ಮಂಗಳೂರು, ನ.27: ವಿಶ್ವವಿದ್ಯಾಲಯಗಳು ಕೇವಲ ಜ್ಞಾನಾರ್ಜನೆಯ ಕೇಂದ್ರಗಳಾಗಬಾರದು. ಅದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕೇಂದ್ರವಾಗಬೇಕು. ಗ್ರಾಮೀಣ ಭಾಷೆ ಅಥವಾ ಆಡು ಭಾಷೆಗಳ ಬಗ್ಗೆ ಎಲ್ಲ ವಿವಿಗಳಲ್ಲೂ ಒಂದು ಪ್ರತ್ಯೇಕ ಪೀಠ ಅಥವಾ ಅಧ್ಯಯನ ವಿಭಾಗ ಸ್ಥಾಪಿಸಬೇಕು. ಇದರಿಂದ ಇತರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ತಾವು ಹೊರ ರಾಜ್ಯದವರಲ್ಲ ಎಂಬ ಭಾವನೆ ಮೂಡಿಸಲು ಸಾಧ್ಯ ಎಂದು ಅಸ್ಸಾಂ ಹಾಗೂ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಗುರುವಾರ ನಡೆದ ಈಶಾನ್ಯ ರಾಜ್ಯ ಅಧ್ಯಯನ ಕೇಂದ್ರ ‘ನಮಸ್ತೆ’ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕವಿತಾ ಪಿ. ಆಚಾರ್ಯ, ನಿಟ್ಟೆ ವಿವಿಯ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಕುಲಪತಿ ಪ್ರೊ.ಡಾ.ಎಸ್.ರಮಾನಂದ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ ಪ್ರೊ.ಡಾ. ಎಂ.ಎಸ್.ಮೂಡಿತ್ತಾಯ ವಂದಿಸಿದರು.