ಕುಂದಾಪುರ: ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಗುಮ್ಮೊಲ ಎಂಬಲ್ಲಿ ಸೀತಾನದಿ ಸಮೀಪದ ಬಿದಿರು ಪೊದೆಯಲ್ಲಿ ನ.೩೦ರಂದು ಸಿಕ್ಕ ಅಪರಿಚಿತ ಮಹಿಳೆ ಜಪ್ತಿ ಗ್ರಾಮದ ಉಷಾ(33) ಎಂದು ಬುಧವಾರ ರಾತ್ರಿ ವೇಳೆ ಖಚಿತವಾಗಿದ್ದು ಕೊಲೆಯ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಿಯಕರನೊಂದಿಗೆ ಸೇರಿಕೊಂಡ ಸ್ಥಳೀಯ ಇನ್ನೋರ್ವ ವ್ಯಕ್ತಿಯೇ ಸದ್ಯ ಬಂಧನದಲ್ಲಿರುವ ಆರೋಪಿಗಳು.
ಉಷಾಳ ಪ್ರಿಯಕರನಾದ ಬೆಳ್ವೆಯ ಗೊಮ್ಮೊಲದ ಶೆಟ್ಟೋಳಿ ನಿವಾಸಿ ವಿಶ್ವನಾಥ್ ನಾಯ್ಕ್ (34) ಹಾಗೂ ಈ ಕೃತ್ಯಕ್ಕೆ ವಿಶ್ವನಾಥನಿಗೆ ಸಹಕರಿಸಿದ ಬೆಳ್ವೆಯ ಗೊಮ್ಮೊಲದ ಹಳನೀರು ನಿವಾಸಿ ಕರುಣಾಕರ ಶೆಟ್ಟಿ (46) ಸದ್ಯ ಬಂಧಿತರಾಗಿದ್ದಾರೆ.
ಮೂರೇ ದಿನದಲ್ಲಿ ಬಯಲಾದ ಪ್ರಕರಣ:
ನ.30 ಸೋಮವಾರ ಬೆಳ್ವೆ ಗ್ರಾಮದ ಗುಮ್ಮೊಲ ಎಂಬಲ್ಲಿ ಸೀತಾನದಿ ಸಮೀಪದ ಬಿದಿರು ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಉಷಾ ಅವರ ಶವ ದೊರೆತಿದ್ದು ಮುಖ ಸಂಪೂರ್ಣ ಜಜ್ಜಿ ಹೋದ ಕಾರಣ ಗುರುತು ಪತೆಹಚ್ಚಲಾಗದ ಸ್ಥಿತಿಯಲ್ಲಿತ್ತು. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಸ್ಥಳೀಯ ಭಾಗದಲ್ಲಿ ನಾಪತ್ತೆಯಾದವರನ್ನು ಪತ್ತೆಹಚ್ಚುವಾಗ ನ.23ರಂದು ಕಾಣೆಯಾದ ಉಷಾ ಅವರ ಶವವಾಗಿರಬಹುದೆಂಬ ನೆಲೆಯಲ್ಲಿ ವಿಚಾರಣೆ ಚುರುಕುಗೊಳಿಸಿದ್ದು ಆಕೆ ಮನೆಯವರನ್ನು ಕರೆಸಿ ಶವದ ಗುರುತು ಪತ್ತೆಮಾಡಿಸಲಾಗಿತ್ತು. ಬುಧವಾರ ಸಂಜೆ ವೇಳೆ ಈ ಶವ ಉಷಾ ಅವರದ್ದೇ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಇದೊಂದು ಕೊಲೆ ಎಂಬುದನ್ನು ಮೇಲ್ನೋಟಕ್ಕೆ ಖಾತ್ರಿಪಡಿಸಿಕೊಂಡು ಪ್ರಕರಣದ ತನಿಖೆಯ ಜಾಡು ಹಿಡಿಯುತ್ತಾರೆ. ವಿಚಾರಣೆ ಹಾಗೂ ವಿವಿಧ ಆಯಾಮದ ತನಿಖೆ ಸಂದರ್ಭ ಆರೋಪಿಗಳಾದ ವಿಶ್ವನಾಥ್ ಹಾಗೂ ಆತನಿಗೆ ಹೆಲ್ಪ್ ಮಾಡಿದ ಕರುಣಾಕರ್ ಶೆಟ್ಟಿ ಸಿಕ್ಕಿಬೀಳುತ್ತಾರೆ.
