ಮಂಗಳೂರು / ಉಳ್ಳಾಲ : ಜಿಲ್ಲೆಯಲ್ಲಿ ಗ್ಯಾಂಗ್ವಾರ್ ಬಿಸಿ ಕಡಿಮೆಯಾಗಿರುವ ಲಕ್ಷಣಗಳು ಕಂಡ ಬರುತ್ತಿರುವ ಸಂದರ್ಭದಲ್ಲೇ ಉಳ್ಳಾಲ ಸಮೀಪ ನಡೆದ ಗ್ಯಾಂಗ್ವಾರ್ಗೆ ಮತ್ತೊಂದು ಹೆಣ ಉರುಳಿದೆ. ಹಳೇ ಸ್ನೇಹಿತರ ನಡುವಿನ ವೈಷ್ಯಮ್ಯ ಒರ್ವ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.
ತೊಕ್ಕೊಟ್ಟಿನ ವಿನಮ್ರ ಬಾರ್ ಎದುರುಗಡೆ ಸ್ಕಾರ್ಪಿಯೊ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ವಿಕ್ರಮ್ ಬೋಳಾರ್ (28) ಎಂಬಾತನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.ತಡರಾತ್ರಿ ಸುಮಾರು ಎರಡು ಗಂಟೆ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸೈಕೋ ವಿಕ್ಕಿ ಹಾಗೂ ಮೃತ ವಿಕ್ರಮ್ ಹಿಂದೆ ಗೆಳೆಯರಾಗಿದ್ದರು. ಆದರೆ, ವ್ಯವಹಾರದ ವಿಷಯದಲ್ಲಿ ವೈಷಮ್ಯ ಬೆಳೆದಿತ್ತು ಎನ್ನಲಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ. ವಿಕ್ಕಿ ಸ್ನೇಹಿತ ರೋಹಿತ್ ಎಂಬಾತನ ಮದುವೆ ಮೆಹಂದಿ ಕಾರ್ಯಕ್ರಮ ಮುಗಿಸಿ ರಾತ್ರಿ ವಿಕ್ರಮ್, ಅಭಿಲಾಷ್ ಜೊತೆ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕುಂಪಲ ಮೂರುಕಟ್ಟದಲ್ಲಿನ ತಮ್ಮ ಸ್ನೇಹಿತ ರೋಹಿತ್ ಎಂಬಾತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಈ ಎರಡು ಗುಂಪುಗಳು ಭಾಗವಹಿಸಿದ್ದವು. ಅಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯೊಂದು ನಡೆದಿತ್ತು. ಆ ಬಳಿಕ ಸೈಕೋ ವಿಕ್ಕಿ ಇತರ ಮೂವರ ಜತೆಗೆ ಸೇರಿಕೊಂಡು ಬೋಳಾರ ವಿಕ್ಕಿಯನ್ನು ಬೆನ್ನಟ್ಟಲು ಆರಂಭಿಸಿದ್ದರು.
ಸೈಕೋ ವಿಕ್ಕಿ ತಂಡ ಸ್ಕಾರ್ಪಿಯೋ ವಾಹನದಲ್ಲಿ ಅಟ್ಟಾಡಿಸಿದ್ದು, ಬೋಳಾರ ವಿಕ್ಕಿ ತನ್ನ ಸ್ನೇಹಿತ ಅಭಿಲಾಷ್ ಶೆಟ್ಟಿ ಜತೆಗೆ ಬೈಕಿನಲ್ಲಿ ಪರಾರಿಯಾಗುವ ಯತ್ನದಲ್ಲಿದ್ದರು. ಸ್ಕಾರ್ಪಿಯೋ ವಾಹನ ಬೈಕನ್ನು ಅಟ್ಟಾಡಿಸುತ್ತಿರುವುದನ್ನು ಕುಂಪಲ ಬೈಪಾಸಿನ ಬಳಿ ಬಂದೋಬಸ್ತಿನಲ್ಲಿದ್ದ ಪೊಲೀಸರು ಕಂಡು ಪಿಸಿಆರ್ ವಾಹನಕ್ಕೆ ಮಾಹಿತಿ ನೀಡಿದ್ದರು.
