ಪುತ್ತೂರು : ಬಂಟ್ವಾಳ ತಾಲೂಕಿನ ಮಣಿಯಾಲ ಬಳಿಯ ಜಕ್ರಿಬೆಟ್ಟುವಿನಲ್ಲಿ ನಡೆದ ಹರೀಶ್ ಹತ್ಯೆ ಖಂಡಿಸಿ ಇಂದೂ ಹಿಂದೂ ಸಂಘಟನೆಗಳು ಬಂದ್ ನೀಡಿದ್ದು, ಅಂಗಡಿ ಮುಂಗಟ್ಟು ಗಳ ಸಹಿತಾ ಬಸ್ ಸಂಚಾರ ಕೂಡ ಸ್ತಗಿತಗೊಂಡು ಜಿಲೆಯಾದ್ಯಂತ ಬಂದ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದ ಸಂದರ್ಭದಲ್ಲೇ ಗೋಳಿತ್ತೊಟ್ಟು ಶಾಲಾ ಸಮೀಪ ಯುವನೋರ್ವನ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ಕತ್ತಿಯಿಂದ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ ವರದಿಯಾಗಿದೆ.
ಕತ್ತಿಯೇಟಿನಿಂದ ಗಂಭೀರ ಗಾಯಗೊಂಡಿರುವ ಯುವಕನ್ನು ಹಾರಿಸ್ ಎಂದು ಗುರುತಿಸಲಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವಣೂರಿನಲ್ಲಿ ಕಿಡಿಗೇಡಿಗಳಿಂದ ಕಲ್ಲು ತೂರಾಟ : ಎಸೈಗೆ ಗಾಯ
ಸವಣೂರಿನಲ್ಲಿ ಅಂಗಡಿ ಮುಚ್ಚಲು ಆಕ್ಷೇಪಿಸಿದಕ್ಕೆ ಮಾತಿನ ಚಕಮಕಿ ಹಾಗೂ ಪೊಲೀಸ್ರಿಂದ ಲಾಠಿ ಚಾರ್ಜ್ ನಡೆದ ಪ್ರಕರಣವು ತಿರುವು ಪಡೆದುಕೊಂಡಿದ್ದು ಬಳಿಕ ನಡೆದ ಬೆಳವಣಿಗೆಯಲ್ಲಿ ಕಿಡಿಗೇಡಿಗಳ ಕಲ್ಲು ತೂರಾಟಕ್ಕೆ ಸಂಪ್ಯ ಗ್ರಾಮಾಂತರ ಠಾಣೆಯ ಎಸ್ಸೈ ರವಿ ಬಿ.ಎಸ್ ಗಾಯಗೊಂಡಿರುವ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ಸವಣೂರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಅಂಗಡಿ ತೆರೆದಿರುವುದನ್ನು ಹಿಂದೂ ಸಂಘಟನೆಯವರು ಆಕ್ಷೇಪ ಮಾಡಿ ಬಲವಂತವಾಗಿ ಬಂದ್ ಮಾಡಲು ಮುಂದಾಗಿದ್ದು ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಎರಡೂ ಕೋಮಿಗೆ ಸೇರಿದ ಹಲವಾರು ಮಂದಿ ಆಗಮಿಸಿದ್ದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಬೀಸಿ ಸೇರಿದ್ದ ಜನರನ್ನು ಚದುರಿಸಿದ್ದು ಈ ವೇಳೆ ಕೆಲವರು ಅನಗತ್ಯ ಘೋಷಣೆಗಳನ್ನು ಹಾಕಿಕೊಂಡು ಹೋಗಿದ್ದರು.
ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದ್ದು ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪ್ರಕರಣ ಸಂಬಂಧ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ. ಗಾಯಾಳು ಎಸ್ಸೈಯನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಂತವಾಗಿದ್ದ ಸವಣೂರಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಲು ಹೊರಟಿದೆ ಪರಿಣಾಮವಾಗಿ ಗಲಭೆ ಪ್ರಾರಂಭವಾಗಿದ್ದು ಸವಣೂರು ಪೇಟೆ ಸಂಪೂರ್ಣ ಬಂದ್ ಆಗಿದೆ.
