ಕುಂದಾಪುರ: ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಆತ್ರಾಡಿಯಲ್ಲಿ ಮಣ್ಣು ಸಮತಟ್ಟು ಮಾಡುವ ಸಂದರ್ಭ ಮಣ್ಣಿನ ಅಡಿಯಲ್ಲಿ ದೊಡ್ಡ ಕೊಡಪಾನ (ಕೊಪ್ಪರಿಗೆ)ಆಕೃತಿಯ ರಚನೆಯೊಂದು ಪತ್ತೆಯಾಗಿದೆ. ಸಾವಿರಾರು ವರ್ಷಗಳ ಹಿಂದಿನ ರಚನೆ ಇದಾಗಿದೆ ಎನ್ನಲಾಗಿದ್ದು ಸ್ಥಳಿಯರ ಕುತೂಹಲಕ್ಕೆ ಕಾರಣವಾಗಿದೆ.




ದೀಪಿಕಾ ಶೆಟ್ಟಿ ಹಾಗೂ ಸುಭಾಶ್ ಶೆಟ್ಟಿಯವರ ವಿಜಯಾ ಮಕ್ಕಳ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ವಂಡ್ಸೆಯ ಆತ್ರಾಡಿಯಲ್ಲಿ ದಿಪಿಕಾ ಶೆಟ್ಟಿಯವರ ತಾಯಿ ಸುಶೀಲಾ ಶೆಟ್ಟಿ ಅವರಿಗೆ ಸೇರಿರುವ ಗದ್ದೆಯನ್ನು ಜೆಸಿಬಿ ಯಂತ್ರದ ಮೂಲಕ ಸಮತಟ್ಟು ಮಾಡುವಾಗ ಅವರ ಜಾಗದಲ್ಲಿ ಭೂಮಿಯ ಮೇಲ್ಮಯಿಂದ ಸುಮಾರು 5 ಅಡಿ ಕೆಳಗೆ ಈ ಕೊಪ್ಪರಿಗೆ ಆಕೃತಿ ಪತ್ತೆಯಾಗಿದೆ. ಕೊಡಪಾನದಂತಿರುವ ಆಕೃತಿಯ ಮೇಲ್ಬಾಗಕ್ಕೆ ಶಿಲೆಯಿಂದ ಮುಚ್ಚಲಾಗಿದೆ. ದೊಡ್ಡ ಕೊಡಪಾನದ ಆಕೃತಿಯನ್ನು ಹೋಲುವ ಈ ವಸ್ತುವಿನ ಒಳಮೈ ನುಣುಪಾಗಿದೆ. ಶಿಲಾ ಮುಚ್ಚಳದ ಒಂದು ಭಾಗ ಛಿದ್ರವಾಗಿದ್ದು ಒಳಗಡೆ ಸಾಕಷ್ಟು ಜಾಗವಿದೆ. ಈ ಕೊಪ್ಪರಿಗೆ ಮಾದರಿಯ ವಸ್ತು ಸಿಕ್ಕ ಸಂದರ್ಭ ಇದನ್ನು ನಿಧಿ ಸಂಗ್ರಹದ ಕೊಪರಿಗೆಯೆಂದು ಗ್ರಹಿಸಿದ ಸ್ಥಳದ ವಾರೀಸುದಾರರು ತಕ್ಷಣ ಕಂದಾಯ ಇಲಾಖೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸ್ಥಳೀಯರ ಕುತೂಹಲ: ಭೂಮಿಯಡಿಯಲ್ಲಿ ಕೊಪ್ಪರಿಗೆ ಆಕ್ರತಿಯ ವಸ್ತು ದೊರಕಿದ ಸುದ್ದಿ ತಿಳಿಯುತ್ತಲೇ ಇದನ್ನು ನೋಡಲು ನೂರಾರು ಜನ ಆತ್ರಾಡಿಗೆ ಬರುತ್ತಿದ್ದಾರೆ.
ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವ ವಸ್ತುವಾಗಿರಬಹುದೆಂದು ಅಂದಾಜಿಸಲಾಗಿದ್ದು ಉತ್ಕನನ ನಡೆಸಿದ ಬಳಿಕವಷ್ಟೇ ನಿರ್ಧಾರ ಮಾಡಬೇಕಿದೆ.