ಮಂಗಳೂರು: ಬೆಳಗಾವಿ ಸವದತ್ತಿ ಮೂಲದ ಮಹಿಳೆ ತನ್ನ ಪುಟ್ಟ ಎರಡು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕೋಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ಅಮ್ಮೆಂಬಳದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಬೆಳಗಾವಿ ಸವದತ್ತಿಯ ಅನ್ನಪೂರ್ಣ (33), ಮಕ್ಕಳಾದ ಪರಶುರಾಮ (10), ತಾರಾ (13) ಎಂದು ಗುರುತಿಸಲಾಗಿದೆ. ಅನ್ನಪೂರ್ಣ ತೋಟದ ಮನೆಯೊಂದರಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲಸಕ್ಕಿದ್ದಳು ಎನ್ನಲಾಗಿದೆ.
ಕಳೆದ ಒಂದು ತಿಂಗಳಿನ ಹಿಂದಷ್ಟೇ ಅನ್ನಪೂರ್ಣ ತನ್ನ ಇಬ್ಬರು ಮಕ್ಕಳೊಂದಿಗೆ ಬೋಳಿಯಾರು ಗ್ರಾಮದ ಅಮ್ಮೆಂಬಳ ದರ್ಗಾದ ಬಳಿಯ ಇಸ್ಮಾಯಿಲ್ ಎಂಬವರ ತೋಟದ ಮನೆಯ ಕೆಲಸದಾಳುವಾಗಿ ಸೇರಿ, ಅಲ್ಲೇ ಉಳಿದಿದ್ದರೆನ್ನಲಾಗಿದೆ.
ಬೆಳಗ್ಗೆ ಮನೆಯ ಸ್ವಲ್ಪ ದೂರದಲ್ಲಿರುವ ಅಮ್ಮೆಂಬಳ ಕೋಟೆ ಎಂಬಲ್ಲಿನ ಜಾಗಕ್ಕೆ ತೆರಳಿ ತನ್ನ ಇಬ್ಬರು ಪುಟ್ಟ ಕಂದಮ್ಮಗಳನ್ನು ಸೀರೆಯ ಸೆರಗಿಂದ ಕಟ್ಟಿಕೊಂಡು ನೇತ್ರಾವತಿ ನದಿ ನೀರಿಗೆ ಹಾರಿದ್ದಾರೆ. ಸ್ಥಳೀಯರ ಮಾಹಿತಿಯನ್ವಯ ಕೋಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