ನೀರಿಲ್ಲದ ಖಾಲಿ ಬಿಂದಿಗೆ ಪ್ರದರ್ಶಿಸುತ್ತಿರುವ ಮಹಿಳಾ ಕಾರ್ಯಕರ್ತರು
ಮಂಗಳೂರು : ಎತ್ತಿನಹೊಳೆ ಯೋಜನೆ ( ನೇತ್ರಾವತಿ ತಿರುವು ಯೋಜನೆ) ಅನುಷ್ಟಾನಗೊಳಿಸುವುದನ್ನು ವಿರೋಧಿಸಿ ಕರಾವಳಿಯ ಜೀವನಾಡಿ ನೇತ್ರಾವತಿ ರಕ್ಷಣಾ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ್ ಮತ್ತು ಸ್ತ್ರಿ ಶಕ್ತಿ ಗುಂಪುಗಳ ಸದಸ್ಯರ ಅಶ್ರಯದಲ್ಲಿ ಗುರುವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಗೂ ಮುನ್ನ ನೂರಾರು ಮಂದಿ ಕರಾವಳಿ ಉತ್ಸವ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು. ಪ್ಲಾಸ್ಟಿಕ್ ಕೊಡಪಾನಗಳೊಂದಿಗೆ ಪಾಲ್ಗೊಂಡ ಕಾರ್ಯ ಕರ್ತೆಯರು ಎತ್ತಿನಹೊಳೆ ಯೋಜನೆ ವಿರುದ್ಧ ನೇತ್ರಾವತಿ ಉಳಿಸಿ, ಬಿಡೆವು ಬಿಡೆವು ನೇತ್ರಾವತಿ ಬಿಡೆವು, ನೇತ್ರಾವತಿ ನಮ್ಮದು ಎಂಬ ಘೋಷಣೆಗಳನ್ನು ಕೂಗಿದರು.
ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಬಿಷಪ್ ಹೌಸ್ ಪ್ರತಿನಿಧಿ ಫಾ.ಜೆ.ಬಿ.ಕ್ರಾಸ್ತಾ, ಫಾ.ವಾಟ್ಸನ್ ಉಪಸ್ಥಿತಿಯಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ನೇತ್ರಾವತಿ ನದಿ ಸಂರಕ್ಷಣಾ ಸಮಿತಿಯ ಸಂಚಾಲಕ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ತೀವ್ರ ಅನಾರೋಗ್ಯದ ಹೊರತಾಗಿಯೂ ಉರಿಬಿಸಿಲಿನಲ್ಲಿ ಜಾಥಾದಲ್ಲಿ ಭಾಗವಹಿಸುವ ಮೂಲಕ ಧರಣಿನಿರತರಿಗೆ ಪ್ರೋತ್ಸಾಹ ನೀಡಿದರು.
ಎತ್ತಿನಹೊಳೆ ಯೋಜನೆ ವಿರುದ್ಧ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ವಸಂತ ಬಂಗೇರ, ಕ್ಯಾ.ಗಣೇಶ್ ಕಾರ್ಣಿಕ್ ಮೊದಲಾದವರು ಸರಕಾರದ ಗಮನಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಜಿಪಂ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಬಹುತೇಕ ಗ್ರಾಪಂಗಳಲ್ಲಿ ಯೋಜನೆ ವಿರುದ್ಧ ನಿರ್ಣಯ ಕೈಗೊಂಡಿರುವಾಗ ಯಾರಿಗಾಗಿ ಈ ಯೋಜನೆ ಎಂಬ ಬಗ್ಗೆ ಸರಕಾರ ಗಮನ ಹರಿಸಬೇಕು. ಕೆಲವು ಚುನಾಯಿತ ಪ್ರತಿನಿಧಿಗಳಿಗೆ ಹಣ ಮಾಡಲು ಇರುವ ಈ ಯೋಜನೆಯನ್ನು ತಕ್ಷಣ ಕೈಬಿಟ್ಟು ಜಿಲ್ಲೆಯ ಜನರ ಹಿತವನ್ನು ಕಾಪಾಡ ಬೇಕು ಎಂದು ಆಗ್ರಹಿಸಿದರು.
