ಮಂಗಳೂರು : ಮಂಗಳೂರು – ಉಡುಪಿ ರಸ್ತೆಯಲ್ಲಿ ಬೀಡಿ ಎಲೆ ಹೊತ್ತು ಸಾಗುತ್ತಿದ್ದ ಬೃಹತ್ ಗಾತ್ರದ ಲಾರಿಯೊಂದು ಸುರತ್ಕಲ್ ಸಮೀಪದ ಎನ್.ಐ.ಟಿ.ಕೆ ಬಳಿ ನೂತನವಾಗಿ ನಿರ್ಮಿಸಿದ ಟೋಲ್ಗೇಟ್ ಒಳಗಿನಿಂದ ಸಂಚರಿಸುತ್ತಿದ್ದಾಗ ಟೋಲ್ಗೇಟ್ನ ಛಾವಣಿಗೆ ತಾಗಿ ಸಂಪೂರ್ಣ ಲೋಹದಲ್ಲಿ ನಿರ್ಮಿಸಲಾದ ಛಾವಣಿ ಕುಸಿದು ಬಿದ್ದ ಘಟನೆ ಶುಕ್ರವಾರ ಬೆಳಿಗ್ಗಿನ ಜಾವ ಸುಮಾರು ಮೂರು ಗಂಟೆಗೆ ಸಂಭವಿಸಿದೆ.
ಇಂದು ಮುಂಜಾನೆ ಸುಮಾರು ಮೂರು ಗಂಟೆಯ ಸಮಯಕ್ಕೆ ಬೀಡಿ ಎಲೆಗಳನ್ನು ಹೊತ್ತು ಸಾಗುತ್ತಿದ್ದ ಈ ಬೃಹತ್ ಲಾರಿಯ ಮೇಲ್ಭಾಗ ಎನ್.ಐ.ಟಿ.ಕೆ ಬಳಿಯ ಟೋಲ್ಗೇಟ್ಗೆ ಹಾಕಲಾಗಿದ್ದ ಲೋಹದ ಛಾವಣಿಗೆ ತಾಗಿದೆ. ಇದರಿಂದ ಇಡೀ ಛಾವಣಿಯೇ ಕಿತ್ತು ಬಂದಿದ್ದು, ಲಾರಿಯ ಮೇಲೆ ಬಿದ್ದಿದೆ. ಛಾವಣಿಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಲಾರಿಯನ್ನು ತೆರವುಗೊಳಿಸಲಾಗಿದೆ. ಆದರೆ ಛಾವಣಿ ಮಾತ್ರ ಸಂಪೂರ್ಣ ಧರಶಾಹಿಯಾಗಿದೆ. ಘಟನೆಯಿಂದ ಯಾವೂದೇ ಪ್ರಾಣಾಪಾಯ ಸಂಭವಿಸಲಿಲ್ಲ.
ಈ ಸಂದರ್ಭದಲ್ಲಿ ವಾಹನಗಳ ಸಂಚಾರವಿರದಿದ್ದ ಪರಿಣಾಮ ಹೆಚ್ಚಿನ ಅವಘಡ ಸಂಭವಿಸುವುದು ತಪ್ಪಿದೆ. ಆದರೆ ಬಳಿಕ ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಹಾಗೂ ಉಡುಪಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಾಹನಗಳ ಸಂಚಾರಕ್ಕೆ ಕೆಲ ಹೊತ್ತು ಆಡಚಣೆಯುಂಟಾಯಿತು.
ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.