ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ನ.22: ಮಂಗಳೂರಿನ ಮಣ್ಣಗುಡ್ಡೆ, ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ನವತಿ ಸಂಭ್ರಮಾಚರಣೆ (90ನೇ ವರ್ಷಾಚರಣೆ) ಹಾಗೂ ದೇವಾಡಿಗರ ಸಂಘದ ನವೀಕೃತ ಹವಾನಿಯಂತ್ರಿತ ಸಮಾಜ ಭವನದ ಉದ್ಘಾಟನಾ ಸಮಾರಂಭ ರವಿವಾರ ನೆರವೇರಿತು.
ನವತಿ ಸಂಭ್ರಮಾಚರಣೆ ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ| ವೀರೇಂದ್ರ ಹೆಗ್ಗಡೆಯವರು ನವತಿ ಸಮೃದ್ಧಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿದರು. ಬಳಿಕ ಮಾತನಾಡಿದ ಅವರು, ಡಾ| ವೀರಪ್ಪ ಮೊಯ್ಲಿಯವರು ದೇವಾಡಿಗ ಸಮಾಜದ ಅಗ್ರಗಣ್ಯ ನಾಯಕರು. ಸಮಾಜದ ಬೆಳವಣಿಗೆಯಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ.
ಮುಖ್ಯ ಮಂತ್ರಿಯಾಗಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಉಪಯುಕ್ತ ಕಾನೂನು ಜ್ಯಾರಿಗೆ ತಂದವರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ದೇಶದ ಆಡಳಿತದಲ್ಲಿ ಮಾರ್ಗದರ್ಶನ ನೀಡಿ ರಾಜಕೀಯ ವಲಯದಲ್ಲಿ ಮನೆ ಮಾತಾದವರು. ಬಡಕುಟುಂಬದಿಂದ ಬಂದ ವೀರಪ್ಪ ಮೊಯ್ಲಿ ತಮ್ಮ ಜೀವನದಲ್ಲಿ ಹಂತ ಹಂತವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಧನೆ ಮಾಡಿದವರು. ರಾಜಕಾರಣಿಯಾಗಿ, ಸಮಾಜ ಸೇವಕನಾಗಿ, ಸಾಹಿತಿಯಾಗಿ ದೇಶದಲ್ಲಿ ಹಲವಾರು ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಇದೀಗ ಅವರು ಬರೆದ ಮಹಾಕಾವ್ಯ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾನ್ ಕೃತಿಗೆ ಪ್ರತಿಷ್ಠಿತ ‘ಸರಸ್ವತಿ ಸಂಮಾನ್’ ಪ್ರಶಸ್ತಿಯು ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ. ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಬಹುಬಲಿಯ ಮಹಾಕಾವ್ಯ ಬರೆಯುವಂತೆ ವೀರಪ್ಪ ಮೊಯ್ಲಿಯವರಿಗೆ ಹೇಳಿದ್ದರು.
ಆದರೆ ಅವರು ತಮ್ಮಲ್ಲಿ ರಾಮನನ್ನು ತುಂಬಿಕೊಂಡಿರುವುದರಿಂದಾಗಿ ಅವರು ರಾಮಾಯಣವನ್ನು ಬರೆದರು. ಆದರೆ ಇದೀಗ ಬಾಹುಬಲಿಯ ಕಾವ್ಯವನ್ನು ಬರೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಬಾಹು ಬಲಿಯು ಅತ್ಯಂತ ಎತ್ತರವಾಗಿ ಬೆಳೆದು ನಿಂತಿದ್ದಾನೆ. ಬಾಹುಬಲಿಯನ್ನು ಸಂಪೂರ್ಣವಾಗಿ ತುಂಬಿಕೊಂಡು ಬಳಿಕ ಕಾವ್ಯವನ್ನು ಆರಂಭಿಸಿ ಎಂದು ಡಾ.ವೀರೆಂದ್ರ ಹೆಗ್ಗಡೆ ಸಲಹೆ ನೀಡಿದರು
