ಮಂಗಳೂರು,ಮಾ.02: ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘವು 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಕಾಲೇಜಿನ ಹಿರಿಯ ವಿಧ್ಯಾರ್ಥಿಗಳ ಸಂಘದ ವಾರ್ಷೀಕೋತ್ಸವವನ್ನು ಇದೇ ಬರುವ ಮಾರ್ಚ್ 5ನೇ ಶನಿವಾರದಂದು ಅಪರಾಹ್ನ 3ರಿಂದ ಮಣ್ಣಗುಡ್ಡೆ – ಗಾಂಧಿನಗರದಲ್ಲಿರುವ ಕಾಲೇಜಿನ ಸಂಭಾಗಣದಲ್ಲಿ ಆಚರಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಕಲ್ಲಡ್ಕ ತಿಳಿಸಿದ್ದಾರೆ.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕಾರ್ಯಕ್ರಮದಲ್ಲಿ ನಗರದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾಲೇಜಿನ ನಿವೃತ್ತ ಶಾರೀರಿಕ ನಿರ್ದೇಶಕರಾದ ಶ್ರೀಯುತ ಪುರುಷೋತ್ತಮ ಪೂಜಾರಿಯವರನ್ನು ಸನ್ಮಾನಿಸಲಾಗುವುದು. ಜೊತೆಗೆ ಕೆಲವು ವಿಧ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಸಂಜೆ 6 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಲಿದೆ ಎಂದು ಹೇಳಿದರು.
ಸುಮಾರು 5 ವರ್ಷಗಳಿಂದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಪ್ರತಿನಿಧಿಸಿ ಸಂಘದ ಮೂಲಕ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತೇವೆ. ಮಾತ್ರವಲ್ಲದೇ ಇದು ಕಾಲೇಜಿನ ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ನೆರವಾಗುವ ಮೂಲಕ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ಸಂಘವಾಗಿದೆ.
ವ್ಯಕ್ತಿತ್ವ ವಿಕಸನ, ಸ್ಪರ್ದಾತ್ಮಕ ಪರೀಕ್ಷಾ ತಯಾರಿ, ನಾಯಕತ್ವ ತರಬೇತಿ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಡೆಸುತ್ತಾ ಮಕ್ಕಳ ಸಂರ್ಪೂಣ ಬೆಳೆವಣಿಗೆ ಸಹಕಾರಿಯಾಗಿ ಸಂಘ ಬೆಳೆಯುತ್ತಿದ್ದು ಮುಂದೆಯೂ ಕೂಡ ಸಂಘದ ಸೇವಾಕಾರ್ಯವನ್ನು ಮುಂದುವರಿಸುವತ್ತ ಗಮನ ನೀಡುತ್ತಿದ್ದೇವೆ.
ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ನಂದಗೋಪಾಲ್ ಶೆಣೈ ಇವರ ದೇಣಿಗೆಯಿಂದ ವರ್ಷಪ್ರತಿ ನಮ್ಮ ಸಂಘದ ವತಿಯಿಂದ ಅರ್ಹ ಬಡ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಈ ವರ್ಷ ಕೂಡ ಗುರುತಿಸಿದ ಕಾಲೇಜಿನ ವಿಧ್ಯಾರ್ಥಿಗಳಿಗೆ 1,80,000 ಸಹಾಯ ಧನ ವಿತರಿಸುತ್ತಿದ್ದೇವೆ ಎಂದು ದಿನೇಶ್ ಕಲ್ಲಡ್ಕ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ನಂದಗೋಪಾಲ ಶೆಣೈ ಹಾಗೂ ಸಹಕಾರ್ಯದರ್ಶಿ ವರದರಾಜ್ ಉಪಸ್ಥಿತರಿದ್ದರು.