ಮಂಗಳೂರು: ನಮೋ ಬ್ರಿಗೇಡ್ ಅಶ್ರಯದಲ್ಲಿ ಅಂಬೆಯ ಕೂಗು-ಗೋವಿನ ಕಥೆ ಎಂಬ ವಿಶೇಷ ಕಾರ್ಯಕ್ರಮ ಶನಿವಾರ ನಗರದ ಸಂಘನಿಕೇತನದಲ್ಲಿ ಜರಗಿತು. ವಾರಣಾಸಿಯ ಖ್ಯಾತ ಗೋಕಥಾ ನಿರೂಪಕ ಫಯಾಝ್ ಖಾನ್ ಅವರು ಗೋವಿನ ಕುರಿತು ವಿಶೇಷ ಪ್ರವಚನ ನೀಡಿದರು.
ಗೋಮಾತೆ ದೇಶದ ಸಂಸ್ಕೃತಿಯ ಮೂಲ. ಗೋವು ದೇಶದ ಕೃಷಿ, ಜನರ ಆರೋಗ್ಯವನ್ನು ಕಾಪಾಡುವ ಕಾಮಧೇನು. ಎಲ್ಲಿ ಗೋ ಸಂಪತ್ತನ್ನು ನಿರ್ಲಕ್ಷ್ಯ ಮಾಡಲಾಗುತ್ತದೆಯೇ ಅಲ್ಲಿ ಕೃಷಿ ನಾಶವಾಗುತ್ತದೆ. ಇದು ಭಾರತೀಯರ ಹೃದಯದ ವಿಷಯ. ಇಲ್ಲಿ ರಾಜಕೀಯಕ್ಕೆ ಅವಕಾಶ ಇಲ್ಲ ಎಂದು ಅವರು ಹೇಳಿದರು.
ಹಿಂದೂ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಟಿಪ್ಪು ಸುಲ್ತಾನ್ ಕೂಡ ಎಲ್ಲಿಯೂ ಗೋ ಹತ್ಯೆ ಮಾಡಿದ ಉಲ್ಲೇಖ ಇತಿಹಾಸದಲ್ಲಿಲ್ಲ.ಗೋ ಕಡಿದವರ ಕೈ ಕಡಿಯುವ ಶಿಕ್ಷೆಯನ್ನೇ ನೀಡಿದ್ದಾರೆ. ಆದರೆ, ಇಂದು ಟಿಪ್ಪು ಹೆಸರಿನಲ್ಲಿ ರಾಜಕೀಯ ಮಾಡುವವರು ಟಿಪ್ಪುವಿನ ಈ ಕಾನೂನನ್ನು ಏಕೆ ಪಾಲಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಗೋ ಮಾಂಸ ಮುಸ್ಲಿಂರ ಆಹಾರ ಸಂಸ್ಕೃತಿಯೆಂದು ಬಿಂಬಿಸಲಾಗುತ್ತಿದೆ. ಆದರೆ, ಮಹಮ್ಮದ್ ಪೈಗಂಬರರು ಗೋವಿನ ಹಾಲು ಹಾಗೂ ತುಪ್ಪವನ್ನು ಔಷಧವೆಂದು ಹೇಳಿದ್ದಾರೆ. ಅಲ್ಲದೆ ಆಡು, ಒಂಟೆ, ಕುದುರೆ ಮಾಂಸಗಳನ್ನು ಇಷ್ಟ ಪಟ್ಟಿರುವ ಉಲ್ಲೇಖವಿದೆ. ಆದರೆ, ಗೋ ಮಾಂಸವನ್ನು ಇಷ್ಟಪಟ್ಟರೆಂಬುದಕ್ಕೆ ಎಲ್ಲೂ ಉಲ್ಲೇಖವಿಲ್ಲ ಎಂದರು.
ದೇಶದಲ್ಲಿ ಬೀಸುತ್ತಿರುವ ಅಸಹಿಷ್ಣುತೆ ಎಂಬ ಪದ ಅರ್ಥಹೀನವಾದದ್ದು. ಎಲ್ಲಾ ಧರ್ಮೀಯರು ಸಹಿಷ್ಣುಗಳಾಗಿಯೇ ಬಾಳಿ ಬದುಕಿದ ನೆಲದಲ್ಲಿ ಇದ್ದಕ್ಕಿದ್ದಂತೆ ಅಸಹಿಷ್ಣುತೆ ಎಂಬ ಪದವನ್ನು ಬಳಸಿ ವಾತಾವರಣವನ್ನು ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ. ವಿವೇಕಾನಂದರಂತಹ ಮಹಾನುಭಾವರು ಹುಟ್ಟಿ ಬೆಳೆದ ಭಾರತ ಪವಿತ್ರವಾಗಿತ್ತು, ಪವಿತ್ರವಾಗಿದೆ, ಪವಿತ್ರವಾಗಲಿದೆ ಎಂದರು.