ಮಂಗಳೂರು,ಮಾ.07: ದ.ಕ ಜಿಲ್ಲೆಯಲ್ಲಿ ಸುಮಾರು 15 ಕೋ. ರೂ ವೆಚ್ಚದಲ್ಲಿ ಮತ್ಸಾಲಯ ನಿರ್ಮಾಣದ ಬಗ್ಗೆ ಚಿಂತನೆಯಿದ್ದು , ಇದರ ಕುರಿತು ಮುಖ್ಯಮಂತ್ರಿಯವರ ಜೊತೆ ನಡೆಯುವ ಬಜೆಟ್ ಸಂಬಂಧಿತ ಚರ್ಚೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಮೀನುಗಾರಿಕಾ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ. ಅಭಯಚಂದ್ರ ಹೇಳಿದರು.
ಅವರು ರವಿವಾರ ಕರ್ನಾಟಕ ಪಶು ವೈದ್ಯಕೀಯ , ಪಶು ಹಾಗೂ ಮೀಣುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯ, ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು, ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಇದರ ಸಂಯುಕ್ತ ಅಶ್ತಯದಲ್ಲಿ ನಗರದ ಡಾ. ಟಿ.ಎಂ.ಎ. ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಆಯೋಜಿಸಿದ್ದ 3 ದಿನಗಳ ರಾಷ್ಟ್ರೀಯ ಮತ್ಸಾ ಮೇಳದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಅಳಿವಿನಂಚಿನಲ್ಲಿರುವ ಮೀನು ಸಂತತಿಗಳ ಸಂರಕ್ಷಣೆ ಹಾಗೂ ವೈವಿಧ್ಯಮಯ ತಳಿ ಪರಿಚಯಿಸುವ ಉದ್ದೇಶದಿಂದ ಪಿಲಿಕುಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮತ್ಸಾಲಯಕ್ಕೆ ಈ ಸಾಲಿನಲ್ಲಿ ಗರಿಷ್ಠ ಅನುದಾನ ಲಭಿಸುವಂತೆ ಪ್ರಯತ್ನಿಸುವುದಾಗಿ ಮೀನುಗಾರಿಕಾ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ. ಅಭಯಚಂದ್ರ ಹೇಳಿದರು.
ಪ್ರಮುಖ ಉದ್ಯಮ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಬಿ. ರಮಾನಾಥ ರೈ, ಕರಾವಳಿ ಭಾಗದಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮವಾಗಿ ಬೆಳೆದಿದೆ. ಮೀನುಗಾರಿಕೆ ಜೆಟ್ಟಿ, ಬಂದರು ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಸರಕಾರ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡುತ್ತಾ ಬಂದಿದೆ ಎಂದರು.
ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿ.ವಿ. ಕುಲಪತಿ ಡಾ. ಸಿ. ರೇಣುಕಾ ಪ್ರಸಾದ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಲ್ಲಾ ಪಂಚಾಯತ್ ಸಿಇಒ ಶ್ರೀವಿದ್ಯಾ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಿರಿಯಣ್ಣ, ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ, ಮೀನುಗಾರಿಕಾ ಇಲಾಖೆ ನಿರ್ದೇಶಕ ಎಚ್.ಎಸ್. ವೀರಪ್ಪ ಗೌಡ ಅತಿಥಿಯಾಗಿದ್ದರು.