ದ.ಕ. ಜಿಲ್ಲಾ ಮಹಿಳಾ ಒಕ್ಕೂಟದ ವಿಜಯಲಕ್ಷ್ಮೀ ಶೆಟ್ಟಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ, ನೇತ್ರಾವತಿ ನದಿ ಸಂರಕ್ಷಣಾ ಸಮಿತಿಯ ಎಂ.ಜಿ. ಹೆಗಡೆ, ಉತ್ತಮ್ ಆಳ್ವ, ಸುರೇಶ್ ಶೆಟ್ಟಿ, ಶಶಿಧರ ಶೆಟ್ಟಿ, ಹುಸೈನ್, ಡೆಸ್ನಿಸ್ ಡಿಸಿಲ್ವ, ಪಿ.ವಿ.ಮೋಹನ್ ಮೊದಲಾದರವರು ಉಪಸ್ಥಿತರಿದ್ದರು.
ಸಂಘದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಿ ಸ್ವಾಗತಿಸಿದರು. ಶಾರದಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿನಿರತರನ್ನು ದ್ದೇಶಿಸಿ ಮಾತನಾಡಿದ ನೇತ್ರಾವತಿ ನದಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ಎಂ.ಜಿ.ಹೆಗಡೆ, ಕರಾವಳಿ ಜನತೆಯ ಹೋರಾಟದ ನಡುವೆಯೂ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸಲು ಕರಾವಳಿ ಜಿಲ್ಲೆಗಳಲ್ಲಿ ಬಂದ್ ನಡೆಸಲಾಗುವುದು ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾ ಯಕಿಯರ ಸಂಘದ ರಾಜ್ಯಾಧ್ಯಕ್ಷೆ ಬಿ.ಆರ್.ಜಯಲಕ್ಷ್ಮೀ ಮಾತನಾಡಿ, ಎತ್ತಿನಹೊಳೆ ಯೋಜನೆ ವಿರುದ್ಧ ಇನ್ನೂ ಹೆಚ್ಚಿನ ಹೋರಾಟಕ್ಕೆ ನಾವು ಸಿದ್ಧ ಎಂದರು.
ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ದಲ್ಲಿ ಭಾಗವಹಿಸದಂತೆ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಆದರೆ ಅವರಿಗೆ ಏನೇ ತೊಂದರೆ ಆದರೂ ನಾವು ನಿಮ್ಮ ಜತೆಗಿದ್ದೇವೆ ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಧೈರ್ಯ ತುಂಬಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಬುಧವಾರ ರಾತ್ರಿ ಅಂಗನವಾಡಿ ಕಾರ್ಯಕರ್ತೆಯ ರಿಗೆ ಫೋನ್ ಮಾಡಿ ಧರಣಿಯಲ್ಲಿ ಭಾಗವಹಿಸದಂತೆ ಬೆದರಿಕೆ ಹಾಕಿದ್ದಾರೆ. ಅಂಗನವಾಡಿ ಮೇಲ್ವಿಚಾರಕರ ಮೂಲಕವೂ ಫೋನ್ ಕರೆ ಮಾಡಿಸಿದ್ದಾರೆ. ಧರಣಿಯಲ್ಲಿ ಭಾಗವಹಿಸಿದ ಅಂಗನವಾಡಿ ಕಾರ್ಯಕರ್ತೆ ಯರಿಗೆ ಯಾವುದೇ ತೊಂದರೆ ಮಾಡಿದಲ್ಲಿ ಅಂತಹ ಅಧಿಕಾರಿಯ ಮನೆಯ ಪೈಪ್ಲೈನ್ ತುಂಡರಿಸಿ, ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.ವಿವಿಧ ಸಂಘಟನೆಗಳ ಮುಖಂಡರಾದ ಜೆ.ಬಿ.ಕ್ರಾಸ್ತ, ಜಯಲಕ್ಷ್ಮೀ ಬಿ.ಆರ್. ಅರಣಾ ಪುತ್ತೂರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.