ಮಂಗಳೂರು,ನ.14: ಸುಮಾರು ಒಂದುವರೆ ವರ್ಷಕ್ಕೂ ಹೆಚ್ಚು ಕಾಲ ನೆನೆಗುದ್ದಿಗೆ ಬಿದ್ದಿದ್ದ ಮಂಗಳೂರು ಪುರಭವನದ ಕಾಮಗಾರಿ ಇದೀಗ ಕೊನೆ ಹಂತದಲ್ಲಿದ್ದು, ನವೀಕೃತ ಪುರಭವನದ ಉದ್ಘಾಟನ ಸಮಾರಂಭ ಶನಿವಾರ ನೆರವೇರಿತು.
ಪುರಭವನದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಒಳಾಂಗಣದಲ್ಲಿ ಉತ್ಕೃಷ್ಟ ಮಟ್ಟದ ಕಲಾ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ನವೀಕೃತಗೊಳಿಸಿದ ಪುರಭವನದ ಉದ್ಘಾಟನೆಯನ್ನು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಉಪಸ್ಥಿತಿಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೆರೆವೇರಿಸಿದರು.
ಸುಮಾರು 458.05 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪುರಭವನದ ಒಳಾಂಗಣದಲ್ಲಿ ಅಕಾಸ್ಟಿಕ್, ಫಾಲ್ಸೀಲಿಂಗ್, ಧ್ವನಿ ಬೆಳಕು ಮತ್ತು ವೇದಿಕೆ, ಆಸನಗಳ ಅಳವಡಿಕೆ, ಜನರೇಟರ್ ಮತ್ತು ವಿದ್ಯುದೀಕರಣ ಕಾಮಗಾರಿ ಪ್ರಗತಿಯ ಸಂದರ್ಭ ಜಿಲ್ಲೆಯ ಮೇರು ಕಲಾವಿದರು, ವಿಶೇಷ ರಂಗತಜ್ಞರು ಪಾಲಿಕೆಯನ್ನು ಒತ್ತಾಯಿಸಿರುವ ಮೇರೆಗೆ ವಿಶಿಷ್ಟ ಹಾಗೂ ಆಧುನಿಕ ತಾಂತ್ರಿಕತೆಗೆ ಪೂರಕವಾದ ಸವಲತ್ತುಗಳನ್ನು ಒದಗಿಸಲಾಗಿದೆ.
ವೇದಿಕೆಗೆ ಮರದ ಫ್ಲೋರಿಂಗ್ ಅಳವಡಿಸಿ ವಿಸ್ತರಣೆ, ಅತ್ಯಾಧುನಿಕ ಬೆಳಕು, ಧ್ವನಿ ಮತ್ತು ಗ್ರೀನ್ ರೂಂನಲ್ಲಿ ಕಲಾವಿದರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದ್ದು, ಆಕರ್ಷಕ ಎಲ್ಇಡಿ ನಾಮಫಲಕ, ಗಾರ್ಡನಿಂಗ್, ಜಿಲ್ಲೆಯ ಸಾಂಸ್ಕೃತಿಕ ವೈಭವ ಸಾರುವ ಮ್ಯೂರೆಲ್ ಅಳವಡಿಕೆ ಮತ್ತು ಹೊರಾಂಗಣದಲ್ಲಿ ಅಗತ್ಯ ಕಾಮಗಾರಿ ನಡೆದಿದೆ.
ಈ ನವೀಕೃತ ಪುರಭವನದಲ್ಲಿ ಕಲಾವಿದರು ಲೈಟಿಂಗ್, ಸೌಂಡ್ ವ್ಯವಸ್ಥೆಯನ್ನು ಹೊರಗಿನಿಂದ ಅಳವಡಿಸುವ ಅಗತ್ಯವಿರುವುದಿಲ್ಲ. ಎಸಿ ಸೌಲಭ್ಯ, ನಿರ್ವಹಣೆ ಸೇರಿದಂತೆ ಬೆಂಗಳೂರಿನ ಪುರಭವನ, ಕಲಾಚಿತ್ರಗಳ ಶುಲ್ಕವನ್ನು ಗಣನೆಗೆ ತೆಗೆದುಕೊಂಡು ಕಾರ್ಯಕ್ರಮ ನಡೆಸುವವರಿಗೆ ಹೊರೆಯಾಗದಂತೆ ಮಾಡಲಾಗಿದೆ.
ಸಮಾರಂಭದಲ್ಲಿ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಮಾಜಿ ಮೇಯರ್ ಗಳಾದ ಮಹಾಬಲ ಮಾರ್ಲ, ಶಶಿಧರ್ ಹೆಗ್ಡೆ, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಮನಪಾ ಸದಸ್ಯರು, ನಗರದ ಉದ್ಯಮಿಗಳು ಉಪಸ್ಥಿತರಿದ್ದರು.