ಮಂಗಳೂರು, ನ.12: ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಯಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದ್ದು, ಯುವಜನರು ಉತ್ತಮ ಉದ್ಯೋಗ ಗಳಿಸಿಕೊಂಡಲ್ಲಿ ಈ ಸಾಮರಸ್ಯವನ್ನು ಉಳಿಸಿಕೊಳ್ಳಬಹುದು. ಮುಂದಿನ ಪ್ರತಿ ವರ್ಷಗಳಲ್ಲೂ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ನಗರದ ಹೊಟೇಲ್ ಗೇಟ್ವೇನಲ್ಲಿ ಬುಧವಾರ ಮಂಗಳೂರು ಉದ್ಯೋಗ ಮೇಳ ಕುರಿತು ವಿವಿಧ ಸಂಸ್ಥೆಗಳ ಜೊತೆ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಜಿಲ್ಲೆಯಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ ಮುಂದುವರಿಯಲಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 7 ಮೆಡಿಕಲ್ ಕಾಲೇಜು, 18 ಎಂಜಿನಿಯರಿಂಗ್ ಕಾಲೇಜು, 5 ಡೆಂಟಲ್ ಕಾಲೇಜುಗಳು ಹಾಗೂ ಇತರ ಹಲವು ಶಿಕ್ಷಣ ಸಂಸ್ಥೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಪ್ರತೀ ವರ್ಷ ಹೊರಬರುತ್ತಿದ್ದು, ಅವರಿಗೆ ಪೂರಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಸುಮಾರು 7,500 ಮಂದಿ ಈಗಾಗಲೇ ಆನ್ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಜಿಲ್ಲೆಯ ಸಂಸ್ಥೆಗಳೂ ಮೇಳದಲ್ಲಿ ಭಾಗವಹಿಸುತ್ತಿವೆ ಎಂದರು. ಈಗಾಗಲೇ ಹೆಸರು ನೋಂದಾಯಿಸಿದ ಅಭ್ಯರ್ಥಿಗಳಿಗೆ ಕಳೆದ ವಾರ ಕೌನ್ಸೆಲಿಂಗ್ ಮೂಲಕ ತರಬೇತಿ ನೀಡಲಾಗಿದೆ. ಮುಂದಿನ ವಾರದಲ್ಲೂ ಕೌನ್ಸಿಲಿಂಗ್ ನಡೆಸಲಾಗುವುದು ಎಂದರು.
ಯೆನೆಪೊಯ ವಿ.ವಿ. ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ, ನಿಟ್ಟೆ ವಿವಿಯ ಕುಲಾಧಿಪತಿ ವಿನಯ ಹೆಗ್ಡೆ, ಎ.ಜೆ. ಆಸ್ಪತ್ರೆಯ ಎ.ಜೆ. ಶೆಟ್ಟಿ, ಉದ್ಯೋಗ ಮೇಳದ ಸಂಯೋಜಕ ವಿವೇಕ ಆಳ್ವ, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.