ಮಂಗಳೂರು, ನ.05: ಪರಿಸರ ಮಾಲಿನ್ಯವನ್ನು ತಡೆಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಮಂಗಳೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಹೇಳಿದರು.
ಉಪ ಸಾರಿಗೆ ಆಯುಕ್ತರ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮಂಗಳೂರು ಇಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶೇ.70ರಷ್ಟು ಮಾಲಿನ್ಯ ವಾಹನಗ ಳಿಂದಲೇ ಆಗುತ್ತಿದೆ. ಮಂಗಳೂರಿನಲ್ಲಿ ದಿನಕ್ಕೆ ಸುಮಾರು 120ರಷ್ಟು ದ್ವಿಚಕ್ರ ಮತ್ತು 50ರಷ್ಟು ನಾಲ್ಕುಚಕ್ರದ ವಾಹನಗಳ ನೋಂದಾವ ಣೆಯಾಗುತ್ತದೆ. ಅಂದರೆ ತಿಂಗಳಿಗೆ ಸುಮಾರು 4 ಸಾವಿರ ಮತ್ತು ವಾರ್ಷಿಕವಾಗಿ 48 ಸಾವಿರ ವಾಹನ ನೋಂದಾವಣೆಯಾಗುತ್ತದೆ. 4.82 ಲಕ್ಷ ವಾಹನಗಳು ಮಂಗಳೂರು ನಗರದಲ್ಲಿವೆ ಎಂದರು.
2017ರಲ್ಲಿ ಬಿಎಸ್4 ಇಂಧನ ಬಳಕೆ:
ವಾಯು ಮಾಲಿನ್ಯ ನಿಯಂತ್ರಿಸಬಲ್ಲ ಇಂಧನ ಬಿಎಸ್4 ಅನ್ನು ಕರ್ನಾಟಕ ರಾಜ್ಯಾದ್ಯಂತ 2017ರಿಂದ ಬಳಕೆ ಮಾಡಲಾಗುವುದು. 2019ರಲ್ಲಿ ಇಂಧನ ಕಲುಷಿತವನ್ನು ಇನ್ನಷ್ಟು ಕಡಿತಗೊಳಿಸುವ ಬಿಎಸ್5 ದೇಶಾದ್ಯಂತ ಜಾರಿಗೆ ಬರಲಿದೆ. ವಾಹನಗಳಲ್ಲಿ ಬಳಸುವ ಇಂಧನಗಳಲ್ಲೇ ವಾಯು ಮಾಲಿನ್ಯದ ಅಂಶವನ್ನು ತಡೆಗಟ್ಟಿದರೆ, ವಾಯುಮಾಲಿನ್ಯ ರಹಿತ ನಗರ ನಿರ್ಮಾಣ ಸಾಧ್ಯ. ಅಧ್ಯಯನವೊಂದರ ವರದಿಯ ಪ್ರಕಾರ 13 ಕಲುಷಿತ ನಗರಗಳು ಭಾರತದಲ್ಲಿವೆ. ಶೇ.50ರಷ್ಟು ಜನತೆ ಉಸಿರಾಟದ ಸಮಸ್ಯೆಯಿಂದಲೇ ಸಾವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಪ್ರತಿಯೊಬ್ಬರೂ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು ಎಂದು ಜಿ.ಎಸ್.ಹೆಗಡೆ ಹೇಳಿದರು.
ಎಸ್ಬಿಐ ಮಂಗಳೂರು ಮುಖ್ಯ ಕಚೇರಿಯ ಎಜಿಎಂ ಆರ್.ಎನ್.ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರಾಧಿಕಾರಿ ರಾಜಶೇಖರ ಪುರಾಣಿಕ್, ಮಾಂಡವಿ ಮೋಟಾರ್ಸ್ನ ಆರೂರು ಕಿಶೋರ್ ರಾವ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.