ಕುಂದಾಪುರ: ಕುಂದಾಪುರ ಪೊಲೀಸರಿಗೆ ಹೊಸವರ್ಷಕ್ಕೆ ಬಂಪರ್ ಗಿಫ್ಟ್ ಸಿಕ್ಕ ಖುಷಿ. ಯಾಕೇ ಅಂತೀರಾ.. ಹಲವು ವರ್ಷಗಳ ಬೇಡಿಕೆಯಾದ ಪೊಲೀಸ್ ಕ್ವಾರ್ಟ್ರಸ್ ಒಂದು ಹಂತ ಈಗ ವಾಸಕ್ಕೆ ಯೋಗ್ಯವಾಗಿ ಸಿದ್ಧವಾಗಿ ನಿಂತಿದೆ. ಈಗಾಗಲೇ ಹಲವು ತಿಂಗಳುಗಳಿಂದ ಎಲ್ಲೆಲ್ಲೋ ಬಾಡಿಗೆ ನೀಡಿ ವಾಸಿಸುತ್ತಿರುವ ಪೊಲೀಸರಿಗೆ ಇದರಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಬಹುವೆಚ್ಚದ ಹೈಟೆಕ್ ಕ್ವಾರ್ಟ್ರಸ್:
ಪೊಲೀಸ್ ಗ್ರಹ 20*20 ಯೋಜನೆಯಡಿಯಲ್ಲಿ ಕುಂದಾಪುರದಲ್ಲಿ 72 ಕಾನ್ಸ್ ಟೇಬಲ್ ಹಾಗೂ 6 ಅಧಿಕಾರಿಗಳ ಪೊಲೀಸ್ ವಸತಿ ಗ್ರಹ ಕಟ್ಟಡ ನಿರ್ಮಾಣ ಪ್ಯಾಕೇಜ್ ಅಂದಾಜು ವೆಚ್ಚ 12 ಕೋಟಿ 96 ಲಕ್ಷ. ಹೌದು…ಈ ಬಹುವೆಚ್ಚದ ಈ ಕಟ್ಟಡ ಹೈಟೆಕ್ ಆಗಿದ್ದು ಸಕಲ ಸೌಲಭ್ಯವನ್ನು ಹೊಂದಿದೆ. 36 ಸಿಬ್ಬಂದಿ ವಸತಿಗೃಹ ಕೊಠಡಿ ಹಾಗೂ 6 ಅಧಿಕಾರಿಗಳ ಕೊಠಡಿ ಬ್ಲಾಕ್ ಸದ್ಯ ನಿರ್ಮಾಣವಾಗಿದೆ. ಇನ್ನು ಮೂರು ಬ್ಲಾಕ್ಗಳ 36 ಸಿಬ್ಬಂದಿಗಳಿಗೆ ಉಳಿಯಲು ಯೋಗ್ಯವಾದ ಕೊಠಡಿ ನಿರ್ಮಾಣ ಎರಡು ತಿಂಗಳಾಂತ್ಯದಲ್ಲಿ ಆಗಲಿದೆ. ಇದರ ಕಾಮಗಾರಿ ಕುಂದಾಪುರ ಪೊಲೀಸ್ ಠಾಣೆ ಸಮೀಪದಲ್ಲಿ ಭರದಿಂದ ಸಾಗುತ್ತಿದೆ.