ಮನೆಗೆ ಸ್ಕೇಚ್ ಹಾಕಲು ಬಂದು ಸ್ಕೆಚ್ ಹಾಕಿಸಿಕೊಂಡಿದ್ದಳು:
ಮದುವೆಯಾಗಿ ಎರಡು ಮಕ್ಕಳಿರುವ ಉಷಾ ಗಂಡನನ್ನು ತ್ಯಜಿಸಿದ್ದಳು, ಬೆಳ್ವೆ ಸಮೀಪದ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದು ಗಾರೆ ಮೇಸ್ತ್ರಿಯಾಗಿರುವ ವಿಶ್ವನಾಥ್ ನಾಯ್ಕನೊಂದಿಗೆ ಸುಮಾರು ಎಂಟು ವರ್ಷಗಳಿಂದ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದರೆನ್ನಲಾಗಿದೆ. ಗುಮ್ಮೊಲದಲ್ಲಿ ಎಕ್ರೆಗಟ್ಟಲೇ ಜಾಗವೊಂದನ್ನು ಹೊಂದಿದ್ದ ವಿಶ್ವನಾಥ ಅಲ್ಲಿಯೇ ಒಂದು ಹೊಸ ಮನೆಯೊಂದನ್ನು ಕಟ್ಟಲು ಕಾಮಗಾರಿ ಶುರುವಿಟ್ಟುಕೊಂಡಿದ್ದ. ಈತನ್ಮಧ್ಯೆ ಕಷ್ಟದ ಸಲುವಾಗಿ ಈತನು ಆಕೆಗೆ ನೀಡಿದ ಹಣವನ್ನು ಮರಳಿ ಕೇಳಲು ಶುರುವಿಟ್ಟುಕೊಂಡಿದ್ದಲ್ಲದೇ ತನ್ನ ಮನೆಯ ಕೆಲಸಕ್ಕೆ ಬಾ ಎಂದು ಕರೆಯುತ್ತಿದ್ದನೆನ್ನಲಾಗಿದೆ. ಆದರೇ ಉಷಾ ಮಾತ್ರ ತನಗೊಂದು ಮನೆ ಕಟ್ಟಲು ಸಹಾಯ ಮಾಡುವಂತೆಯೂ ಹಾಗೂ ಹಣ ನೀಡುವಂತೆಯೂ ಪೀಡಿಸುತ್ತಿದ್ದಾಳೆನ್ನಲಾಗಿದೆ. ನ. ೨೩ರಂದು ತನ್ನ ಮನೆಯಲ್ಲಿ ಕಾರಣವೇನೋ ಹೇಳಿ ನೈಟಿಯ್ಂದನ್ನು ಬ್ಯಾಗಿನಲ್ಲಿಟ್ಟುಕೊಂಡ ಉಷಾ ಆಕೆಯ ಕನಸಿನ ಮನೆಯ ಸ್ಕೆಚ್ ಮಾಡಲು ಈತನೊಂದಿಗೆ ಬಂದು ಆತನಿಂದಲೇ ಕೊಲೆಯಾಗಿ ಹೋಗುತ್ತಾಳೆ.
ಹೆಣ್ಣಿನ ವಿಚಾರಕ್ಕೆ ಮಿತ್ರನಾದ ಶತ್ರು:
ಈ ನಡುವೆ ತನ್ನ ಹಳೆ ಶತ್ರು ಅದೇ ಊರಿನ ತನ್ನ ಮನೆ ಸಮೀಪದ ಕರುಣಾಕರ ಶೆಟ್ಟಿಯ ಜೊತೆ ಉಷಾಳ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದ ವಿಶ್ವನಾಥ್ ಆತನಿಗೂ ಅವಳ ಪರಿಚಾಯ ಮಾಡಿಕೊಡುವ ಭರವಸೆ ನೀಡಿದ್ದ. ನ.23ರಂದು ಉಷಾಳ ಹೊಸ ಮನೆಗೊಂದು ಸ್ಕೆಚ್ ಹಾಕಿಕೊಡುವುದಾಗಿ ಉಷಾಳನ್ನು ಆಕೆ ಮನೆ ಸಮೀಪದಿಂದ ಬೈಕಿನಲ್ಲಿ ಕರೆತಂದ ಈತ ಗೊಮ್ಮೊಲದ ನಿರ್ಮಾಣದಲ್ಲಿರುವ ತನ್ನ ಹೊಸ ಮನೆಗೆ ಕರೆತರುತ್ತಾನೆ, ಅಲ್ಲಿಗೆ ಬಂದಿದ್ದ ಕರುಣಾಕರ್ ಶೆಟ್ಟಿಗೂ ಆಕೆಯ ಪರಿಚಯ ಮಾಡಿಸಿದ್ದು ಆತ ಸ್ವಲ್ಪ ಸಮಯದ ಬಳಿಕ ಸಮೀಪದ ಸೀತಾನದಿಯತ್ತ ತೆರಳಿರುತ್ತಾನೆ.
