ಮಂಗಳೂರು: ಮೂಲ ಸೌಕರ್ಯಗಳ ಜೊತೆಗೆ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯೇ ಸ್ಮಾರ್ಟ್ ಸಿಟಿ. ಈ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ತಿಳಿದುಕೊಳ್ಳುವಲ್ಲಿ ಜನರ ಸ್ಪಂದನೆ, ಉತ್ಸಾಹ ದೊಡ್ಡದು ಎಂದು ರಾಜ್ಯ ಸರ್ಕಾರದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ರವೀಂದ್ರ ಹೇಳಿದರು.
ಮನಪಾ ಹಾಗೂ ನಿಸ್ಪಾನ ಇನ್ನೋವೇಟಿವ್ ಫ್ಲಾಟ್ ಫಾರಂಸ್ ಸಂಯುಕ್ತಾಶ್ರಯದಲ್ಲಿ ನಗರದ ಟಿ ಎಂ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನ.16 ಮತ್ತು 17 ರಂದು ಹಮ್ಮಿಕೊಂಡಿರುವ ‘ಸುಸ್ಥಿರ ಸ್ಮಾರ್ಟ್ ನಗರಗಳು ಭಾರತ 2015’ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಸಿಟಿ ಪರಿಕಲ್ಪನೆ ಬಗ್ಗೆ ರಾಜ್ಯಾದ್ಯಂತ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ಮೂಲಕ ವ್ಯಕ್ತವಾದ ಅನೇಕ ಅಭಿಪ್ರಾಯಗಳನ್ನು ಸಂಗ್ರಹಿಸಿ, ಕ್ರೋಢೀಕರಿಸಲಾಗಿದೆ. ಅತ್ಯುತ್ತಮವಾದ ಅಭಿಪ್ರಾಯಕ್ಕೆ ಬಹುಮಾನವನ್ನೂ ಘೋಷಿಸಲಾಗಿದೆ. ಜೊತೆಗೆ ಸ್ಮಾರ್ಟ್ ಸಿಟಿಗೆ ಪರ್ಯಾಯವಾದ, ಸಮರ್ಥವಾದ ಹೆಸರನ್ನು ಗಣ್ಯರು ಸೂಚಿಸಿದ್ದಾರೆ. ಇನ್ನು ಮುಂದೆ ಸ್ಮಾರ್ಟ್ ಸಿಟಿ ಸಮರ್ಥ ನಗರವಾಗಿ ಜನಪ್ರಿಯಗೊಳ್ಳಲಿದೆ ಎಂದರು.
ಭಾರತದ ಸಮರ್ಥ ಸ್ಮಾರ್ಟ್ ನಗರಗಳ ಕುರಿತ (ನಗರದ ಟಿ ಎಂ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಅಯೋಜಿಸಲಾದ) ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶವನ್ನು ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಉದ್ಘಾಟಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ನಾವು ಮಂಗಳೂರಿಗರು ಎನ್ನಲು ನಮಗೆ ಹೆಮ್ಮೆಯಾಗುತ್ತಿದೆ. ಎರಡು ಸಾವಿರ ವರ್ಷಗಳಿಂದ ಈ ನಗರವು ಅಸ್ತಿತ್ವಹೊಂದಿದ್ದು, ಇಲ್ಲಿ ಆಂಗ್ಲರು, ಪೋರ್ಚುಗೀಸರು, ಡಚ್ಚರು, ಬ್ರಿಟೀಷರು ಆಡಳಿತ ನಡೆಸಿದ್ದರು. ಈಗ ನಾವು ಜೀವಿಸುತ್ತಿದ್ದೇವೆ ಎಂದರು.
ಈ ನಗರದಲ್ಲಿ ಹೆಚ್ಚು ವ್ಯಾಪಾರ ನಡೆಯುತ್ತಿದ್ದು, ಹುಬ್ಬಳ್ಳಿ, ಧಾರವಾಡವನ್ನೂ ಹಿಂದಿಕ್ಕಿ ಅಭಿವೃದ್ಧಿಯತ್ತ ಸಾಗುತ್ತಿದೆ. ಶೈಕ್ಷಣಿಕವಾಗಿಯೂ ಮುಂದುವರಿದಿರುವ ನಗರದಲ್ಲಿ ವೈದ್ಯಕೀಯ ಪ್ಯಾರಾಮೆಡಿಕಲ್ , ಎಂಜಿನಿಯರಿಂಗ್, ಡೆಂಟಲ್ ಕಾಲೇಜುಗಳಿವ ಇಂತಹ ನಗರವನ್ನು ಇನ್ನಷ್ಟು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಸ್ಮಾರ್ಟ್ ಸಿಟಿ ಯೋಜನೆ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಮಣಿಪಾಲ ಕಾಲೇಜಿನ ಡೀನ್ ಡಾ. ಹೆಚ್.ಎಸ್. ಬಲ್ಲಾಳ್, ಪಾಲಿಕೆ ಆಯುಕ್ತ ಡಾ. ಹೆಚ್.ಎನ್.ಗೋಪಾಲಕೃಷ್ಣ, ಮಂಗಳೂರು ನಗರಾಭಿವೃದ್ಧಿ ಆಯುಕ್ತ ನಜೀರ್, ಮುಖ್ಯೋಪಾದ್ಯಾಯ ಡಾ.ರವೀಂದ್ರ, ಸಾಗರ್ ಮುಂತಾದವರು ಉಪಸ್ಥಿತರಿದ್ದರು.