ಮಂಗಳೂರು, ಡಿ.30: ಕಾರೊಂದಕ್ಕೆ ಸೈಡ್ ಬಿಟ್ಟು ಕೊಟ್ಟಿಲ್ಲ ಎಂದು ಆರೋಪಿಸಿ ಆಂಧ್ರ ಪ್ರದೇಶದ ಹೈದರಾಬಾದ್ನಲ್ಲಿ ಟ್ಯಾಂಕರ್ ಚಾಲಕರೊಬ್ಬರನ್ನು ಥಳಿಸಿ ಹತ್ಯೆ ನಡೆಸಿದ್ದಲ್ಲದೆ ನಿರ್ವಾಹಕನಿಗೆ ಗಂಭೀರ ಗಾಯಗೊಳಿಸಿದ ಘಟನೆಯನ್ನು ಖಂಡಿಸಿ ಸಾವಿರಾರು ಟ್ಯಾಂಕರ್ ಚಾಲಕರು ಹಾಗೂ ನಿರ್ವಾಹಕರು, ಸೋಮವಾರದಿಂದ ರಸ್ತೆಗಿಳಿಯದೆ ಪ್ರತಿಭಟನೆ ನಡೆಸಿದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕಾನ ಎಂಬಲ್ಲಿ ನಡೆದಿದೆ.
ಈ ರೀತಿ ಹತ್ಯೆಗೀಡಾದವರನ್ನು ತಮಿಳುನಾಡು ಮೂಲದ ಸರವಣನ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿರುವ ನಿರ್ವಾಹಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಡಿ.12ರಂದು ಸರವಣನ್ ಎಂಆರ್ಪಿಎಲ್ನಿಂದ ಎಚ್ಪಿಸಿಎಲ್ ಗ್ಯಾಸ್ ತುಂಬಿಸಿಕೊಂಡು ತನ್ನ ಬುಲೆಟ್ ಟ್ಯಾಂಕರ್ನೊಂದಿಗೆ ಆಂಧ್ರ ಕಡೆಗೆ ತೆರಳಿದ್ದರು. ಡಿ.13ರಂದು ಹೈದರಾಬಾದ್ ತಲುಪಿದ ಈ ಟ್ಯಾಂಕರ್ ಓಮ್ನಿಯೊಂದಕ್ಕೆ ಸಾಗಲು ರಸ್ತೆ ಬಿಟ್ಟುಕೊಟ್ಟಿಲ್ಲ ಎಂದು ಆಕ್ಷೇಪಿಸಿ ಓಮ್ನಿಯಲ್ಲಿದ್ದ ಗುಂಪೊಂದು ಟ್ಯಾಂಕರ್ನಿಂದ ಚಾಲಕ ಸರವಣನ್ ಮತ್ತು ನಿರ್ವಾಹಕನನ್ನು ಎಳೆದು ಹಿಗ್ಗಾಮುಗ್ಗಾ ಥಳಿಸಿ ಫ್ಲೈಓವರ್ನಿಂದ ಕೆಳಕ್ಕೆ ತಳ್ಳಿದ್ದರು. ಇದರಿಂದ ಗಂಭೀರ ಗಾಯಗೊಂಡ ಸರವಣನ್ ಚಿಕಿತ್ಸೆ ಫಲಕಾರಿಯಾಗದೆ ಡಿ.21ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಟ್ಯಾಂಕರ್ನಲ್ಲಿದ್ದ ನಿರ್ವಾಹಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಘಟನೆಯನ್ನು ಖಂಡಿಸಿ ಎಚ್ಪಿಸಿಎಲ್ನ ಬುಲೆಟ್ ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕರು ಸೋಮವಾರದಿಂದ ತಮ್ಮ ಕಾರ್ಯವನ್ನು ಸ್ಥಗಿತಗೊಳಿ ಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಣಾಮವಾಗಿ ಸುಮಾರು 1,500ಕ್ಕೂ ಹೆಚ್ಚು ಗ್ಯಾಸ್ ತುಂಬಿದ ಟ್ಯಾಂಕರ್ಗಳು ಇಂದು ರಸ್ತೆಗಿಳಿಯಲಿಲ್ಲ. ಅದಲ್ಲದೆ, ಗ್ಯಾಸ್ ತುಂಬಿಸಲೆಂದು ಬಂದಿರುವ ಸುಮಾರು 4,000 ಟ್ಯಾಂಕರ್ಗಳಿಗೂ ಪ್ರತಿಭಟನಕಾರರು ಅವಕಾಶ ನೀಡಲಿಲ್ಲ.