ಮಂಗಳೂರು, ಡಿ.8: ಕರ್ನಾಟಕ ರಾಜ್ಯ ಆಮ್ ಆದ್ಮಿ ಪಕ್ಷ ಆರಂಭಿಸಿರುವ `ಲಂಚ ಮುಕ್ತ ಕರ್ನಾಟಕ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಹಿರಿಯ ಸಾಮಾಜಿಕ ಹೋರಾಟಗಾರ, ವಕೀಲ ದಯಾನಾಥ್ ಕೋಟ್ಯಾನ್ ಮಾತನಾಡಿ, ಜನಸಾಮಾನ್ಯರನ್ನು ಪ್ರತಿನಿತ್ಯ ಕಾಡುತ್ತಿರುವ ಭ್ರಷ್ಟಾಚಾರ, ಲಂಚಕೋರತನವನ್ನು ನಿರ್ಮೂಲನೆ ಮಾಡಲು ಮಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷ ಹೋರಾಟದ ಅಡಿಗಲ್ಲು ಹಾಕಿರುವುದು ಪ್ರಶಂಸನೀಯ ಎಂದರು. ಕರ್ನಾಟಕವನ್ನು ಲಂಚ ಮುಕ್ತ ರಾಜ್ಯವನ್ನಾಗಿಸುವುದು ಈ ರಾಜ್ಯದ ಜನತೆಯ ಜವಾಬ್ದಾರಿಯಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೊಂಪೆಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಆಮ್ ಆದ್ಮಿ ಪಕ್ಷದ ಲಂಚ ಮುಕ್ತ ಮಂಗಳೂರು ಅಭಿಯಾನಕ್ಕೆ ಪ್ರಜ್ಞಾವಂತ ನಾಗರಿಕರು, ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರು ಬೆಂಬಲಿಸಬೇಕೆಂದು ಕರೆ ನೀಡಿದರು.
ನೂರಾರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಅಲ್ಲಿನ ಕೆಲವು ಸಮಸ್ಯಗಳಾದ ಮಧ್ಯವರ್ತಿಗಳ ಹಾವಳಿ, ಲಂಚ ಗುಳಿತನ ವನ್ನು ನಿಲ್ಲಿಸಲು, ಕಚೇರಿಯಲ್ಲಿ ಸರಕಾರದ ಆದೇಶ ಜಾರಿಯಲ್ಲಿ ಇದ್ದರೂ ಕೂಡ ಸಿಸಿ ಟಿವಿ ಕ್ಯಾಮೆರಾಗಳು ಇಲ್ಲದಿರುವುದರ ಬಗ್ಗೆ ಗಮನ ಸೆಳೆದು ಪಾರದರ್ಶಕತೆ ಕಾಪಾಡಿಕೊಳ್ಳಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕೆಂದು ಮತ್ತು ಎಲ್ಲಾ ಅಧಿಕಾರಿಗಳ ನಾಮಫಲಕ ಮತ್ತು ಅವರ ಹುದ್ದೆಯ ವಿವರವನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾಕಷ್ಟು ಜನರು ತಾತ್ಕಾಲಿಕ ಹುದ್ದೆಯಲ್ಲಿದ್ದು, ಸುಮಾರು ಮೂರು ನಾಲ್ಕು ತಿಂಗಳುಗಳಿಂದ ವೇತನ ಸಿಗದೇ ಇರುವುದರ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು. ಬಳಿಕ ಆರ್ಟಿಒ ಕಚೇರಿಗೆ ತೆರಳಿ ಅಲ್ಲಿನ ಎಆರ್ಟಿಒ ವರ್ಣೇಕರ್ ಅವರನ್ನು ಭೇಟಿ ಮಾಡಲಾಯಿತು. 1980ರ ವಾಹನಗಳ ಗಣತಿಯ ಆಧಾರಿತ ಹುದ್ದೆಗಳನ್ನೂ ಭರ್ತಿಮಾಡದೆ ಇರುವುದರಿಂದ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚುತ್ತಿರುವ ಕುರಿತು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಅಭಿಯಾನದಲ್ಲಿ ಜಿಲ್ಲಾ ಸಮಿತಿಯ ಸದಸ್ಯರುಗಳಾದ ಅಲೆಕ್ಸಾಂಡರ್ ಡಿ’ಸೋಜ, ರೋಹನ್ ಸಿರಿ, ಮರ್ಸಿಯಾ ಪಿಂಟೋ, ರಾಜೇಂದ್ರ, ದೇವಿ ಪ್ರಸಾದ್ ಮತ್ತು ಜಿಲ್ಲೆಯ ಎಲ್ಲಾ ಸಕ್ರೀಯ ಕಾರ್ಯಕರ್ತರು ಪಾಲ್ಗೊಂಡಿದ್ದರು.