ಆದರೆ ಪೊಲೀಸರ ವಾಹನ ಬರುವಷ್ಟರಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ಸೈಕೊ ವಿಕ್ಕಿ ಹಾಗೂ ಗೌರೀಶ್ ಸೇರಿದಂತೆ ಮೂವರು ದುಷ್ಕರ್ಮಿಗಳು ತೊಕ್ಕೊಟ್ಟು-ವಿಶ್ವವಿದ್ಯಾನಿಲಯ ರಸ್ತೆಯಲ್ಲಿರುವ ವಿನಮ್ರಾ ಬಾರಿನ ಎದುರುಗಡೆ ಬೈಕಿಗೆ ಹಿಂಬದಿಯಿಂದ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಬೋಳಾರ ವಿಕ್ಕಿಯನ್ನು ಯದ್ವಾತದ್ವ ಕಡಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಕೊಲೆಯಾದ ವಿಕ್ರಮ್ ಕೈಯಲ್ಲೂ ತಲವಾರಿತ್ತೆಂಬುದು ತಿಳಿದು ಬಂದಿದೆ.
ಈ ವೇಳೆ ಪರಾರಿಯಾಗಿದ್ದ ಅಭಿಲಾಷ್ ಶೆಟ್ಟಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್. ಐ. ಭಾರತಿ, ಕ್ರೈಂ ಎಸ್.ಐ. ರಾಜೇಂದ್ರ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಘಟನೆಯ ಸಂಪೂರ್ಣ ವಿವರ : News Updated
ಸೈಕೋ ವಿಕ್ಕಿ ತಂಡದಿಂದ ರೌಡಿ ಶೀಟರ್ ವಿಕ್ರಂ ಯಾನೆ ವಿಕ್ಕಿ ಬೋಳಾರ್ ಹತ್ಯೆ
ಉಳ್ಳಾಲ: ಕೋಡಿಕಲ್ ನಿವಾಸಿ ರೌಡಿ ಶೀಟರ್ ವಿಕ್ರಂ ಯಾನೆ ವಿಕ್ಕಿ ಬೋಳಾರ್(29)ನನ್ನು ರವಿವಾರ ತಡರಾತ್ರಿ ತಂಡವೊಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಜಂಕ್ಷನ್ನಲ್ಲಿ ತಲವಾರಿನಿಂದ ಕೊಚ್ಚಿ ಕೊಲೆಗೈದಿದೆ. ಸ್ಕಾರ್ಪಿಯೋದಲ್ಲಿ ಬಂದಿದ್ದ ತಂಡ ಈ ಕೃತ್ಯ ಎಸಗಿ ಪರಾರಿಯಾಗಿದೆ.
ಕೊಲೆ ಸೇರಿದಂತೆ ಹಲವಾರು ಪ್ರಕರಣದಲ್ಲಿ ಭಾಗಿಯಾಗಿ ರೌಡಿ ಶೀಟರ್ನಲ್ಲಿದ್ದ ವಿಕ್ಕಿ ಬೋಳಾರ್ನ ಸ್ನೇಹಿತನಾಗಿದ್ದು ಇದೀಗ ಬದ್ಧ ವೈರಿಧಿಯಾಗಿರುವ ಹುಬ್ಬಳಿ ಮೂಲದ ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಕೃತ್ಯದ ಪ್ರಧಾನ ಆರೋಪಿಯಾಗಿದ್ದಾನೆ.
ಹತ್ಯೆಯ ಬಳಿಕ ಸೈಕೋ ವಿಕ್ಕಿ ತಂಡ ಕುತ್ತಾರು ಮಾರ್ಗವಾಗಿ ಎಲಿಯಾರ್ನತ್ತ ತೆರಳಿದೆ. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ಟಯರ್ ಪಂಕ್ಚರ್ ಆದ ಕಾರಣ ವಾಹನವನ್ನು ಅಲ್ಲೇ ತೊರೆದು ಪರಾರಿಧಿಯಾಗಿದ್ದಾರೆ. ಸೈಕೋ ವಿಕ್ಕಿಯೊಂದಿಗೆ ಗೌತಮ್ ಮತ್ತು ಗೌರೀಶ್ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತ ವಿಕ್ಕಿ ಬೋಳಾರ್ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸಹೋದರಿ ವಿದೇಶದಿಂದ ಬರುವ ಹಿನ್ನೆಲೆಯಲ್ಲಿ ಮಂಗಳವಾರ ಶವ ಸಂಸ್ಕಾರ ನಡೆಯಲಿದೆ ಎನ್ನಲಾಗಿದ್ದು, ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿ ಇಡಲಾಗಿದೆ.
ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಸೇರಿದಂತೆ ಬೇರೆ ಬೇರೆ ಗ್ಯಾಂಗ್ವಾರ್ಗಳಲ್ಲಿ ತೊಡಗಿಸಿಕೊಂಡಿದ್ದ 20ಕ್ಕೂ ಹೆಚ್ಚು ಮಂದಿ ಕುಂಪಲದಲ್ಲಿ ನಡೆಯುತ್ತಿದ್ದ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡ್ಯಾನ್ಸ್ ಮಾಡುತ್ತಿದ್ದಾಗ ಸ್ಥಳೀಯ ಯುವಕನೊಬ್ಬನಿಗೆ ಮತ್ತು ಸೈಕೋ ವಿಕ್ಕಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಕುಂಪಲದ ಇನ್ನೋರ್ವ ಯುವಕ ಸೈಕೋ ವಿಕ್ಕಿಯ ವಿರೋಧಿಯಾಗಿರುವ ವಿಕ್ಕಿ ಬೋಳಾರ್ಗೆ ಫೋನ್ ಮಾಡಿ ಸೈಕೋ ವಿಕ್ಕಿ ಇಲ್ಲಿ ಗಲಾಟೆ ಮಾಡುತ್ತಿರುವ ವಿಚಾರ ತಿಳಿಸಿದ್ದ.
ಮಂಗಳೂರಿನಲ್ಲಿ ದಸರಾ ಸಂಭ್ರಮದಲ್ಲಿ ಹುಲಿ ವೇಷ ಹಾಕಿದ್ದ ತಂಡವೊಂದರ ಪಾರ್ಟಿಯಲ್ಲಿದ್ದ ವಿಕ್ಕಿ ಬೋಳಾರ್ ದೂರವಾಣಿ ಕರೆಯಂತೆ ತನ್ನಿಬ್ಬರು ಸ್ನೇಹಿತರಾದ ಚರಣ್ ಮತ್ತು ಅಭಿಲಾಷ್ ಎಂಬಾತನನ್ನು ಎಫ್ಝಿ ಬೈಕ್ನಲ್ಲಿ ಕುಳ್ಳಿರಿಸಿ ಮಂಗಳೂರಿನಿಂದ ಹೊರಟಿದ್ದು, ಕುಂಪಲ ಬೈಪಾಸ್ ಬಳಿ ಕುಂಪಲ ರಸ್ತೆಗೆ ಬೈಕನ್ನು ತಿರುಗಿಸುವಾಗ ಮೆಹಂದಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಸೈಕೋ ವಿಕ್ಕಿಯ ಕಾರು ಎದುರಾಗಿದೆ. ಸೈಕೋ ವಿಕ್ಕಿಯ ಜತೆಯಲ್ಲಿದ್ದವರು ವಿಕ್ಕಿ ಬೋಳಾರ್ನನ್ನು ನೋಡುತ್ತಿದ್ದಂತೆ ಬೋಳಾರ್ನ ಬೈಕ್ನ ಮೇಲೆ ಕಾರನ್ನು ಹರಿಸಲು ಯತ್ನಿಸಿದ್ದು, ಬೋಳಾರ್ ತನ್ನ ಸ್ನೇಹಿತರೊಂದಿಗೆ ಸೈಕೋ ವಿಕ್ಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ತೊಕ್ಕೊಟ್ಟು ಬಳಿ ವಿಕ್ಕಿ ಬೋಳಾರ್ನ ತಂಡಕ್ಕೆೆ ಬಲಿಯಾಗಿದ್ದಾನೆ.
