ಮಂಜೇಶ್ವರ, ನ.16: ಕಾರೊಂದು ನಿಂತಿದ್ದ ಟ್ಯಾಂಕರ್ಗೆ ಢಿಕ್ಕಿ ಹೊಡೆದ ಪರಿಣಾಮ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿಗಳು ಮೃತಪಟ್ಟು, ಜೊತೆಗಿದ್ದ ಐವರು ಗಂಭೀರ ಗಾಯಗೊಂಡ ಘಟನೆ ರವಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಹೊಸಂಗಡಿ ಬಳಿಯ ವಾಮಂಜೂರು ಚೆಕ್ಪೋಸ್ಟ್ ಬಳಿ ನಡೆದಿದೆ.ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರು ಪ್ರಯಾಣಿಕರಾದ ಬಂದ್ಯೋಡು ಹೇರೂರು ನಿವಾಸಿ ಉಮೇಶ್(65), ಅವರ ಪತ್ನಿ ಶಾರದಾ(62) ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿದ್ದ ಸಹ ಪ್ರಯಾಣಿಕರಾದ ಶೋಭಾ(19), ಸಂಗೀತಾ (6), ಮನ್ವಿತಾ(3), ಚಿದಾನಂದ ಹಾಗೂ ಪಾರ್ವತಿ ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲ್ಟೋ ಕಾರು ವಾಮಂಜೂರು ಚೆಕ್ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಉಮೇಶ್ ದಂಪತಿಯು ಕುಟುಂಬದ ಐವರು ಸದಸ್ಯರೊಂದಿಗೆ ಮಂಗಳೂರು ಕಡೆಯಿಂದ ಬಂದ್ಯೋಡು ಕಡೆಗೆ ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಆಲ್ಟೋ ಕಾರು ವಾಮಂಜೂರು ಚೆಕ್ಪೋಸ್ಟ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ತಪಾಸಣೆಗಾಗಿ ನಿಲ್ಲಿಸಿದ್ದ ಟ್ಯಾಂಕರ್ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಶಾರದಾ ಸ್ಥಳದಲ್ಲೇ ಮೃತರಾದರೆ, ಉಮೇಶ್ ಆಸ್ಪತ್ರೆಯಲ್ಲಿ ಮೃತರಾದರು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ನಿತ್ಯ ಅಪಘಾತ: ವಾಮಂಜೂರು ಚೆಕ್ಪೋಸ್ಟ್ ಪರಿಸರ ನಿತ್ಯ ಅಪಘಾತಗಳ ಕೇಂದ್ರವಾಗುತ್ತಿದ್ದು, ಹೆದ್ದಾರಿ ಪ್ರಯಾಣಿಕರ ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ. ತಪಾಸಣಾ ಹೆಸರಲ್ಲಿ ಅವ್ಯವಸ್ಥಿತವಾಗಿ ನಿಲ್ಲಿಸಲಾಗುವ ವಾಹನಗಳ ಕಾರಣ ಹೆದ್ದಾರಿ ಸಂಚಾರ ದುರ್ಗಮವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.