ಮಂಗಳೂರು,ನ.04: ದ.ಕ.ಜಿಲ್ಲಾ ಆನ್ ಲೈನ್ ಟಾಕ್ಸಿ ಮಾಲಕ ಮತ್ತು ಚಾಲಕರ ಸಂಘದ ವತಿಯಿಂದ ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ನೇಣು ಹಗ್ಗ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕಂಪನಿ ಒಪ್ಪಂದದ ಪ್ರಕಾರ ದರ ನೀತಿ ಮುಂದುವರಿಸಬೇಕು, ಕಂಪೆನಿಯು 6 ತಿಂಗಳು ಉತ್ತಮ ದರ ನೀಡಿದ್ದು, ಆದರೆ ಇದೀಗ ಆಪರೇಟರ್ ಗಳಿಗೆ ಮೋಸ ಮಾಡಿದೆ. ಈ ಮೂಲಕ ಕಂಪೆನಿಯು 250ಕ್ಕೂ ಅಧಿಕ ಆಪರೇಟರ್ ಗಳನ್ನು ಬೀದಿಪಾಲು ಮಾಡಲುಹೊರಟಿದೆ ಎಂದು ಓಲಾ ಟಾಕ್ಸಿ ಚಾಲಕ -ಮಾಲಕ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಅವರು ಹೇಳಿದರು.
ಕಳೆದ 15 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಪ್ಪಂದವನ್ನು ಮುರಿದಿರುವ ಕಂಪೆನಿಯು ನಮಗೆ ಮೋಸ ಮಾಡಿರುವುದರಿಂದಾಗಿ ನಾವು ಟಾಕ್ಸಿಗಾಗಿ ಮಾಡಿರುವ ಸಾಲವನ್ನು ಬ್ಯಾಂಕ್ ಗೆ ಪಾವತಿ ಮಾಡಬೇಕಾಗಿದೆ. ಬ್ಯಾಂಕಿನವರು ಸಾಲ ವಸೂಲಿಗಾಗಿ ನಮ್ಮ ಹಿಂದೆ ಬಿದ್ದಿದ್ದಾರೆ. ದಿನದಲ್ಲಿ 500ರಿಂದ 700ರ ವರೆಗೆ ದುಡಿಮೆಯಾಗುತ್ತಿದ್ದು, ಇದರಲ್ಲಿ ನಾವು ವಾಹನಗಳಿಗೆ ಡೀಸೇಲ್ ಹಾಕುವುದಕ್ಕೂ ಸಾಲದಾಗಿದೆ. ಸಾಲವನ್ನು ಮರುಪಾವತಿ ಮಾಡಲು ಅಶಕ್ತರಾಗಿದ್ದೇವೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ನೆಲ್ಸನ್, ಮುನಾವರ್, ಸಯೀದ್, ದೇವದಾಸ್, ಇಲ್ಯಾಸ್, ಸಂತೋಷ್ ಶೆಟ್ಟಿ ಬಜಾಲ್, ಯೋಗೀಶ್ ಶೆಟ್ಟಿ ಜೆಪ್ಪು ಮತ್ತಿತರರು ಉಪಸ್ಥಿತರಿದ್ದರು.