ಫ್ಲಾಟ್ ಮಾದರಿ ಮನೆಗಳು:
ಸಿಬ್ಬಂದಿಗಳಿಗಾಗಿ ಒಟ್ಟು ಮೂರು ಬ್ಲಾಕ್ ಕಟ್ಟಡ ರೆಡಿಯಾಗಿದೆ. ಒಂದೊಂದು ಬ್ಲಾಕ್ಗಳಲ್ಲಿ ಮೂರು ಅಂತಸುಗಳಿದ್ದು ಒಟ್ಟು 12 ಮನೆಗಳಿವೆ. ಎಲ್ಲಾ ಮನೆಗಳು ಪ್ಲಾಟ್ ಮಾದರಿಯಲ್ಲಿದ್ದು (760 ಚದರ ಅಡಿ)ಒಂದು ಮನೆಯಲ್ಲಿ 2 ಬೆಡ್ ರೂಂ (1 ಕ್ಕೆ ಅಟ್ಟಾಚ್ಡ್ ಬಾತ್ ರೂಂ), 1 ಹಾಲ್, ಬಾಲ್ಕನಿ, ಉತ್ತಮ ಗುಣಮಟ್ಟದ ಕಿಚನ್ ಕ್ಯಾಬಿನೆಟ್, ನೆಲಕ್ಕೆ ವಿಟ್ಟರ್ ಪ್ಯಾಡ್ ಅಳವಡಿಸಲಾಗಿದೆ. ಪ್ರತಿ ಮನೆಗೂ ಪ್ರತ್ಯೇಕ ಮೀಟರ್ ಅಳವಡಿಕೆಯ ಜೊತೆಗೆ 24 ಗಂಟೆ ಸೋಲಾರ್ ಹಾಗೂ ಬಿಸಿನೀರು ಸೌಲಭ್ಯ ದೊರಕಲಿದೆ. ಇನ್ನು ಅಧಿಕಾರಿಗಳ 6 ಮನೆಗಳು ಇನ್ನೋಂದು ಬ್ಲಾಕ್ (ಆಫಿಸರ್ಸ್ ಬ್ಲಾಕ್)ನಲ್ಲಿದ್ದು ಅಲ್ಲಿಯೂ ಇದೇ ರೀತಿಯ ಮನೆಗಳ ವಿನ್ಯಾಸವಿದ್ದು ಮನೆಯ ವಿಸ್ತಾರ (850-900 ಚದರ ಅಡಿ)ಮಾತ್ರ ಕೊಂಚ ದೊಡ್ಡದಿದೆ.
ಮಾರ್ಚ್ ನಲ್ಲಿ ಇನ್ನೊಂದು ಕ್ವಾರ್ಟ್ರಸ್ ರೆಡಿ:
ಸಿಬ್ಬಂದಿಗಳಿಗೆ ಉಳಿಯಲು ಯೋಗ್ಯವಿರುವ ಮೂರು ಬ್ಲಾಕ್ಗಳ 36 ಮನೆಗಳಿರುವ ಇನ್ನೊಂದು ಕ್ವಾರ್ಟ್ರಸ್ ಮಾರ್ಚ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಸದ್ಯ ನೀತಿಸಂಹಿತೆಯಿರುವ ಕಾರಣ ಎರಡು ಕಾಟ್ರಸ್ ಅಧೀಕೃತ ಉದ್ಘಾಟನೆ ಕಾರ್ಯಕ್ರಮವು ಮಾರ್ಚ್ನಲ್ಲಿಯೇ ನಡೆಯಲಿದೆ ಎಂದು ತಿಳಿದುಬಂದಿದೆ.
ಜನವರಿ ಮೊದಲನೇ ತಾರಿಖಿನಿಂದ 36 ಸಿಬ್ಬಂದಿಗಳು ಹಾಗೂ ಕುಂದಾಪುರ ಇನ್ಸ್ಪೆಕ್ಟರ್ ಸಹಿತ ಕುಂದಾಪುರ ಠಾಣೆ ಇಬ್ಬರು ಎಸ್.ಐ., ಸಂಚಾರಿ ಠಾಣೆ ಇಬ್ಬರು ಎಸ್.ಐ. ಹಾಗೂ ಮಹಿಳಾ ಠಾಣೆ ಒಬ್ಬರು ಎಸ್.ಐ. ಅವರು ಈ ಪೊಲೀಸ್ ವಸತಿಗೃಹಗಳ ಉಪಯೋಗವನ್ನು ಪಡೆಯಬಹುದಾಗಿದೆ.
ಮೂರು ಬ್ಲಾಕ್ ಹಾಗೂ ಉಡುಪಿ ಎಸ್ಪಿ ಕೆ.ಅಣ್ಣಾಮಲೈ ಅವರು ಪೊಲೀಸ್ ವಸತಿಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿ ವಸತಿಗೃಹ ಕಾಮಗಾರಿ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಮಂಜುಶ್ರೀ ಕಂಸ್ಟ್ರಂಕ್ಷನ್ ಕಂಪೆನಿಯ ಆಡಳಿತ ನಿರ್ದೇಶಕರಾದ ದಯಾನಂದ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಹೌಸಿಂಗ್ ಬೋರ್ಡ್ ಸಹಾಯಕ ಇಂಜಿನಿಯರ್ ಸಂತೋಷ್ ಕುಮಾರ್, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಠಾಣೆಯ ಎಸ್.ಐ. ದೇವೇಂದ್ರ ಹಾಗೂ ಸಿಬ್ಬಂದಿಗಳಿದ್ದರು.
ಚಿತ್ರ, ವರದಿ- ಯೋಗೀಶ್ ಕುಂಭಾಸಿ