ಕುಂದಾಪುರ: ಕುಂದಾಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರದ ಹೇರಿಕುದ್ರು ಬ್ರಿಡ್ಜಿನಲ್ಲಿ ಶುಕ್ರವಾರ ನಡೆದಿದೆ.
ಅಗ್ನಿಶಾಮಕ ಸಿಬಂದಿ ಕುಂದಾಪುರ ಮದ್ದುಗುಡ್ಡೆ ನಿವಾಸಿ ಭಾಸ್ಕರ ಖಾರ್ವಿ (46) ನೇಣಿಗೆ ಶರಣಾದವರು.
ಘಟನೆ ವಿವರ: ರಾತ್ರಿ ಅಗ್ನಿಶಾಮಕ ಠಾಣೆಯಲ್ಲಿ ಸೆಂಟ್ರಿಯಾಗಿ ಕರ್ತವ್ಯ ನಿರ್ವೈಸಿ ಬೆಳಿಗ್ಗೆ ಮನೆಗೆ ಬಂದಿದ್ದ ಭಾಸ್ಕರ್ ಅವರು ಮನೆಯಲ್ಲಿ ಕಾಫಿ ಕುಡಿದು ಬಳಿಕ ಬೈಕಿನಲ್ಲಿ ಹೊರಗಡೆ ತೆರಳಿದ್ದರು. ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಹೇರಿಕುದ್ರು ಬ್ರಿಡ್ಜಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗಂಡಸಿನ ಶವವೊಂದು ಪತ್ತೆಯಾಗಿದ್ದು ಸ್ಥಳಿಯರು ಹಾಗೂ ಪೊಲೀಸರು ಆಗಮಿಸಿ ನೋಡುವಾಗ ಇದು ಭಾಸ್ಕರ್ ಖಾರ್ವಿ ಅವರ ಮ್ರತದೇಹವೆಂದು ಗುರುತಿಸಿದ್ದರು. ಹಗ್ಗವನ್ನು ಬ್ರಿಡ್ಜ್ಗೆ ಬಿಗಿದು ಹೊಳೆಯತ್ತ ಹಾರಿದ್ದು ಈ ಸಂದರ್ಭ ಕುತ್ತಿಗೆಗೆ ನೇಣಿನ ಹಗ್ಗ ಬಿಗಿದು ಅವರು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ.
ಸುಮಾರು 18 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ್ ಅವರು ಉತ್ತಮ ಕೆಲಸಗಾರರಾಗಿದ್ದರು. ತನ್ನ ಕರ್ತವ್ಯದಲ್ಲಿ ಹಿಂದೆಮುಂದೆ ನೋಡದೇ ಮುನ್ನುಗ್ಗಿ ಕೆಲಸ ಮಾಡಿತ್ತಿದ್ದ ಭಾಸ್ಕರ್ ಅವರು ಉತ್ತಮ ಈಜುಪಟು ಹಾಗೂ ಮುಳುಗು ತಜ್ನರಾಗಿದ್ದರು. ಮದ್ದುಗುಡ್ಡೆ ನಿವಾಸದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.
ಕುಂದಾಪುರ ಶವಾಗಾರದಲ್ಲಿ ಮ್ರತದೇಹವನ್ನು ಇರಿಸಲಾಗಿದ್ದು ಅಗ್ನಿಶಾಮಕದಳದ ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆ ಎಂಬ ಮಾಹಿತಿಯಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.