ಕಲ್ಲು ಎತ್ತಿಹಾಕಿ ಭೀಕರ ಕೊಲೆ:
ಈ ನಡುವೆ ವಿಶ್ವನಾಥ್ ಹಾಗೂ ಉಷಾ ನಡುವೆ ಹಣಕಾಸು ವಿಚಾರದಲ್ಲಿ ದೊಡ್ಡ ಜಗಳವೇ ನಡೆದಿದ್ದು ಇಬ್ಬರು ಪರಸ್ಪರ ಹೊಡೆದಾಡಿಕೊಳ್ಳುವ ಸಂದರ್ಭ ಉಷಾ ಓಡಿಹೋಗಲು ಯತ್ನಿಸುತ್ತಿದ್ದಂತೆ ಕರುಣಾಕರ ಶೆಟ್ಟಿ ಆಕೆಯನ್ನು ಬಲವಾಗಿ ಹಿಡಿಯುತ್ತಾನೆ. ಅಲ್ಲಿ ನಡೆದುಬಿಡುತ್ತೆ ಭೀಕರ ಕೊಲೆ, ಉಷಾಳ ಮುಖದ ಭಾಗಕ್ಕೆ ಕೆಂಪು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿಯೇ ಬಿಡುತ್ತಾರೆ. ಬಳಿಕ ಶವವನ್ನು ತಮ್ಮದೇ ಜಾಗದ ಸೀತಾನದಿ ಹೊಳೆಯ ಸಮೀಪದಲ್ಲಿರುವ ಬಿದಿರು ಪೊದೆಯಲ್ಲಿ ಎಸೆದು ತಮಗೇನು ತಿಳಿದಿಲ್ಲ ಎನ್ನುವಂತೆ ಸುಮ್ಮನ್ನಿದ್ದು ಬಿಡುತ್ತಾರೆ.
ಹಣ-ಚಿನ್ನ ಎಸ್ಕೇಪ್:
ಉಷಾಳನ್ನು ಕೊಂದು ಮುಗಿಸಿದ ಬಳಿಕ ಆಕೆಯ ಮೈಮೇಲಿದ್ದ ಆಭರಣಗಳನ್ನು ಎಸ್ಕೇಪ್ ಮಾಡಲು ವಿಶ್ವನಾಥ್ ಫ್ಲಾನ್ ಮಾಡುತ್ತಾನೆ. ಆದರೇ ಬಹುತೇಕ ಅವುಗಳಲ್ಲಿ ಓಲ್ಡ್ ಗೋಲ್ಡ್ ಎನ್ನುವುದು ಆತನಿಗೆ ಬಳಿಕ ತಿಳಿಯುತ್ತೆ. ರೋಲ್ಡ್ ಗೋಲ್ಡ್ ಕರಿಮಣಿ ಸರ, ಕಿವಿಯ ಓಲೆ, ಜುಮುಕಿ, ವಾಚ್, ಬೆಳ್ಳಿ ಕಾಲ್ಗೆಜ್ಜೆ, ಎರಡು ಮೊಬೈಲ್ ಹಾಗೂ ಹತ್ತು ಸಾವಿರ ಅಂದಾಜು ನಗದನ್ನು ಎತ್ತಿಕೊಂಡು ತನ್ನ ಹೆಂಡತಿ ಮನೆಯಲ್ಲಿಟ್ಟು ಬಿಡುತ್ತಾನೆ. ಆರೋಪಿಗಳಿಂದ ಇವೆಲ್ಲಾ ಸೊತ್ತುಗಳು ಹಾಗೂ ಮೋಟಾರ್ ಸೈಕಲನ್ನು ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಭೇಟಿ- ಕಾರ್ಯಾಚರಣೆ ತಂಡಕ್ಕೆ ಶ್ಲಾಘನೆ
ಗುರುವಾರ ಮಧ್ಯಾಹ್ನ ಬೆಳ್ವೆಯ ಗುಮ್ಮೊಲದ ಕೊಲೆ ನಡೆದ ಸ್ಥಳಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಳಿಕ ಕುಂದಾಪುರದಲ್ಲಿ ಮಾತನಾಡಿದ ಅವರು, ಮೂರೇ ದಿನದಲ್ಲಿ ಪ್ರಕರಣವನ್ನು ಪತ್ತೆಹಚ್ಚಿದ ಡಿವೈಎಸ್ಪಿ ಮಂಜುನಾಥ ಶೆಟ್ಟಿ ನೇತೃತ್ವದ ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ., ಶಂಕರನಾರಾಯಣ ಪಿಎಸ್ಸೈ ದೇಜಪ್ಪ ಮತ್ತು ಅಮಾಸೆಬೈಲು ಪಿಎಸ್ಸೈ ಸುನೀಲ್ ಕುಮಾರ್ ಹಾಗೂ ತಂಡವನ್ನು ಶ್ಲಾಘಿಸಿದರು.
ವರದಿ ಮತ್ತು ಚಿತ್ರ-ಯೋಗೀಶ್ ಕುಂಭಾಸಿ
ಇದನ್ನೂ ಓದಿ:
ಕುಂದಾಪುರ: ಬಿದಿರು ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಕೊಲೆ ಮಾಡಿ ಎಸೆದ ಶಂಕೆ
ಕುಂದಾಪುರ: ಬೆಳ್ವೆಯಲ್ಲಿ ಸಿಕ್ಕ ಅಪರಿಚಿತ ಮಹಿಳೆ ಶವದ ಗುರುತು ಪತ್ತೆ; ಹಾಗದ್ರೇ ನಡೆಯಿತಾ ಆಕೆ ಕೊಲೆ..?