ಮಂಗಳೂರು,ನ.16: ಸೃಷ್ಟಿ ಎಂಬುವುದು ಮನುಷ್ಯನ ಮನೆ. ಸೃಷ್ಟಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯ. ಸೃಷ್ಟಿಗೆ ಹಾನಿಗೊಳಿಸುವುದು ಬಹಳಷ್ಟು ಸುಲಭ. ಸೃಷ್ಟಿ ಎಂಬ ಈ ಮನೆಯನ್ನು ವಿಕೃತಗೊಳಿಸುವುದು ಅಥವಾ ಹಾನಿಮಾಡುವುದು ಅನೈತಿಕ. ಆದುದರಿಂದ ನಾವೆಲ್ಲರೂ ಸೇರಿ ಸೃಷ್ಟಿಯ ಸಂರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ ಮತ್ತು ಅದನ್ನು ಪಾಲಿಸಬೇಕೆಂದು ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜರವರು ಪ್ರತಿಜ್ಞಾ ಆಂದೋಲನದ ಸಮಾರೋಪ ಸಮಾರಂಭದ ಅಧ್ಯಕ್ಷೀಯ ಭಾಷಣದಲ್ಲಿ ಜನರಿಗೆ ಕರೆಕೊಟ್ಟರು.
ಮಂಗಳೂರು ಧರ್ಮಪ್ರಾಂತ್ಯದ ಸಾಮಾಜಿಕ ಕಳಕಳಿ ಸಮಿತಿಯ ಸಂಚಾಲಕರಾದ ವಂದನೀಯ ಓನಿಲ್ ಡಿಸೋಜರವರು ಎಲ್ಲರನ್ನು ಸ್ವಾಗತಿಸಿ ಸೃಷ್ಟಿಯ ಸಂರಕ್ಷಣೆಗೆ ಮಂಗಳೂರು ಧರ್ಮಪ್ರಾಂತ್ಯದ ಸದಸ್ಯರು ಶ್ರಮಿಸುತ್ತಿದ್ದು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಕ್ರಿಯಾತ್ಮಕವಾಗಿ ಶ್ರಮಿಸುವ ಬಗ್ಗೆ ವಿವರಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಸಾಮಾಜಿಕ ಕಳಕಳಿ ಸಮಿತಿಯ ಸಹಸಂಚಾಲಕರಾದ ಲೂವಿಸ್ ಜೆ. ಪಿಂಟೊರವರು ಮಾತನಾಡಿ ಸುಮಾರು ೨ ಲಕ್ಶ ಮಂದಿಗೆ ಸೃಷ್ಟಿಯ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮಾಡಿಸಲಾಗಿದ್ದು ಅವರ ಪೈಕಿ 34,370 ಮಂದಿ ಸೃಷ್ಟಿಯ ಸಂರಕ್ಷಣೆ ನಮ್ಮ ಕರ್ತವ್ಯ ಎಂದು ಪ್ರತಿಜ್ಞೆ ಮಾಡಿರುತ್ತಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಧರ್ಮಾಧ್ಯಕ್ಷರು ಚೀಟಿ ಎತ್ತುವ ಮೂಲಕ ಅದೃಷ್ಟವಂತ ಪ್ರತಿಜ್ಞೆಗೈದ ವ್ಯಕ್ತಿಯನ್ನು ಆಯ್ಕೆ ಮಾಡಿದರು. ಅದರಲ್ಲಿ ಸೈಂಟ್ ಆನ್ಸ್ನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಕುಮಾರಿ. ರಕ್ಷಿತಾ ಎಂಬುವವರು ಚಿನ್ನದ ನಾಣ್ಯದ ಬಹುಮಾನಕ್ಕೆ ಆಯ್ಕೆಯಾದರು.
ಮಂಗಳೂರು ಧರ್ಮಪ್ರಾಂತ್ಯದ ಕಾರ್ಯದರ್ಶಿ ಎಂ.ಪಿ.ನೊರೊನ್ಹಾ ಮಾತನಾಡಿ ದೇವರು ಸೃಷ್ಟಿಸಿದ ಈ ಜಗತ್ತಿನಲ್ಲಿ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸದೆ, ಸೃಷ್ಟಿಯ ಸಂರಕ್ಷಣೆಗೆ ಹಗಲಿರುಳು ಶ್ರಮಿಸಬೇಕು ಇಲ್ಲದಿದ್ದಲ್ಲಿ ನಮ್ಮ ಮುಂದಿನ ಜನಾಂಗಕ್ಕೆ ನಾವು ಅನ್ಯಾಯ ಎಸಗಿದಂತಾಗುತ್ತದೆ ಎಂದು ತಿಳಿಸಿ, ಈ ಆಂದೋಲನ ನಡೆಸಲು ಸಹಕರಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಈ ಆಂದೋಲನ ಉಜ್ವಲಜ್ವಾಲೆಯಂತೆ ಇಡೀ ಸಮಾಜದಲ್ಲಿ ಪಸರಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೇಷ್ಠಗುರು ವಂದನೀಯ ಡೆನ್ನಿಸ್ ಮೊರಾಸ್ ಪ್ರಭು, ಫೋರ್ ವಿಂಡ್ಸ್ ಸಂಸ್ಥೆಯ ಮಾಲೀಕರಾದ ಎಲಿಯಾಸ್ ಫೆರ್ನಾಂಡಿಸ್, ವಂದನೀಯ ಜಾನ್ ವಾಸ್, ವಂದನೀಯ ಫ್ರಾನ್ಸಿಸ್ ಡಿಸೋಜ, ವಂದನೀಯ ವಲೇರಿಯನ್ ಫೆರ್ನಾಂಡಿಸ್, ಶ್ರೀ ರೈಮಂಡ್ ಡಿಕುನ್ಹಾ, ವಿನ್ಸೆಂಟ್ ಮಸ್ಕರೇನಸ್ ಮತ್ತಿತರ ಗಣ್ಯರು ಹಾಜರಿದ್ದರು.