ಮಂಗಳೂರು, ನ.8 : ಮಂಗಳೂರು ಸಬ್ಜೈಲ್ನ ನೂತನ ಅಧೀಕ್ಷಕರಾಗಿ ವಿ. ಕೃಷ್ಣಮೂರ್ತಿ ನಿಯೋಜನೆಗೊಂಡಿದ್ದಾರೆ. ರಘುಪತಿ ಅವರನ್ನು ಜೈಲರ್ ಆಗಿ ನೇಮಕ ಮಾಡಲಾಗಿದೆ.
ವಿ. ಕೃಷ್ಣಮೂರ್ತಿ, ಈ ಹಿಂದೆ ಹಾಸನದಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಇವರು ಸೇರಿದಂತೆ ಆರು ಮಂದಿಯನ್ನು ಇದೀಗ ಹೊಸದಾಗಿ ಮಂಗಳೂರು ಸಬ್ಜೈಲ್ಗೆ ನೇಮಕ ಮಾಡಲಾಗಿದೆ.
ನಗರದ ಸಬ್ಜೈಲ್ನಲ್ಲಿ ನ. 2ರಂದು ನಡೆದ ವಿಚಾರಣಾಧೀನ ಕೈದಿಗಳಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪ ಆರೋಪದ ಮೇಲೆ ಜೈಲು ಅಧೀಕ್ಷಕ ಓಬಲೇಶಪ್ಪ ಸಹಿತ ಐವರನ್ನು ಅಮಾನತು ಮಾಡಿ ಬಂದಿಖಾನೆ ಎಡಿಜಿಪಿ ಕಮಲ್ಪಂತ್ ಆದೇಶ ನೀಡಿದ್ದರು.
ಕೈದಿಗಳ ಹತ್ಯೆಗೆ ಜೈಲಿನ ಅಧಿಕಾರಿಗಳು ನಿರ್ಲಕ್ಷ ತೋರಿರುವುದೇ ಕಾರಣವಾಗಿದ್ದು, ಜೈಲ್ನ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದರೆ ಈ ರೀತಿಯ ಪ್ರಕರಣ ನಡೆಯಲು ಸಾಧ್ಯವಿರಲಿಲ್ಲ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
ಹತ್ಯೆ ನಡೆದ ಬಳಿಕ ಪೊಲೀಸ್ ಅಧಿಕಾರಿಗಳ ತಂಡ ಜೈಲ್ನಲ್ಲಿ ಶೋಧ ನಡೆಸಿದ ಸಂದರ್ಭ 6 ಚೂರಿಗಳು, 16 ಮೊಬೈಲ್ ಫೋನ್ಗಳು, 7 ಸಿಮ್ಗಳು, 7 ಮೆಮೊರಿ ಕಾರ್ಡ್ಗಳು, ಮೊಬೈಲ್ ಚಾರ್ಜರ್, ಎಲೆಕ್ಟ್ರಿಕ್ ವಯರ್ ಮೊದಲಾದ ವಸ್ತುಗಳು ಪತ್ತೆಯಾಗಿದ್ದವು.
ಈ ನಡುವೆ ವಿಚಾರಣಾಧೀನ ಕೈದಿ ಫೈಝಲ್ ಎಂಬಾತ ಕೂಡಾ ಜೈಲು ಸಿಬ್ಬಂದಿಯ ಸಹಕಾರದಿಂದಲೇ ಈ ಹತ್ಯೆ ನಡೆದಿದೆ ಎಂದು ಆರೋಪಿಸಿದ್ದ.