ಕಾಸರಗೋಡು, ನ.26: ಪ್ರೇತಬಾಧೆ ಇದೆ ಎಂಬ ನಂಬಿಕೆಯಿಂದ ಕೆಎಸ್ಆರ್ಟಿಸಿ ಅಧಿಕಾರಿಗಳ ಸಮ್ಮುಖದಲ್ಲೇ ಡಿಪೋದಲ್ಲಿ ಮಧ್ಯರಾತ್ರಿ ಹೋಮ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿವಾದ ಹುಟ್ಟುಹಾಕಿದೆ. ಘಟನೆ ಬೆಳಕಿಗೆ ಬರುತ್ತಲೇ ಇಲಾಖೆಯ ವಿಜಿಲೆನ್ಸ್ ವಿಭಾಗ ತನಿಖೆ ಆರಂಭಿಸಿದೆ.
ಅ.22ರಂದು ಘಟನೆ ನಡೆದಿದ್ದು, ಒಂದು ತಿಂಗಳ ಬಳಿಕ ಹೋಮ ನಡೆದಿರುವ ವಿಷಯ ಬೆಳಕಿಗೆ ಬಂದಿದ್ದು, ಮಧ್ಯರಾತ್ರಿ ಕಚೇರಿಯಲ್ಲಿ ನಡೆದ ಈ ಹೋಮ ಎಲ್ಲರನ್ನು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕರ್ನಾಟಕ ಗಡಿ ಪ್ರದೇಶದ ಜ್ಯೋತಿಷಿಯೊಬ್ಬರ ನೇತೃತ್ವದಲ್ಲಿ ಈ ಪೂಜೆ ನಡೆದಿದೆ. ಆಗಾಗ ಕೆಎಸ್ಸಾರ್ಟಿಸಿ ಬಸ್ಗಳು ಅಪಘಾತಕ್ಕಿಡಾಗುತ್ತಿದ್ದು. ಇದು ಪ್ರೇತಬಾಧೆ ಎಂಬ ಮೂಢನಂಬಿಕೆಯಿಂದ ಈ ಹೋಮ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಆಯುಧ ಪೂಜೆಯಂಗವಾಗಿ ಗಣಪತಿ ಪೂಜೆ ಮಾತ್ರ ನಡೆದಿರುವುದಾಗಿ ಈ ಕುರಿತು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಜ್ಯೋತಿಷ್ಯರನ್ನು ಕರೆಸಿ ಹೋಮ ನಡೆಸಲು ಕಾರಣ ಏನೆಂಬುದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಕೆಎಸ್ಸಾರ್ಟಿಸಿ ಬಸ್ಗಳು ಆಗಾಗ ಅಪಘಾತಕ್ಕೆ ಒಳಗಾಗುತ್ತಿರುವ ಬಗ್ಗೆ ಕೆಲ ಚಾಲಕರು ಜ್ಯೋತಿಷ್ಯರಲ್ಲಿಗೆ ತೆರಳಿದಾಗ ಡಿಪೋ ಕಾರ್ಯಾಚರಿಸುತ್ತಿರುವ ಸ್ಥಳದಲ್ಲಿ ಪ್ರೇತ ಬಾಧೆ ಇದ್ದು , ಇದರಿಂದ ಮುಕ್ತಿ ಲಭಿಸಿದ್ದಲ್ಲಿ ಮಾತ್ರ ಅಪಘಾತ ತಡೆಗಟ್ಟಲು ಸಾಧ್ಯ ಎಂದು ಜ್ಯೋತಿಷಿ ತಿಳಿಸಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿಷಿಯ ನೇತೃತ್ವದಲ್ಲಿ ಪೂಜೆ ನಡೆದಿದೆ ಎನ್ನಲಾಗಿದೆ. ಹಣವನ್ನು ಚಾಲಕರು ಒಟ್ಟು ಗೂಡಿಸಿದ್ದಾಗಿಯೂ ತಿಳಿದುಬಂದಿದೆ.
ಇದೀಗ ಈ ಘಟನೆ ರಾಜ್ಯದಲ್ಲೇ ಹೊಸ ವಿವಾದ ಸೃಷ್ಟಿಸಿದ್ದು, ತನಿಖೆಗೂ ಆದೇಶಿಸಲಾಗಿದೆ.