ಮಂಗಳೂರು,ಮಾ.10: ಸುನೀತಾ ಕ್ರಿಯೇಷನ್ಸ್ ಬೆಂಗಳೂರು, ಬ್ಯಾನರ್ ನಲ್ಲಿ ತಯಾರಾದ “ರಂಗೋಳು” ಕನ್ನಡ ಚಲನಚಿತ್ರ ಮಾರ್ಚ್ 11ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನ ಸುಚಿತ್ರ, ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಬಿ.ಸಿ ರೋಡ್ ನ ನಕ್ಷತ್ರ, ಉಡುಪಿಯ ಕಲ್ಪನಾ, ಮಣಿಪಾಲದ ಐನಾಕ್ಸ್, ಪುತ್ತೂರಿನ ಅರುಣಾ ಚಿತ್ರಮಂದಿರಗಳಲ್ಲಿ ” ರಂಗೋಳು” ಏಕಕಾಲದಲ್ಲಿ ಪ್ರದರ್ಶನ ಕಾಣಲಿದೆ ಎಂದು ಸಾಹಿತಿ ಹಾಗೂ ನಟ ಡಾ.ನಾ.ದಾ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಕರಾವಳಿಯ ರಂಗಭೂಮಿ ಕಲಾವಿದರು ಮತ್ತು ಸ್ಥಳೀಯ ತಂತ್ರಜ್ಞರನ್ನೊಳಗೊಂಡ ” ರಂಗೋಳು” ಚಿತ್ರದಲ್ಲಿ ಖ್ಯಾತ ನಟಿ ಪದ್ಮಜಾ ರಾವ್ ಮತ್ತು ಹೆಸರಾಂತ ಕಲಾವಿದರಾದ ದಿನೇಶ್ ಅತ್ತಾವರ್, ಚೇತನ್ ರೈ ಮಾಣಿ, ಅರವಿಂದ ಬೋಳಾರ್, ಮಾನಸಿ ಸುದೀರ್, ಮಾ.ಮಯೂರ್, ಡಾ. ನಾ.ದಾ.ಶೆಟ್ಟಿ, ಪ್ರಕಾಶ್ ಭಾರೆ, ಮನೋಜ್ ಪುತ್ತೂರು, ಅಭಿನಯಿಸಿರುವರು,
ಪರಿಕಲ್ಪನೆ ಮತ್ತು ನಿರ್ದೇಶನ ಎ.ವಿ ಜಯರಾಜ್, ಸಂಭಾಷಣೆ , ಸಹನಿರ್ದೇಶನ ಜಗನ್ ಪವಾರ್, ಚಿತ್ರ ಕಥೆ ದಯಾಹರಿ, ಮಹಾಬಲ ಹೊಳ್ಳ ಮಂಗಳೂರುರವರ ಛಾಯಾಗ್ರಹಣ, ಸುಬ್ರಹ್ಮಣ್ಯ ಹೊಳ್ಳರವರ ಸಂಕಲನ, ದೇವಿಪ್ರಕಾಶ್ರವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಹಿರಿಯ ಸಂಗೀತ ನಿರ್ದೇಶಕರಾದ ಟಿ.ಜಿ ಗೋಪಾಲಕೃಷ್ಣರವರು ಸಂಗೀತ ನೀಡಿದ್ದಾರೆ ಎಂದರು.
ರಂಗದ ಮೇಲೆ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿ ಪ್ರಶಂಸೆ ಪಡೆವ ರಂಗ ಕಲಾವಿದನೊಬ್ಬನ ನೈಜ ಚಿತ್ರಣವನ್ನು ಬಿಂಬಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದು ಸಂಪೂರ್ಣವಾಗಿ ಕರಾವಳಿ ಭಾಗದಲ್ಲೇ ಚಿತ್ರೀಕರಣ ನಡೆಸಿರುವುದು ವಿಶೇಷ ಎಂದು ನಾ.ದಾ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಸಹನಿರ್ದೇಶಕ ಜಗನ್ ಪವಾರ್, ನಟರಾದ ದಿನೇಶ್ ಅತ್ತಾವರ್, ಚೇತನ್ ರೈ ಮಾಣಿ, ಮಾ.ಮಯೂರು ಮುಂತಾದವರು ಉಪಸ್ಥಿತರಿದ್ದರು.
