ಕುಂದಾಪುರ: ಬಾರ್ನಲ್ಲಿ ಕ್ಲೀನರ್ ಕೆಲಸಕ್ಕಿದ್ದ ಬಾಲಕಾರ್ಮಿಕನೋರ್ವವನನ್ನು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ತಲ್ಲೂರು-ಹಟ್ಟಿಯಂಗಡಿ ರಸ್ತೆಯ ಪಾರ್ಥಿಕಟ್ಟೆಯ ಸಮೀಪದ ನಿಸರ್ಗ ಬಾರ್ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ತಲ್ಲೂರು ಕೋಟೇಬಾಗಿಲು ಪರಿಸರದ ಪರಿಶಿಷ್ಟ ಪಂಗಡದ 13 ವರ್ಷ ಆಸುಪಾಸಿನ ಬಾಲಕನೇ ರಕ್ಷಿಸಲ್ಪಟ್ಟವನು. ಬಾಲಕ ಸದ್ಯ ಹಟ್ಟಿಯಂಗಡಿ ನಮ್ಮಭೂಮಿ ಸಂಸ್ಥೆಯಲ್ಲಿ ಪುನರ್ವಸತಿಯಲ್ಲಿದ್ದಾನೆ.
ಘಟನೆ ವಿವರ: ಪಾರ್ಥಿಕಟ್ಟೆ ನಿಸರ್ಗ ಬಾರ್&ರೆಸ್ಟೋರೆಂಟ್ನಲ್ಲಿ ಕೆಲವು ಮಕ್ಕಳು ಕೆಲಸಕ್ಕಿದ್ದು ಅವರೆಲ್ಲರೂ ದಲಿತ ಮಕ್ಕಳಾಗಿದ್ದು ಈ ಮಕ್ಕಳ್ಳ್ಯಾರು ಶಾಲೆಗೆ ತೆರಳದೇ ಬಾಲಕಾರ್ಮಿಕರಾಗಿದ್ದಾರೆಂದು ಇದರಿಂದ ಅವರ ಶೈಕ್ಷಣಿಕ ಜೀವನ ಹಾಳಾಗುತ್ತಿದೆಯೆಂಬ ಬಗ್ಗೆ ಸ್ಥಳಿಯ ಸಾರ್ವಜನಿಕರು ಹಲವು ಬಾರೀ ಸಂಬಂದಪಟ್ಟವರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಬುಧವಾರ ಉಡುಪಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಡುಪಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣೆ ಮತ್ತು ಕುಂದುಕೊರತೆ ಸಭೆಯಲ್ಲಿ ಕೂಡ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದ್ದು ತಕ್ಷಣವೇ ಸ್ಪಂದಿಸಿದ ಅವರು ಶೀಘ್ರ ಕ್ರಮಕ್ಕೆ ಇಲಾಖೆಗೆ ಸೂಚಿಸಿದ್ದರು.
