ಮಂಗಳೂರು: ಮಂಗಳಾಂಬಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಕಲ್ಲಡ್ಕ ಚಂದ್ರಶೇಖರ ರೈ ನಿರ್ಮಾಣದಲ್ಲಿ ಯತೀಶ್ ಆಳ್ವ ನಿರ್ದೇಶನದ ‘ರೈಟ್ ಬೊಕ್ಕ ಲೆಫ್ಟ್’ ತುಳು ಸಿನಿಮಾದ ಬಿಡುಗಡೆ ಸಮಾರಂಭ ಗುರುವಾರ ಮಂಗಳೂರಿನ ಜ್ಯೋತಿ ಥಿಯೇಟರ್ನಲ್ಲಿ ಜರಗಿತು.
ಸಮಾರಂಭವನ್ನು ಕಲ್ಲಡ್ಕ ಪರಮೇಶ್ವರಿ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಮಾತನಾಡಿ, ತುಳು ಸಿನಿಮಾರಂಗದಲ್ಲಿ ಈಗಾಗಲೇ ಹಲವು ವಿಭಿನ್ನ ಹಾಗೂ ಉತ್ತಮ ಕಥಾ ಹಂದರವನ್ನು ಹೊಂದಿದ್ದ ಚಿತ್ರಗಳು ಯಶಸ್ಸುಗಳಿಸಿದ್ದು, ಈ ಸಾಲಿನಲ್ಲಿ ವಿಶೇಷ ಪ್ರಯತ್ನದ ಮೂಲಕ ವಿಭಿನ್ನ ಶೈಲಿಯಲ್ಲಿ ಮೂಡಿಬಂದ, ಉತ್ತಮ ಸಂದೇಶವನ್ನು ಹೊಂದಿರುವ “ರೈಟ್ ಬೊಕ್ಕ ಲೆಫ್ಟ್” ಸಿನಿಮಾ ಕೂಡ ಶತದಿನ ದಾಟಿ ಮುನ್ನುಗುವ ಮೂಲಕ ಅಭೂತಪೂರ್ವ ಯಶಸ್ಸು ಸಾಧಿಸಲಿ ಎಂದು ಹೇಳಿ, ಚಿತ್ರಕ್ಕೆ ಶುಭಾ ಹಾರೈಸಿದರು.
ನ್ಯಾಯವಾದಿ ಕೆ.ಎಸ್.ಕಲ್ಲೂರಾಯ ಅವರು ಮಾತನಾಡಿ ತುಳುವಿನಲ್ಲಿ ಸದಭಿರುಚಿಯ ಚಿತ್ರಗಳು ಮೂಡಿ ಬರುವಂತಾಗಲಿ ಎಂದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ, ತುಳುವಿನಲ್ಲಿ ಹಾಸ್ಯದ ಜತೆಗೆ ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಚಲನ ಚಿತ್ರದ ನಿರ್ಮಾಪಕ ಕಲ್ಲಡ್ಕ ಚಂದ್ರಶೇಖರ ರೈ, ಸೆನ್ಸಾರ್ ಮಂಡಳಿಯ ಸದಸ್ಯ ಡಾ.ಶಂಕರ್, ನಾಗೇಶ್, ರಾಜೇಶ್, ಮಂಜುನಾಥ ಪಾಂಡವಪುರ, ನಾಯಕಿ ನಟಿ ಛಾಯಾ ಅಶ್ವಿನಿ ಸಂಗೀತ ನಿರ್ದೇಶಕ ಡಾ.ನಿತಿನ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಕಲ್ಲಡ್ಕ ಚಂದ್ರ ಶೇಖರ ರೈ ಸ್ವಾಗತಿಸಿದರು. ಭಾಸ್ಕರ್ ಕಾರ್ಯಕ್ರಮ ನಿರ್ವಹಿಸಿದರು.
10 ಟಾಕೀಸ್ನಲ್ಲಿ ಪ್ರದರ್ಶನ
ರೈಟ್ ಬೊಕ್ಕ ಲೆಫ್ಟ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ 10 ಟಾಕೀಸ್ಗಳಲ್ಲಿ ತೆರೆಕಂಡಿದೆ. ಮಂಗಳೂರಿನಲ್ಲಿ ಜ್ಯೋತಿ. ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿ.ವಿ.ಆರ್, ಉಡುಪಿಯಲ್ಲಿ ಅಲಂಕಾರ್, ಪುತ್ತೂರಿನಲ್ಲಿ ಅರುಣಾ, ಕಾರ್ಕಳದಲ್ಲಿ ರಾಧಿಕಾ, ಬಿ.ಸಿ.ರೋಡ್ನಲ್ಲಿ ನಕ್ಷತ್ರ, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್ ಟಾಕೀಸ್ನಲ್ಲಿ ಪ್ರದರ್ಶನ ಕಾಣುತ್ತಿದೆ.