ಮಂಗಳೂರು : ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದ ವತಿಯಿಂದ ವಿವಿಧ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ ಕಾರ್ಯಕ್ರಮ ಸೋಮವಾರ ನಗರದ ಪುರಭವನದಲ್ಲಿ ನಡೆಯಿತು. ವಿವಿಧ ಕಾರ್ಯಕ್ರಮಗಳಡಿ 24.10%, 7.5% ಮತ್ತು 3% ಮೀಸಲು ನಿಧಿಯಡಿ ಸುಮಾರು 1250 ಫಲಾನುಭವಿಗಳಿಗೆ 68,30,400 ಮೊತ್ತದ ವಿವಿಧ ಸವಲತ್ತುಗಳನ್ನು ಈ ಸಂದರ್ಭದಲ್ಲಿ ಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಸುಮಾರು 1250 ಕ್ಕೂ ಅಧಿಕ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುವುದು. ಐದು ಮಂದಿ ವಿಕಲಚೇತನರಿಗೆ 248800 ರೂ. ವೆಚ್ಚದ ಶ್ರವಣ ಸಾಧನ, 504 ಮಂದಿಗೆ 3024000 ರೂ.ಗಳ ಪೋಷಣಾ ಭತ್ಯೆ, 25 ಮಂದಿಗೆ 160000 ರೂ.ಗಳ ವ್ಯಾಸಂಗೇತರ ಚಟುವಟಿಕೆ, 3 ವಿಕಲಚೇತನ ಸಂಸ್ಥೆಗೆ 45,000 ರೂ. ಸಹಾಯದನ, 3 ಮಂದಿಗೆ ಸ್ವ ಉದ್ಯೋಗಕ್ಕಾಗಿ 150,000ರೂ., 3,08,000 ರೂ.ಗಳಲ್ಲಿ 4 ಮಂದಿಗೆ ಹೆಚ್ಚುವರಿ ಎರಡು ಚಕ್ರಗಳುಳ್ಳ ದ್ವಿಚಕ್ರ ಸೌಲಭ್ಯ, 706 ಮಂದಿಗೆ ಶೇ. 24.10 ಮತ್ತು ಶೇ. 7.25 ಮೀಸಲು ನಿಧಿಯಡಿ ಅಡುಗೆ ಅನಿಲ ಸಂಪರ್ಕ 28,94600 ರೂ. ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಮಾತನಾಡಿ, ಮಹಾನಗರ ಪಾಲಿಕೆಯ ಅಗತ್ಯ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ನೀರು ಸರಬರಾಜು, ದಾರಿ ದೀಪ, ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ಇತ್ಯಾದಿಗಳ ಅನುಷ್ಠಾನದ ಜತೆಗೆ ನಗರದ ಬಡ ಜನರ ಹಾಗೂ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನಗರ ಬಡತನ ನಿರ್ಮೂಲನಾ ಕೋಶದಡಿ ಅನುಷ್ಠಾನಗೊಳಿಸುವ ಕಾರ್ಯಕ್ರಮ ಇದಾಗಿದ್ದು, ಸಮಾಜದ ಬಡವರ್ಗದ 1250 ಫಲಾನುಭವಿಗಳಿಗೆ 68,30,000 ರೂ ಬೃಹತ್ ಮೊತ್ತದ ಸವಲತ್ತು ನೀಡುವ ಮೂಲಕ ನವೀಕರಣಗೊಂಡ ಪುರಭವನ ಸಾರ್ಥಕತೆಯಾಗಿದೆ ಎಂದು ಹೇಳಿದರು.
ಸಮಾಜದ ದುರ್ಬಲ ವರ್ಗದವರಿಗೆ ಸವಲತ್ತುಗಳು ಸಿಗುವ ಮೂಲಕ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಈ ಪ್ರತ್ಯೇಕ ಕೋಶದಡಿ ಶೇ. 24.10 ಯೋಜನೆ, ಶೇ. 7.25 ಯೋಜನೆ, ಶೇ.3 ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಸ್ವಸ್ಥ ಕುಟೀರ, ಕುಟೀರ ಜ್ಯೋತಿ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಮೊದಲಾದ ಮುಖ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಲೋಬೋ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಎ.ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮನಪಾ ಆಯುಕ್ತ ಡಾ. ಗೋಪಾಲಕೃಷ್ಣ, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಮಹಾಬಲ ಮಾರ್ಲ,ಮನಪಾ ಸದಸ್ಯರಾದ ಹರಿನಾಥ್, ಎ.ಸಿ.ವಿನಯ ರಾಜ್, ನವೀನ್ ಡಿ’ಸೋಜ, ಅಬ್ದುಲ್ ಲತೀಫ್, ಪ್ರಕಾಶ್ ಸಾಲ್ಯಾನ್, ದೀಪಕ್ ಪೂಜಾರಿ, ಕೇಶವ್ ಮರೋಳಿ ಹಾಗೂ ಮನಪಾ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಉಪಸ್ಥಿತರಿದ್ದರು.