ಮಂಗಳೂರು, ಡಿ.3: ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ವಿಶ್ವವಿಕಲಚೇತನರ ದಿನಾಚರಣೆ ಸರಕಾರದ ಪ್ರತಿನಿಧಿಗಳಿಲ್ಲದೆ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯು ನಗರದ ಪುರಭವನದಲ್ಲಿ ನಡೆಯಿತು.
ವಿಶೇಷ ಮಕ್ಕಳಿಗೆ ಸಹಾನುಭೂತಿಯ ಬದಲು ಅವರಿಗೆ ಸಾಂವಿಧಾನಿಕ ಮತ್ತು ಸಾಮಾಜಿಕವಾಗಿ ಸಲ್ಲಬೇಕಾದ ಸವಲತ್ತುಗಳನ್ನು ಸಿಗು ವಂತೆ ಮಾಡುವ ಪ್ರಯತ್ನ ಆಗಬೇಕಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ, ಎಲ್ಲ ಮಕ್ಕಳಂತೆ ವಿಶೇಷ ಮಕ್ಕಳಲ್ಲೂ ಇರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಬೇರೆ ಮಕ್ಕಳಂತೆ ಆರೈಕೆ ಮಾಡಿದರೆ ಅವರು ಸಾಮಾನ್ಯರಂತೆ ಬದುಕು ಕಟ್ಟಲು ಸಾಧ್ಯ ಎಂದರು.
ಸನ್ಮಾನ:
ಸಾಧನೆ ಮಾಡಿದ ವಿಶೇಷ ವಿದ್ಯಾರ್ಥಿಗಳಿಗೆ ಮತು ಶಿಕ್ಷಕ ಶಿಕ್ಷಕೇತ ರರನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ವಿಶೇಷ ವಿದ್ಯಾರ್ಥಿಗಳಾದ ದೀಕ್ಷಿತ್, ರೇಷ್ಮಾ ಜ್ಯೋತಿ ಸಲ್ದಾನ, ರೆಬೆಕಾ, ಮಿಥುನ್ ವಿಶೇಷ ವಿದ್ಯಾರ್ಥಿಗಳ ಶಿಕ್ಷಕ-ಶಿಕ್ಷಕೇತರರಾದ ಪುಷ್ಪಲತಾ, ಜೀಠಾ ಡಿಸೋಜ, ಬೀನಾ ಪಿ.ಎನ್., ಮೀನಾಕ್ಷಿ, ವೀಣಾ ಕುಲಾಲ್, ಸಬಿತಾ ಕಾಕತ್ಕರ್, ತೆರೆಸಿಟಾ, ಸುಂದರ್ ಕೋಟ್ಯಾನ್, ವಿಶೇಷ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ವರದರಾಜು, ಮುಹಮ್ಮದ್ ಝುನೈರ್ ಹಾಗೂ ವಸಂತ ಎಂಬವರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸನ್ಮಾನಿಸಿದರು.
ಕಾರ್ಯಕ್ರಮದ ಮೊದಲು ನಗರದ ವಿವಿ ಕಾಲೇಜು ಎದುರಿನಿಂದ ಪುರಭವನದವರೆಗೆ ವಿಕಲಚೇತನ ವಿದ್ಯಾರ್ಥಿಗಳ ಮೆರವಣಿಗೆ ಅದ್ದೂರಿಯಾಗಿ ಸಾಗಿತು.ಸಾನಿಧ್ಯ ವಸತಿ ಶಾಲೆಯ ಆಡಳಿತಾಧಿಕಾರಿ ವಸಂತಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದ.ಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಸಿಇಒ ಶ್ರೀ ವಿಧ್ಯಾ, ದಿನೇಶ್ ಶೆಟ್ಟಿ, ಮುರಳಿಧರ್ ನಾಯಕ್, ಅನ್ನಪೂರ್ಣ , ಸಂಚಾಲಕ ಚಂದ್ರಮೋಹನ್, ಲಯನ್ ಗಣೇಶ್ ಶೆಟ್ಟಿ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.