ನಗಳು ದೇಶಿಯ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಮಾತ್ರವಲ್ಲದೇ ಪತಾಂಜಲಿಯಿಂದ ಅಡಿಕೆ ಉತ್ಪನ್ನಗಳ ಬಗ್ಗೆ ಸಂಶೋಧನಾ ಕೇಂದ್ರ ಹಾಗೂ ತಯಾರಿಕಾ ಘಟಕವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಮನವಿಪತ್ರ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್, ಋಷಿಕೇಶದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಮಾತನಾಡಿ, ವಿದೇಶಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದ ರಾಷ್ಟ್ರಪತಿಯವರ ಮಾಜಿ ಭದ್ರತಾ ಸಲಹೆಗಾರ ಹಾಗೂ ಹಿಂದೂ ಹೆರಿಟೇಜ್ ಫೌಂಡೇಷನ್ನ ಉಪಾಧ್ಯಕ್ಷ ಕ್ಯಾಪ್ಟನ್ ಆಶೋಕ್ ಕಿಣಿಯವರನ್ನು ಅಭಿನಂದಿಸಿದರು.