ಕಥೆಯ ಸಾರಂಶ…
ತನ್ನ ಗಂಡ ಕಲಾವಿದರಾಗಿ ಸಾಧಿಸಲಾಗದ್ದನ್ನು ತನ್ನ ಮಗ ಮಾಡಿ ತೋರಿಸಬೇಕೆಂದು ಛಲ ಹೊತ್ತು ಆತನನ್ನು ಮಡಕೆ ಮಾಡುವ ಮೂಲ ಕಸುಬಿನಿಂದ ದೂರವಿರಿಸಿ ಮುದ್ದಿನಿಂದ ಬೆಳೆಸುವ ಮೂಲಕ ಕುಟುಂಬ ಸಾಗಿಸುವಲ್ಲಿ ತಾನೇ ಮುಂದಾಗಿ ಆತನ ಒಳಿತಿಗಾಗಿ ಜೀವನ ತೇಯ್ದ ಅಮ್ಮ ಒಂದೆಡೆಯಾದರೆ, ಮುಗ್ದತೆ ಹೊತ್ತ ಮಗನಾಗಿ ತಂದೆಯಂತೆ ಕಲಾವಿದನಾಗಬೇಕೆಂಬ ತನ್ನ ಅಮ್ಮನ ಆಸೆಯನ್ನು ನೆರವೇರಿಸಲು ಮುಂದಾಗಿ ಹೆಣ್ಣು ಪಾತ್ರಗಳಲ್ಲಷ್ಟೇ ಅಭಿನಯಿಸಿ, ವೈಯಾರ, ನಾಚಿಕೆ ತುಂಬಿದ ಹೆಣ್ಣಿನ ಸ್ವಬಾವವನ್ನು ಮೈಗೂಡಿಸಿಕೊಂಡು, ಜೀವನದುದ್ದಕ್ಕೂ ಎಲ್ಲರಿಂದಲೂ ಅವಮಾನಕ್ಕೊಳಗಾಗಿ, ರಂಗಭೂಮಿಯನ್ನು ತೊರೆದು ತನ್ನ ಮೂಲ ಕಸುಬಿಗೆ ಶರಣಾದಾಗ ದುಡಿಮೆಯ ಬಹುಪಾಲನ್ನು ಹೊತ್ತುಕೊಂಡು ಕುಟುಂಬದಲ್ಲಿ ವಿರಸ ಸೃಷ್ಠಿಯಾದಾಗಲೆಲ್ಲ ತನ್ನ ಪರವಾಗಿ ನಿಂತು ಪ್ರೀತಿ, ಮಮತೆಯನ್ನು ಸ್ಪುರಿಸಿದ ಅಮ್ಮನ ಒತ್ತಾಸೆ ಜೊತೆಗೆ ತನ್ನ ಮಡದಿಯೊಂದಿಗೆ ಸಂಬಂದಬೆಳೆಸಿದ ಕಲಾವಿದ ಮಿತ್ರನನ್ನು ವಿರುದ್ಧ ಪಾತ್ರದ ಅಭಿನಯದ ಮೂಲಕ ಮುಗಿಸಿಬಿಡಲು ಇದೇ ಸರಿಯಾದ ಸಮಯವೆಂದು ಮತ್ತೆ ರಂಗಬೂಮಿಗೆ ಮರಳಿದರೂ ಕಾರ್ಯಸಾಧಿಸಲಾಗದ, ಬಾವುಕರೆನಿಸಿಕೊಂಡ ಕಲಾವಿದರುಗಳಿಂದ ಮನುಷ್ಯತ್ವ ವಿರಿದ ಕಾರ್ಯಸಲ್ಲದೆಂದು ಅರಿತು, ಪೂರ್ಣಪ್ರಮಾಣದ ಹೆಣ್ಣಾಗಿ ಜೀವಿಸುವುದೇ ಸರಿಯೆಂದು ಮೂರನೇ ಲಿಂಗದಾರಿಯಾಗಿ ಮಾರ್ಪಾಡಾಗುವ ಮೂಲಕ ……..ಅಲ್ಲೂ ಒಂದು ಬದುಕಿದೆಯೆಂದು ಸಾಗುವ ಕಲಾವಿದನ ಬದುಕಿನ ಬಾವನಾತ್ಮಕ ಚಿತ್ರಣವೇ ರಂಗೋಳು…
:ಕಥೆ/ ನಿರ್ದೇಶನ : ಎ.ವಿ. ಜಯರಾಜ್