ಯಾವೂದೇ ಪದವಿಗಳು ಮುಂದೊಂದು ದಿನ ಮಾಜಿ ಯಾಗ ಬಹುದು. ಆದರೆ ಕವಿಗಳಿಗೆ, ಸಾಹಿತಿಗಳಿಗೆ ಮಾಜಿಯೆಂಬುವುದೇ ಇಲ್ಲ. ಈ ಸಾಲಿಗೆ ಸೇರಿದವರು ಡಾ.ಮೊಯ್ಲಿಯವರು ಎಂದು ಡಾ.ವೀರೆಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ನವೀಕೃತ ಹವಾನಿಯಂತ್ರಿತ ಸಮಾಜ ಭವನ ಹಾಗೂ ಮಂಗಳ ಸಾಂಸ್ಕೃತಿಕ ರಂಗ ಮಂದಿರವನ್ನು ಮಾಜಿ ಕೇಂದ್ರ ಸಚಿವ ಡಾ| ವೀರಪ್ಪ ಮೊಯ್ಲಿ ಹಾಗೂ ಶ್ರೀಮತಿ ಮಾಲತಿ ವೀರಪ್ಪ ಮೊಯ್ಲಿ ದಂಪತಿಗಳು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಡಾ| ವೀರಪ್ಪ ಮೊಯ್ಲಿಯವರು ಬರೆದ ಮಹಾಕಾವ್ಯ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾನ್ ಕೃತಿಗೆ ಪ್ರತಿಷ್ಠಿತ ‘ಸರಸ್ವತಿ ಸಂಮಾನ್’ ಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ ದೇವಾಡಿಗರ ಸಂಘದ ವತಿಯಿಂದ ಡಾ| ವೀರಪ್ಪ ಮೊಯ್ಲಿಯವರನ್ನು ಗೌರವ ಪೂರ್ವಕವಾಗಿ ಸಮ್ಮಾನಿಸಿ ಪುರಸ್ಕರಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮೊಯ್ಲಿಯವರು, ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದಕ್ಕೆ ಈ ಎಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು.ಪರಿವರ್ತನಾ ಮನೋಭಾವದೊಂದಿಗೆ ಪರಿಶ್ರಮ ಮತ್ತು ಚಲದಿಂದ ಹೋರಾಟ ಮಾಡಿದರೆ ಯಶಸ್ಸು ಸಾಧ್ಯ. ಜೀವನದಲ್ಲಿ ಇಚ್ಚಾಶಕ್ತಿ ಬೇಕು. ಅಧ್ಯಯನ ಶೀಲತೆ ಬೇಕು. ಪ್ರಾಮಣಿಕ ಪ್ರಯತ್ನದಿಂದ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ನಮ್ಮ ಕರ್ನಾಟಕದ ಪರಂಪರೆ ಮುಂದೆ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ಇಂಥ ರಾಜ್ಯದಲ್ಲಿ ಹುಟ್ಟಿದಕ್ಕೆ ನನಗೆ ಹೆಮ್ಮೆಯಾಗುತ್ತದೆ. ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಬಾಹುಬಲಿ ಸ್ಪೂರ್ತಿ. ಈ ಸ್ಪೂರ್ತಿಯಿಂದಲೇ ಬಾಹುಬಲಿ ಮಹಾಕಾವ್ಯವನ್ನು ನಾನು ಆರಂಭಿಸಿದ್ದು, ಒಂದು ಹಂತದವರೆಗೆ ಕಾವ್ಯ ಬರೆದಾಗಿದೆ ಎಂದು ಡಾ.ಮೊಯ್ಲಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ 90 ವರ್ಷಗಳ ಅವಲೋಕನ, ಸಂಘದ ಅಭಿವೃದ್ಧಿ ಕಾರ್ಯಕ್ರಮಗಳ ಚಿತ್ರಣ ಹಾಗೂ ಡಾ.ಎಂ. ವೀರಪ್ಪ ಮೊಯ್ಲಿಯವರಿಗೆ ಸನ್ಮಾನ್ಯ ರಾಷ್ಟ್ರಪತಿಯವರಿಂದ ಬಿರ್ಲಾ ಪೌಂಡೇಶನ್ ಪ್ರತಿಷ್ಠಿತ “ಸರಸ್ವತಿ ಸಂಮಾನ” ಪ್ರಶಸ್ತಿ ಪ್ರದಾನ ಸಂದರ್ಭದ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಿತು.
