ಮಂಗಳೂರು, ಡಿ.9: ಉಳಾಯಿಬೆಟ್ಟು ಪ್ರಕರಣದ ಆರೋಪಿಯೋರ್ವನ ಬಂಧನಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ಕುಮಾರ್ರನ್ನು ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ರಜೆ ಮೇಲೆ ಕಳುಹಿಸಲಾಗಿದೆ ಎಂದು ಆರೋಪಿಸಿ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ವರ್ಷದ ಹಿಂದೆ ಉಳಾಯಿಬೆಟ್ಟುವಿನಲ್ಲಿ ನಡೆದ ಕೋಮುಗಲಭೆಗೆ ಸಂಬಂಸಿ ತಲೆಮರೆಸಿಕೊಂಡಿದ್ದ ಆರೋಪಿ ಅಬೂಬಕರ್ ಸಿದ್ದೀಕ್ ಎಂಬಾತನನ್ನು ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಸೋಮವಾರ ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಇದರ ಬೆನ್ನಲ್ಲೇ ಮಂಗಳವಾರ ಇನ್ಸ್ಪೆಕ್ಟರ್ರನ್ನು ರಜೆ ಮೇಲೆ ತೆರಳಲು ನಗರ ಪೊಲೀಸ್ ಆಯುಕ್ತ ಆದೇಶ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರ ಸಹಿತ ಸ್ಥಳೀಯರು ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಸಿದ್ದೀಕ್ ಮೇಲೆ ಉಳಾಯಿಬೆಟ್ಟು ಪ್ರಕರಣ ಮಾತ್ರವಲ್ಲದೆ ದರೋಡೆ, ಕೊಲೆಯತ್ನ, ಅತ್ಯಾಚಾರ ಯತ್ನದಂತಹ ಪ್ರಕರಣಗಳು ಆತನ ಮೇಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪ್ರಮೋದ್ ರವರು ಆತನನ್ನು ಬಿಡುಗಡೆಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಪ್ರಮೋದ್ ರನ್ನು 15 ದಿನಗಳ ಕಾಲ ರಜೆಯಲ್ಲಿ ಕಳುಹಿಸಲಾಗಿದೆ ಎಂದು ಆರೋಪಿಸಿ ಠಾಣಾ ಪೋಲೀಸರು ವಿರೋಧಿಸಿ ಪ್ರತಿಭಟಿಸಿದ್ದಾರೆ. .
ಉಳಾಯಿಬೆಟ್ಟು ಪ್ರಕರಣದ ಆರೋಪಿಯೋರ್ವನ ಬಂಧನದಿಂದಾಗಿ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ರನ್ನು ರಜೆಯ ಮೇಲೆ ತೆರಳಲು ಆದೇಶ ನೀಡಲಾಗಿದೆ. ಇನ್ಸ್ಪೆಕ್ಟರ್ನ್ನು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಸಿದ್ದೀಕ್ ನನ್ನು ಬಿಡುಗಡೆಗೊಳಿಸುವಂತೆ ಸಚಿವ ರಮಾನಾಥ್ ರೈ, ಶಾಸಕ ಮೊಯ್ದಿನ್ ಬಾವಾ ಇನ್ಸ್ ಪೆಕ್ಟರ್ ಪ್ರಮೋದ್ ಮೇಲೆ ಒತ್ತಡ ಹೇರಿದ್ದಾರೆ ಎಂದು ಪ್ರತಿಭಟನ ನಿರತ ಪೋಲೀಸರು ಮತ್ತು ನಾಗರೀಕರು ಆರೋಪಿಸಿದ್ದಾರೆ ಎನ್ನಲಾಗಿದೆ.
ಡಿಸಿಪಿ ಶಾಂತರಾಜು, ಸಂಜೀವ್ ಪಾಟೀಲ್, ಎಸಿಪಿ ತಿಲಕ್ಚಂದ್ರ, ಕಲ್ಯಾಣ್ ಶೆಟ್ಟಿ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.
ಕ್ರಮ ಕೈಗೊಳ್ಳಲಾಗಿಲ್ಲ : ಮುರುಗನ್ ಸ್ಪಷ್ಟಣೆ
ಇನ್ಸ್ಪೆಕ್ಟರ್ರನ್ನು ರಜೆ ಮೇಲೆ ತೆರಳಲು ತಾನು ಸೂಚಿಸಿಲ್ಲ. ಅವರ ಮೇಲೆ ಇಲಾಖಾ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ತಿಳಿಸಿದರು.
ಇನ್ಸ್ಪೆಕ್ಟರ್ರನ್ನು ವರ್ಗಾಯಿಸಲಾಗಿದೆ, ಅಮಾನತು ಮಾಡಲಾಗಿದೆ ಎಂಬ ಪೂರ್ವಗ್ರಹ ಪೀಡಿತ ಪ್ರಚಾರದ ಹಿನ್ನೆಲೆಯಲ್ಲಿ ಠಾಣೆಯೆದುರು ಜನರು ಜಮಾಯಿಸಿದ್ದಾರೆ. ಅಂತಹ ಯಾವುದೇ ಕ್ರಮ ಇಲಾಖೆಯ ವತಿಯಿಂದ ಕೈಗೊಳ್ಳಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಠಾಣೆಗೆ ಹಾಜರಾದ ಇನ್ಸ್ಪೆಕ್ಟರ್ ಪ್ರಮೋದ್ಕುಮಾರ್
ಸಾರ್ವಜನಿಕರ ಪ್ರತಿಭಟನೆಯಿಂದಾಗಿ ಠಾಣೆಗೆ ಹಾಜರಾದ ಇನ್ಸ್ಪೆಕ್ಟರ್ ಪ್ರಮೋದ್ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಕೆಲವು ಗೊಂದಲ ಇತ್ತು, ಅದೀಗ ನಿವಾರಣೆಯಾಗಿದ್ದು, ನನಗೆ ಕರ್ತವ್ಯಕ್ಕೆ ಕರೆ ಬಂದಿದೆ ಎಂದು ಹೇಳಿದರು.