ವಿಟ್ಲದಲ್ಲಿ ರಸ್ತೆಯಲ್ಲಿ ಮರ ಹಾಗೂ ಕಲ್ಲುಗಳನ್ನು ಹಾಕಿ ಸಂಚಾರಕ್ಕೆ ಅಡ್ಡಿ
ವಿಟ್ಲ ಪೇಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅಂಗಡಿ, ಮುಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಬಂದ್ ಯಶಸ್ವಿಯಾಗಿದ್ದು , ಕೆಲವಡೆ ಟಯರ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಇನ್ನೂ ಕೆಲವಡೆ ಮರ ಹಾಗೂ ಕಲ್ಲುಗಳನ್ನು ರಸ್ತೆಗೆ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆಗಳು ನಡೆದಿದೆ.
ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಬೆಳಗ್ಗಿನಿಂದಲೇ ಸ್ಥಗಿತಗೊಂಡಿತು. ವಿಟ್ಲ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯಲು ಆರಂಭವಾಗುತ್ತಿದ್ದಂತೆ ಪೋಲೀಸರು ಮುನ್ನೆಚ್ಚರಿಕೆ ವಹಿಸಿ , ಬಂದ್ ಮಾಡಲು ವಿನಂತಿಸಿದರು. ಬಳಿಕ ಔಷಧಿ ಅಂಗಡಿಗಳು ಹೊರತುಪಡಿಸಿ ಉಳಿದ ಅಂಗಡಿಗಳು ಪೂರ್ಣ ಬಂದ್ ಆಗಿತ್ತು. ಕೆಲವು ಅಂಗಡಿ ಮಾಲಕರು ಸ್ವಇಚ್ಛೆಯಿಂದಲೇ ಅಂಗಡಿಗಳನ್ನು ಬಂದ್ ಮಾಡಿದ್ದರು.
ವಿಶ್ವ ಹಿಂದೂ ಪರಿಷದ್ ಮತ್ತು ಹಿಂದೂ ಪರ ಸಂಘಟನೆಗಳು ಕೂಡಾ ಬಂದ್ ಗೆ ಕರೆ ನೀಡಿದ್ದರಿಂದ ಬೆಳಗ್ಗೆಯೇ ಹಲವರು ಬಂದ್ ಗೆ ಸಹಕರಿಸಿದ್ದರು. ಸಾಲೆತ್ತೂರು , ಕೊಳ್ನಾಡುಗಳಲ್ಲೂ ಹಿಂದೂ ಪರ ಸಂಘಟನೆಗಳು ಬಂದ್ ಗೆ ವಿನಂತಿಸುತ್ತಿದ್ದರು. ಈ ನಡುವೆ ಕೆಲ ಕಡೆಗಳಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ ಘಟನೆಯೂ ಸಂಭವಿಸಿದೆ. ವಿಟ್ಲ ಪುತ್ತೂರು ರಸ್ತೆಯ ಕಲ್ಲಕಟ್ಟದ ರಸ್ತೆ ಮಧ್ಯದಲ್ಲಿ ಟಯರ್ ಸುಟ್ಟು ಹಾಕಲಾಗಿತ್ತು , ಅಲ್ಲದೇ ರಸ್ತೆಯಲ್ಲೇ ಕಲ್ಲನ್ನು ಅಡ್ಡವಾಗಿಡಲಾಗಿತ್ತು.
ಪೆರುವಾಯಿಯಲ್ಲಿಯೂ ರಸ್ತೆ ತಡೆಯುಂಟು ಮಾಡಲಾಗಿತ್ತು. ಕೇರಳ ಭಾಗದ ಯುವಕರು ಜಮಾಯಿಸಿದ್ದು, ಪೋಲೀಸರು ಮಧ್ಯ ಪ್ರವೇಶಿಸಿ, ಚದುರಿಸಿದರೆನ್ನಲಾಗಿದೆ. ಕನ್ಯಾನದಿಂದ ಕೇರಳಕ್ಕೆ ಸಾಗುವ ರಸ್ತೆಯಲ್ಲಿ ನೆಲ್ಲಿಕಟ್ಟೆಯಿಂದ ಮುಗುಳಿವರೆಗೆ ಅಕೇಶಿಯಾ ಮತ್ತು ಇತರ ಮರಗಳನ್ನು ಕಡಿದು ರಸ್ತೆಗೆ ಹಾಕಲಾಗಿತ್ತು. ಮಾಣಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕಲ್ಲು ಇಟ್ಟು ತಡೆಯೊಡ್ಡಲಾಗಿತ್ತು.