
ಮಂಗಳೂರು, ಫೆ 18: ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡು ಮೂಲದ ಯುವಕನೋರ್ವ ನಗರದ ನ್ಯಾಯಾಲಯದ ಕಟ್ಟಡದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಕಾಸರಗೋಡು ವೆಳ್ಳರಿಕುಂಡು ನಿವಾಸಿ ಬಿಜು ಥೋಮಸ್ (21) ಎಂದು ಗುರುತಿಸಲಾಗಿದ್ದು, ಈತ ಮುಕ್ಕದ ಶ್ರೀನಿವಾಸ ಸ್ಕೂಲ್ ಆಫ್ ಇಂಜಿನಿಯರಿಂಗ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದು, ಬೋಳಾರ ಮಂಗಳಾ ನಗರದಲ್ಲಿ ಪಿಜಿಯಲ್ಲಿ ವಾಸವಿದ್ದ ಎನ್ನಲಾಗಿದೆ.

ಇಂದು ಬೆಳಿಗ್ಗೆ ನಗರದ ಕೋರ್ಟ್ ರಸ್ತೆಯಲ್ಲಿ ನ್ಯಾಯಾಲಯ ಕಟ್ಟಡದ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಿಜು ಥೋಮಸ್ ನ ಮೃತದೇಹ ಕಂಡು ಬಂದಿದ್ದು, ಸಮೀಪದಲ್ಲಿಯೇ ಬಿಳಿ ಬಣ್ಣದ ಮಾರುತಿ (ಕೆಎ 19: ಎಂಸಿ- 2208) ರಿಡ್ಜ್ ಕಾರು ಪತ್ತೆಯಾಗಿದೆ. ಬಿಜು ಈ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಬಿಜು ಥೋಮಸ್ ನಿನ್ನೆ ರಾತ್ರಿ ಹುಟ್ಟು ಹಬ್ಬದ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ನಸುಕಿನ ಎರಡು ಗಂಟೆಯ ಸುಮಾರಿಗೆ ಬಾಡಿಗೆಯ ಕಾರಿನಲ್ಲಿ ತೆರಳಿದ್ದ. ಬಹುಶಃ ನೇರವಾಗಿ ನ್ಯಾಯಾಲಯ ಕಟ್ಟಡದ ಬಳಿ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಯಾವುದೋ ವೈಯಕ್ತಿಕ ಕಾರಣದಿಂದ ನೊಂದು ಈ ಕೃತ್ಯವೆಸಗಿದ್ದಾನೆಂದು ಶಂಕಿಸಲಾಗಿದೆ.
ಬಿಜು ಥೋಮಸ್ ನನ್ನು ಹೆತ್ತವರು ದುಬೈಗೆ ಕಳುಹಿಸಲು ಪ್ರಯತ್ನಿಸಿದ್ದರಾದರೂ ಈತ ಹೋಗಲು ಹಿಂದೇಟು ಹೊಡೆದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಂದರು ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.