ಸಚಿವ ರಮಾನಾಥ ರೈ, ಸಂಸದ ನಳೀನ್ ಕುಮಾರ್ ಕಟೀಲ್, ಅಭಯಚಂದ್ರ ಜೈನ್, ಶಾಸಕ ಜೆ. ಆರ್. ಲೋಬೋ, ಎಂ. ಎಲ್.ಸಿ, ಐವನ್ ಡಿ’ಸೋಜಾ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಕಾರ್ಪೊರೇಟರ್ ಜಯಂತಿ ಆಚಾರ್, ದುಬೈ ದೇವಾಡಿಗರ ಸಂಘದ ಅಧ್ಯಕ್ಷ ಹಾಗೂ ದುಬೈಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್, ಕುವೆಂಪು ವಿವಿ ಶಿವಮೊಗ್ಗ ಇದರ ವಿಶ್ರಾಂತ ಕುಲಪತಿ ಡಾ| ಬಿ. ಎಸ್. ಶೇರಿಗಾರ್, ನ್ಯೂರೋ ಸರ್ಜನ್ ಡಾ| ಕೆ. ವಿ. ದೇವಾಡಿಗ, ವಿಶ್ವ ತುಳು ಒಕ್ಕೂಟದ ಅಧ್ಯಕ್ಷ ಶ್ರೀ ಧರ್ಮಪಾಲ. ಯು. ದೇವಾಡಿಗ, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ವಾಸು ದೇವಾಡಿಗ ಮುಂತಾದವರು ಅತಿಥಿಗಳಾಗಿದ್ದರು.
ದೇವಾಡಿಗರ ಸಂಘದ ಅಧ್ಯಕ್ಷ ಶ್ರೀ ವಾಮನ್ ಮರೋಳಿಯವರು ಸ್ವಾಗತಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಶಿವರಾಮ ಶೆಟ್ಟಿಯವರು ಡಾ| ಮೊಯ್ಲಿಯವರ ಸಾಹಿತ್ಯ ವಿಮರ್ಶೆ ಮಾಡಿದರು. ಸ್ಮರಣ ಸಂಚಿಕೆಯ ಸಂಪಾದಕರಾದ ಶ್ರೀ ಸುಭಾಶ್ಚಂದ್ರ ಕಣ್ವತೀರ್ಥರವರು ಪ್ರಸ್ತಾವನೆಗೈದರು. ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ವಿ.ಕಲ್ಯಾಣಪುರ್ ವಂದಿಸಿದರು.ವಿಜೇಶ್ ದೇವಾಡಿಗ ಹಾಗೂ ಯಶವಂತಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಉಪಾಧ್ಯಕ್ಷ ಶ್ರೀ ರತ್ನಾಕರ್ ದೇವಾಡಿಗ, ಕಾರ್ಯದರ್ಶಿ ಶ್ರೀ ಎಂ. ದೇವದಾಸ್, ಸಂಘಟನಾ ಕಾರ್ಯದರ್ಶಿ ಶ್ರೀ ಯಶವಂತ ದೇವಾಡಿಗ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ವಿ.ಕಲ್ಯಾಣಪುರ್, ಹಾಗೂ ಯುವ ಸಂಘಟನೆಯ ಅಧ್ಯಕ್ಷ ಪ್ರಶಾಂತ್.ಯಂ.ಯಚ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
_________________________________
ದೇವಾಡಿಗ ಸಮಾಜದ ಭಾಂದವರಿಂದ ಸಾಂಸ್ಕೃತಿಕ ಕಾರ್ಯಕ್ರಮ : ಮನಸೆಳೆದ ಆಕರ್ಷಕ, ವೈವಿಧ್ಯಮಯ ನೃತ್ಯ ಪ್ರದರ್ಶನ ಹಾಗೂ…
ಚಿತ್ರ : ಶುಭಂ ಸ್ಟೂಡಿಯೋ ಮಣ್ಣಗುಡ್ಡ, ಮಂಗಳೂರು
ಸಭಾಕಾರ್ಯಕ್ರಮದ ಬಳಿಕ ಸಮಾಜದ ಭಾಂದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.