ಕಾಸರಗೋಡು, ಡಿ.04 : ಎಂಡೋಸಲ್ಫಾನ್ ಸಂತ್ರಸ್ತರಿಗೆ ಸರಕಾರ ನೀಡಿರುವ ಭರವಸೆಗಳನ್ನು ಈಡೇರಿಸದಿರುವ ಕ್ರಮವನ್ನು ವಿರೋಧಿಸಿ ಗಣರಾಜ್ಯ ದಿನದಂದು ಕೇರಳ ಮುಖ್ಯಮಂತ್ರಿಯವರ ಮನೆ ಮುಂಭಾಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಎಂಡೋಸಲ್ಫಾನ್ ಸಂಯುಕ್ತ ಹೋರಾಟ ಸಮಿತಿ ಸಭೆ ತೀರ್ಮಾನಿಸಿದೆ.
ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿ ಎರಡು ವರ್ಷ ಪೂರ್ಣಗೊಂಡರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಗೋದಾಮುಗಳಲ್ಲಿ ದಾಸ್ತಾನಿಟ್ಟಿರುವ ಎಂಡೋಸಲ್ಫಾನ್ ಕೀಟನಾಶಕವನ್ನು ನಿಷ್ಕ್ರಿಯಗೊಳಿಸಿಲ್ಲ. ನೆಂಜಪರಂಬದ ಬಾವಿಯಲ್ಲಿ ಹಾಕಲಾಗಿರುವ ಎಂಡೋಸಲ್ಫಾನ್ನ ತಪಾಸಣೆಗೂ ಅಧಿಕಾರಿಗಳು ಮುಂದಾಗಿಲ್ಲ. ನಷ್ಟ ಪರಿಹಾರಕ್ಕೆ ಟ್ರಿಬ್ಯೂನಲ್ ಸ್ಥಾಪಿಸುವುದಾಗಿ ಸರಕಾರ ನೀಡಿದ ಭರವಸೆ ಈಡೇರಿಸಿಲ್ಲ. ಪ್ರತಿವರ್ಷ ವೈದ್ಯಕೀಯ ಶಿಬಿರ ನಡೆಸಲಾಗುವುದು ಎಂದು ತಿಳಿಸಿದ್ದರೂ ಈವರೆಗೆ ಶಿಬಿರ ನಡೆಸಿಲ್ಲ. ಇದರಿಂದ ಸಾವಿರಾರು ಬಡರೋಗಿಗಳು ಚಿಕಿತ್ಸೆ ಲಭಿಸದೆ ಕಂಗಾಲಾಗಿದ್ದಾರೆ ಎಂದು ಆರೋಪಿಸಿರುವ ಸಮಿತಿ, ಎಂಡೋ ಸಂತ್ರಸ್ತರ ಬಗ್ಗೆ ಸರಕಾರ ಕೂಡಲೇ ವಿಶೇಷ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದೆ.
ಡಾ. ಅಂಬಿಕಾಸುತನ್ ಮಾಂಗಾಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಪೆರಿಯ, ಪಿ.ಪಿ.ಕೆ. ಪೊದುವಾಲ್, ಪ್ರೋ. ಎಂ. ಗೋಪಾಲ, ಪ್ರೋ. ಟಿ.ಟಿ. ಜೇಕಬ್, ರಾಧಾಕೃಷ್ಣ ಪೆರುಂಬಳ, ಕೆ. ವಿಜಯನ್, ಪಿ.ವಿ. ಶೋಭನಾ, ಪ್ರೇಮಚಂದ್ರನ್, ಇಸ್ಮಾಯೀಲ್ ಪಳ್ಳಿಕೆರೆ, ಶಶಿಧರನ್, ಎಂ. ಚಂದ್ರನ್, ಸಿ.ವಿ. ಪ್ರೇಮರಾಜನ್, ಅಂಬಲತ್ತರ ಕುನ್ಹಿ ಕೃಷ್ಣನ್, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.