ಮಂಗಳೂರು,ನ.09: ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಯನ್ನು ಆಚರಿಸಲು ಹೊರಟಿರುವ ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಒಸಾಮಾ ಬಿನ್ ಲಾದೆನ್ ಜಯಂತಿಯನ್ನು ಕೂಡ ಆಚರಿಸುವುದಿಲ್ಲ ಎಂದು ಯಾವ ಗ್ಯಾರಂಟಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಪ್ರಶ್ನಿಸಿದ್ದಾರೆ.
ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಆಚರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ನಗರದ ಪುರಭವನದ ಎದುರಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ ಬೃಹತ್ ಧರಣಿ ಸತ್ಯಾಗ್ರಹದಲ್ಲಿ ಪ್ರತಿಭಟನೆಕಾರರನ್ನುದ್ದೇಶಿಸಿ ಅವರು ಮಾತನಾಡಿದರು.
ಟಿಪ್ಪು ಓರ್ವ ಮತಾಂಧ ಮತ್ತು ಅಪಾರ ಸಂಖ್ಯೆಯ ಕ್ರೈಸ್ತನ್ನು ಹತ್ಯೆ ಮಾಡಿದವ. ಇಂಥಹ ವ್ಯಕ್ತಿಯ ಜನ್ಮದಿನಾಚರಣೆಯನ್ನು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬದ ಸಂದರ್ಭ ಮಾಡಲು ಹೊರಟ ಸರ್ಕಾರದ ನಿರ್ಧಾರವನ್ನು ಖಂಡಿಸುವುದಾಗಿ ತಿಳಿಸಿದರು.
ಓರ್ವ ದನಗಳ್ಳ ಕಬೀರ್ ಹತ್ಯೆಯಾದಾಗ ಆತನ ಮನೆಗೆ ಗೃಹ ಸಚಿವರು ಭೇಟಿ ನೀಡಿ ಪರಿಹಾರ ಒದಗಿಸಿದ್ದರು. ಆದರೆ ಓರ್ವ ಹಿಂದೂ ಮುಖಂದ, ಸಮಾಜ ಸೇವಕ ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಆತನ ಮನೆಗೆ ಯಾವ ಜನಪ್ರತಿನಿಧಿಗಳೂ ಭೇಟಿ ನೀಡಿಲ್ಲ. ಬದಲಾಗಿ ಹತ್ಯೆಯ ವಿರುದ್ಧ ನಿರ್ಲಕ್ಷ್ಯದ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ನಿಜ ಬಣ್ಣವನ್ನು ಹೊರಹಾಕಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ರಾಜ್ಯ ಬಾಲಭವನ ಸಮಿತಿಯ ಮಾಜಿ ಅಧ್ಯೆಕ್ಷೆ ಸುಲೋಚನಾ ಭಟ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣೂರು, ರವಿಶಂಕರ್ ಮಿಜಾರ್, ಪ್ರೇಮಚಂದ್ರ ಹಾಗೂ ಪಕ್ಷದ ಪ್ರಮುಖರು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.