ಮಂಗಳೂರು, ಮಾ.10: ಕೇಂದ್ರ ಬಜೆಟ್ ನಲ್ಲಿ ಚಿನ್ನದ ಆಭರಣಗಳಿಗೆ ಅಬಕಾರಿ ಸುಂಕ ಮತ್ತು ಸೇವಾ ಶುಲ್ಕವನ್ನು ವಿಧಿಸಿರುವುದನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ಆಭರಣ ಮಳಿಗೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರೂ ಕೇಂದ್ರ ಸರ್ಕಾರ ಪ್ರತಿಭಟನೆಗೆ ಮಣಿಯದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ ದ.ಕ.ಜಿಲ್ಲಾ ಸ್ವರ್ಣ ವ್ಯಾಪಾರಿ ಸಂಘದ ವತಿಯಿಂದ ಪ್ರತಿಭಟನಾ ಜಾಥಾ ನಡೆಯಿತು.
ಈಗಾಗಲೇ ದೇಶಾದ್ಯಂತ ಆಭರಣ ಜುವೆಲ್ಲರ್ಸ್ ಬಂದ್ ನಡೆಸಲಾಗಿದ್ದು, ಕೇಂದ್ರ ಸರ್ಕಾರ ಪ್ರತಿಭಟನೆಗೆ ಮಣಿಯದ ಹಿನ್ನೆಲೆಯಲ್ಲಿ ಈ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಚಿನ್ನಾಭರಣಗಳಿಗೆ ವಿಧಿಸಿರುವ ಅಬಕಾರಿ ಸುಂಕ ಮತ್ತು ಸೇವಾ ಶುಲ್ಕವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಈ ಜಾಥದ ಮೂಲಕ ಒತ್ತಾಯಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ನಾಗರಾಜ ಪಾಲ್ಕೆ ತಿಳಿಸಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಶೇ.1 ಟಿ.ಸಿ.ಎಸ್. ಮತ್ತು ಶೇ.1 ಅಬಕಾರಿ ಶುಲ್ಕವನ್ನು ವಿಧಿಸಲಾಗಿದೆ. ಅಲ್ಲದೇ 2 ಲಕ್ಷ ರೂಪಾಯಿಗಳಿಂತ ಹೆಚ್ಚಿನ ಆಭರಣ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ, ವಜ್ರಾಭರಣ ಖರೀದಿಗೆ ಅಬಕಾರಿ ಸುಂಕ ಹೇರಲಾಗಿದೆ. ಇದರಿಂದ ಚಿನ್ನದ ವ್ಯಾಪಾರಿಗಳಿಗೆ ಮುಂದಿನ ದಿನಗಳಲ್ಲಿ ಬಹಳ ತೊಂದರೆಯಾಗುವುದು ಖಂಡಿತ.
ಹೊಸ ತೆರಿಗೆ ಕಾನೂನು ಖಂಡಿಸಿ ಗೋಲ್ಡ್ ಎಂಡ್ ಜ್ಯುವೆಲ್ಲರಿ ಫೆಡರೇಶನ್ ಮತ್ತು ಇಂಡಿಯನ್ ಬಿಲಿಯನ್ ಮತ್ತು ಜ್ಯುವೆಲ್ಲರ್ಸ್ ಎಸೋಸಿಯೇಶನ್ ಮಾರ್ಚ್ 2 ರಿಂದ ದೇಶದಾದ್ಯಂತ ಜುವೆಲ್ಲರಿ ಶಾಪ್ ಬಂದ್ ಗೆ ಕರೆ ನೀಡಿದ್ದರೂ, ಕೇಂದ್ರ ಸರಕಾರದಿಂದ ಯಾವೂದೇ ರೀತಿಯ ಸಕರಾತ್ಮಕ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನದ ವ್ಯಾಪಾರಿಗಳು ಬೀದಿಗಿಳಿಯಬೇಕಾಯಿತು ಎಂದು ಸಂಘದ ಪದಾಧಿಕಾರಿಗಳಲ್ಲಿ ಒಬ್ಬರಾದ ಮಂಜುನಾಥ ರೇವಣ್ಕರ್ ತಿಳಿಸಿದ್ದಾರೆ.
ದ.ಕ. ಸ್ವರ್ಣ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಶಾಂತ್ ಶೇಟ್, ಸದಸ್ಯ ಹರ್ಷ ಶೇಟ್, ಶ್ವೇತಾ ಜ್ಯುವೆಲ್ಲರ್ಸ್ ಮಾಲಕ ಆಶೋಕ್ ಶೇಟ್, ಗೋಲ್ಡ್ ಪ್ಯಾಲೇಸ್ನ ಪಾಲುದಾರರಾದ ಮಹಮ್ಮದ್ ಸೇರಿದಂತೆ ಜಿಲ್ಲೆಯ ವಿವಿಧ ಆಭರಣ ಮಳಿಗೆಗಳ ಮಾಲ್ಹಕರು, ವ್ಯಾಪಾರಿಗಳು, ಚಿನ್ನಾಭರಣ ಮಳಿಗೆಗಳ ನೌಕರರು ಈ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡಿದ್ದರು.