ಮಂಗಳೂರು : ದೇಶ ಹಾಗೂ ರಾಜ್ಯದಲ್ಲಿ ನಡೆಯುವ ಯಾವೂದೇ ಘಟನೆಗಳು / ಪ್ರಕರಣಗಳ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಹೇಳಿಕೆಗಳನ್ನು ನೀಡುವ ಮೂಲಕ ಸದಾ ಪತ್ರಿಕೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಪತ್ರಿಕಾಗೋಷ್ಠಿಯನ್ನು ಮಂಗಳೂರಿನ ಪತ್ರಕರ್ತರು ಮೊದಲ ಸಲ ಬಹಿಷ್ಕರಿಸಿ ಹೊರನಡೆದ ಘಟನೆ ಶನಿವಾರ ನಡೆದಿದೆ.
ಪೂಅಜಾರಿಯವರು ಪ್ರತಿಸಲ ಪತ್ರಿಕಾಗೋಷ್ಠಿ ನಡೆಸಿದಾಗಲೂ ತಾವು ಮಾತನಾಡಿದ ಬಳಿಕ `ಎನಿ ಕ್ವೆಶ್ಚನ್’ ಎಂದು ಕೇಳುತ್ತಾರೆ. ಆದರೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅದಕ್ಕೆ ನಾನು ಆಗಲೇ ಉತ್ತರ ನೀಡಿದ್ದೇನೆ ಎಂದು ಹೇಳಿ, ನೆಕ್ಷ್ಟ್…ಎಂದು ಹೇಳುತ್ತಾರೆ. ಇನ್ನೊಬ್ಬರು ಪ್ರಶ್ನೆ ಕೇಳಿದಾಗ ಅದಕ್ಕೂ ಉತ್ತರ ನೀಡದೇ ತಮ್ಮ ಮಾತನ್ನು ಮುಂದುವರಿಸುತ್ತಾರೆ. ಈ ರೀತಿ ಪ್ರತೀ ಸಲ ನಡೆದಾಗಲೂ ಪತ್ರಕರ್ತರು ಶಾಂತಚಿತ್ತರಾಗಿ ಪೂಜಾರಿಯವರ ಮಾತನ್ನು ಆಲಿಸುತ್ತಾರೆ. ಇದು ಇಷ್ಟು ದಿನ ನಡೆದು ಬಂದ ಪೂಜಾರಿ ಪತ್ರಿಕಾಗೋಷ್ಠಿಯ ಶೈಲಿ.
ಆದರೆ ಮೊದಲ ಸಲ ಪೂಜಾರಿಯವರ ಉಡಾಫೆ ಉತ್ತರಕ್ಕೆ ಪತ್ರಿಕಾಗೋಷ್ಠಿಯನ್ನೇ ಬಹಿಷ್ಕರಿಸಿ ಹೊರನಡೆದ ಘಟನೆ ನಿನ್ನೆ ಮಂಗಳೂರಿನಲ್ಲಿ ನಡೆದಿದ್ದು, ಈ ಮೂಲಕ ಈ ಮೂಲಕ ಬೆರಳಿಣಿಕೆಯಷ್ಟು ಪತ್ರಕರ್ತರನ್ನು ತನ್ನ ಕೈವಶ ಮಾಡಿಕೊಂಡಿರುವ ಪೂಜಾರಿಯವರಿಗೆ ನಗರದ ನೈಜ್ಯ ಪತ್ರಕರ್ತರು ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
ಜಿಲ್ಲೆ, ರಾಜ್ಯ, ದೇಶದ ರಾಜಕಾರಣದ ಕುರಿತು ಮಾತನಾಡಿ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಪೂಜಾರಿಯವರು ನಿನ್ನೆ ಮುಖ್ಯಮಂತ್ರಿ ದುಬಾರಿ ವಾಚ್, ಮರಳುಗಾರಿಕೆ ಕುರಿತು ದ. ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪೂಜಾರಿ ಪತ್ರಿಕಾಗೋಷ್ಠಿ ಕರೆದಿದ್ದರು.ಪೂಜಾರಿ ತಮ್ಮ ಮಾತು ಮುಗಿಸಿ `ಎನಿ ಕ್ವೆಶ್ಚನ್’ ಎಂದು ಕೇಳಿದಾಗ ಪತ್ರಕರ್ತರೊಬ್ಬರು ಪ್ರಶ್ನೆ ಕೇಳುತ್ತಿದ್ದಂತೆ ನಿಮ್ಮ ಪ್ರಶ್ನೆಗೆ ನಾನು ಈಗ ಉತ್ತರಿಸುವುದಿಲ್ಲ ಎಂದು ಹೇಳಿದ್ರು. ಅಲ್ಲದೆ ಮತ್ತೊಬ್ಬರಿಗೆ ಪ್ರಶ್ನೆ ಕೇಳುವಂತೆ ಸೂಚಿಸಿದರು. ಪತ್ರಕರ್ತನೋರ್ವ ಕೇಳಿದ ಪ್ರಶ್ನೆಗೆ ಜನಾರ್ದನ ಪೂಜಾರಿ ಉತ್ತರಿಸಲು ನಿರಾಕರಿಸಿ ಉಡಾಫೆ ಉತ್ತರ ನೀಡಿದ ಕಾರಣ ಪತ್ರಕರ್ತರು ಮತ್ತು ಪೂಜಾರಿ ನಡುವೆ ಮಾತಿನ ಚಕಮಕಿ ನಡೆದು ಅಲ್ಲಿದ್ದ ಎಲ್ಲಾ ಪತ್ರಕರ್ತರು ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.