ಜಿಲ್ಲಾಧಿಕಾರಿ ನಿರ್ದೇಶನದ ಅನ್ವಯ ಕುಂದಾಪುರ ತಾಲೂಕು ಕಾರ್ಮಿಕ ನಿರೀಕ್ಷಕ ಡಿ.ಎಸ್. ಸತ್ಯನಾರಾಯಣ, ಜಿಲ್ಲಾ ಬಾಲಕಾರ್ಮಿಕ ಯೋಜನ ಸಂಘದ ಯೋಜನ ನಿರ್ದೇಶಕ ಪ್ರಭಾಕರ್ ಆಚಾರ್ ನೇತೃತ್ವದಲ್ಲಿ ತಲ್ಲೂರು ಕ್ಲಸ್ಟರ್ ಸಿ.ಆರ್.ಪಿ. ಸುರೇಂದ್ರ ನಾಯ್ಕ್, ಹೆಮ್ಮಾಡಿ ಶಿಕ್ಷಣ ಸಂಯೋಜಕ ಚಂದ್ರ ನಾಯ್ಕ್ ಹಾಗೂ ಹಟ್ಟಿಯಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿವಾಕರ್ ಶಾನುಭಾಗ್ ಇವರುಗಳ ಜಂಟಿ ಕಾರ್ಯಾಚರಣೆಯಲ್ಲಿ ಗುರುವಾರ ಮಧ್ಯಾಹ್ನದ ಸುಮಾರಿಗೆ ಬಾರ್ ಮೇಲೆ ದಾಳಿ ನಡೆಸಿದ್ದು ಈ ವೇಳೆ ಬಾಲಕ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವುದು ರೆಡ್ ಹ್ಯಾಂಡ್ ಆಗಿ ಬೆಳಕಿಗೆ ಬಂದಿದೆ. ಕೂಡಲೇ ಅಧಿಕಾರಿಗಳು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ತಾನೂ ಮೂರ್ನಾಲ್ಕು ತಿಂಗಳಿನಿಂದ ಇಲ್ಲಿ ಕೆಲಸ ಮಾಡಿತ್ತಿರುವುದಾಗಿ ತಿಳಿಸಿದ್ದ, ಶಾಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸುವಾಗ 14 ವರ್ಷ ಪ್ರಾಯಕ್ಕಿಂತ ಕಿರಿಯವನಾಗಿದ್ದು ಈತ ಬಾಲಕ ಎಂಬುದು ದೃಢಪಟ್ಟಿದೆ.
ಬಾಲಕನು 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ತಂದೆತಾಯಿಯು ಕೂಲಿ ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ಎಂಟನೇ ತರಗತಿಗೆ ಕೆಲವೇ ಕೆಲವು ದಿನ ಹೋಗಿದ್ದ ಬಾಲಕ ತರುವಾಯ ಶಾಲೆ ಬಿಟ್ಟು ಇಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ. ಮನೆಯ ಕಷ್ಟವೇ ತನ್ನ ದುಡಿಮೆಗೆ ಕಾರಣ ಎನ್ನುತ್ತಾನೆ ಬಾಲಕ.
ಬಾರ್ ಮಾಲೀಕರ ವಿರುದ್ಧವೂ ಕ್ರಮ
ದಾಖಲಾತಿ ಪರಿಶೀಲನೆ ವೇಳೆ ಬಾರಿನಲ್ಲಿ ಕೆಲಸಕ್ಕಿದ್ದ ಬಾಲಕ 14 ವರ್ಷ ಪ್ರಾಯದೊಳಗಿನವನಾಗಿದ್ದು ಈತ ಬಾಲಕಾರ್ಮಿಕ. ಸದ್ಯ ಆತನನ್ನು ರಕ್ಷಿಸಿ ಪುನರ್ವಸತಿಗಾಗಿ ಹಟ್ಟಿಯಂಗಡಿಯ ನಮ್ಮಭೂಮಿ ಸಂಸ್ಥೆಗೆ ಕಳುಹಿಸಲಾಗಿದೆ. ಇನ್ನು ಬಾಲಕಾರ್ಮಿಕನನ್ನು ಕೆಲಸಕ್ಕಿಟ್ಟುಕೊಂಡ ಬಗ್ಗೆ ಬಾರ್ ಮಾಲೀಕರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮೊದಲು ಬಾರ್ ಮಾಲೀಕರು 20 ಸಾವಿರ ‘ಕಾರ್ಫಸ್ ಪಂಡ್’ ಕಟ್ಟಬೇಕು. ಬಳಿಕ ಮಾಲೀಕರಿಗೆ ಕೋರ್ಟ ಇನ್ನಷ್ಟು ದಂಡ ವಿಧಿಸುವ ಪ್ರಕ್ರಿಯೆಗಳು ಇದೆ ಎಂದು ಕುಂದಾಪುರ ತಾಲೂಕು ಕಾರ್ಮಿಕ ನಿರೀಕ್ಷಕ ಡಿ.ಎಸ್. ಸತ್ಯನಾರಾಯಣ ಹೇಳಿದ್ದಾರೆ.