ಮ೦ಗಳೂರು,ನ.20: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭ ಹಾಗೂ ನೂತನ ಸಂಚಾರಿ ಗ್ರಂಥಾಲಯ ವಾಹನಕ್ಕೆ ಶುಕ್ರವಾರ ನಗರದ ಕೇಂದ್ರ ಗ್ರಂಥಾಲಯ ಬಾವುಟಗುಡ್ಡೆ ಮಂಗಳೂರು. ಇಲ್ಲಿ ಮ.ನ.ಪಾ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ಹಸಿರು ನಿಶಾನೆ ನೀಡಿ ಚಾಲನೆ ನೀಡಿದರು.
ಗ್ರಂಥಾಲಯದ ವರದಿ ಈ ಕೆಳಗಿನಂತಿದೆ :
ಮಂಗಳೂರು ನಗರ ಕೇಂದ್ರ ಗ್ರಂಥಾಲಯದ ಎಂ.ಎಸ್.ಏಕಾಂಬರ ರಾವ್ ಸ್ಮಾರಕ ಸಂಚಾರಿ ಗ್ರಂಥಾಲಯವು 1987 ರಲ್ಲಿ ಪ್ರಾರಂಭಗೊಂಡು ಮಂಗಳೂರಿನ ಓದುಗ ಬಾಂಧವರ ಮನೆ ಬಾಗಿಲಿಗೆ ಗ್ರಂಥಾಲಯ ಸೌಲಭ್ಯವನ್ನು ನೀಡುವುದರಲ್ಲಿ ವಿಶೇಷ ಪಾತ್ರವಹಿಸುತ್ತಿತ್ತು. ಆದರೇ ತೀರ ಹಳೆಯದಾಗಿ ತಾಂತ್ರಿಕ ತೊಂದರೆಗಳಿಂದ ನಿರ್ಧರಿತ ಸೇವೆಗಳನ್ನು ನೀಡಲು ಸಂಕಷ್ಟ ಎದುರಾದ ಕಾರಣ ಹಳೆಯ ವಾಹನವನ್ನು ವಿಲೇಗೊಳಿಸಿದ ಪ್ರಯುಕ್ತ ಸುಮಾರು 4 ವರ್ಷಗಳಿಂದ ಈ ಅಮೂಲ್ಯ ಸೇವೆಯು ಸ್ಥಗಿತಗೊಂಡಿತ್ತು. ಈಗ ನಗರ ಗ್ರಂಥಾಲಯ ಪ್ರಾಧಿಕಾರ ನಿಧಿಯಿಂದಲೇ ರೂ. 25,86,794-00 ರ ವೆಚ್ಚದಲ್ಲಿ ನೂತನ ಅತ್ಯಾಕರ್ಷಕ, ಸುಸಜ್ಜಿತ, ಆಧುನಿಕ ಸೌಲಭ್ಯಗಳೊಂದಿಗೆ ಶೃಂಗಾರಗೊಂಡ ಎಂ.ಎಸ್.ಏಕಾಂಬರ ರಾವ್ ನೂತನ ಸಂಚಾರಿ ಗ್ರಂಥಾಲಯ ವಾಹನವು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಈಗ ಸ್ಮಾರ್ಟ್ ಸಿಟಿ ಎಡೆಗೆ ದಾಪುಗಾಲಿಡುವ ಮಂಗಳೂರು ನಗರದ ಜನತೆಯ ಮನೆ ಬಾಗಿಲಿಗೆ ಗ್ರಂಥವನ್ನು ತಲುಪಿಸುವ ಕಾತುರತೆಯಿಂದ ಸಜ್ಜಾಗಿದೆ.
ಸಾಹಿತ್ಯದ ಹಲವು ಆಯಾಮಗಳಾದ ಕಥೆ, ಕವನ, ಕಾದಂಬರಿ, ಹಾಗೂ ವಿಜ್ಞಾನ ವಿಸ್ಮಯಗಳು, ಪ್ರಚಲಿತ ವಿದ್ಯುನ್ಮಾನಗಳು, ಸ್ಪರ್ಧಾತ್ಮಕ ಪುಸ್ತಕ, ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಒಳಗೊಂಡ ಸರಿ ಸುಮಾರು 10,000 ಗ್ರಂಥಗಳನ್ನು ತನ್ನ ಒಡಲಾಳದಲ್ಲಿ ತುಂಬಿಕೊಂಡು ಮಂಗಳೂರಿನ ಜನತೆಯ ಮನೆ ಬಾಗಿಲಿಗೆ ಉನ್ನತ ಸೇವೆ ನೀಡಲಿರುವುದು ಈ ಸಂಚಾರಿ ಗ್ರಂಥಾಲಯ.
ಈ ಗ್ರಂಥಾಲಯದ ವೈಶಿಷ್ಟ್ಯತೆಗಳಲ್ಲಿ LED TV, DVD, ಮೈಕ್ GPRS ಸೌಕರ್ಯವನ್ನು ಹಾಗೂ ಓದುಗರ ದಣಿವನ್ನು ನೀಗಿಸಲು ಬಿಸಿನೀರಿನ ಸೌಕರ್ಯ ಲಭ್ಯವಿದೆ. ವಿಶಾಲ ಸ್ಥಳಾವಕಾಶದೊಂದಿಗೆ ಯಥೇಚ್ಛವಾದ ಗಾಳಿ ಬೆಳಕಿನ ಸೌಲಭ್ಯವಿದೆ.