ವಿಕ್ಕಿ ಬೋಳಾರ್ ಮೇಲೆ ಕೊಲೆ ಸೇರಿದಂತೆ 10 ಕೇಸು
ವಿಕ್ಕಿ ಬೋಳಾರ್ ಗ್ಯಾಂಗ್ವಾರ್ಗಳಲ್ಲಿ ಸಕ್ರಿಯನಾಗಿದ್ದ. ಎರಡು ಕೊಲೆ ಆರೋಪ, ಕೊಲೆ ಯತ್ನ, ಹಲ್ಲೆ ಸೇರಿದಂತೆ 10 ಪ್ರಕರಣಗಳು ಬರ್ಕೆ, ಉರ್ವ ಪೊಲೀಸ್ ಠಾಣೆ ಸೇರಿದಂತೆ ಮಂಗಳೂರಿನ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿದ್ದವು. ಬಿಜೈ ರಾಜಾನ ಕೊಲೆಯಲ್ಲಿ ಪರೋಕ್ಷವಾಗಿ ಸಹಕರಿಸಿದ್ದ ಹಿನ್ನೆಲೆಯಲ್ಲಿ ಖುಲಾಸೆಗೊಂಡಿದ್ದು, ಅಳಕೆಯ ಜಾನ್ ಪಿಂಟೋ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪ್ರಕರಣ ಮುಂದುವರಿದಿದೆ. ಉಳಿದಂತೆ ಕೋರಿ ಅಶೋಕ್ ಸಹೋದರ ಪ್ರದೀಪ್ ಕೊಲೆಯತ್ನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.
ಸೈಕೋ ವಿಕ್ಕಿ ಮೂಲತಃ ಹುಬ್ಬಳ್ಳಿಯವ
ಸೈಕೋ ವಿಕ್ಕಿ ಯಾನೆ ರವಿಚಂದ್ರ ಪೂಜಾರಿ ಮೂಲತಃ ಹುಬ್ಬಳ್ಳಿಯವ. ಹುಬ್ಬಳ್ಳಿಯಲ್ಲಿ ಆತನ ಮೇಲೆ ಹಲವು ಪ್ರಕರಣಗಳಿದ್ದು, ಮಂಗಳೂರಿನಲ್ಲಿ ದೊಡ್ಡ ಪ್ರಕರಣಗಳಿಲ್ಲ.
ಸೈಕೋ ವಾಹನ ಚಾಲನೆಯಲ್ಲಿ ಪರಿಣತನಾಗಿದ್ದು, ಸ್ಕಾರ್ಪಿಯೋವನ್ನು ಅದೇ ವೇಗದಲ್ಲಿ ಚಾಲನೆ ನಡೆಸಿ ಬೈಕ್ನಲ್ಲಿದ್ದ ವಿಕ್ಕಿ ತಂಡವನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದ.
ತ್ರಿಬಲ್ ರೈಡ್ ಪಾರಾಗುವಲ್ಲಿ ವಿಫಲ
ಬೋಳಾರ ವಿಕ್ಕಿ ಬಂದಿದ್ದ ಎಫ್ಝಿ ಬೈಕ್ ಸ್ಕಾರ್ಪಿಯೋ ಕಾರಿನ ಎದುರು ಪಾರಾಗಲು ಬಹಳ ಅವಕಾಶವಿತ್ತು ಆದರೆ ವಿಕ್ಕಿಯೊಂದಿಗೆ ಇನ್ನಿಬ್ಬರು ಇದ್ದರಿಂದ ನಿರೀಕ್ಷಿತ ವೇಗದಲ್ಲಿ ಸಾಗಲು ಸಾಧ್ಯವಾಗಿಲ್ಲ. ವಿಕ್ಕಿ ಸ್ಕಾರ್ಪಿಯೋದಲ್ಲಿ ಬೈಕನ್ನು ಕುಂಪಲ ಬೈಪಾಸ್ನಿಂದ ಸುಮಾರು ಒಂದು ಕಿ.ಮೀ. ದೂರದವರೆಗೆ ಚೇಸಿಂಗ್ ಮಾಡಿಧಿಕೊಂಡು ಬಂದಿದ್ದು ತೊಕ್ಕೊಟ್ಟು ಜಂಕ್ಷನ್ನಲ್ಲಿ ಬೈಕ್ ರಾಷ್ಟ್ರೀಯ ಹೆದ್ದಾರಿ 66ರಿಂದ ಮಂಗಳೂರು ವಿ.ವಿ. ರಸ್ತೆಗೆ ತಿರುಗಿಸಿದ್ದು, ಇಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯ ಕಾರಣ ವಿನಮ್ರ ಬಾರ್ ಬಳಿ ಸ್ಕಾರ್ಪಿಯೋ ಕಾರು ಬೈಕನ್ನು ಅಡ್ಡ ಹಾಕುವಲ್ಲಿ ಯಶಸ್ವಿಯಾಗಿದ್ದು, ಬೈಕ್ನಲ್ಲಿದ್ದ ವಿಕ್ಕಿ ಬೋಳಾರ್ ಬೈಕ್ನ ಬಳಿಯೇ ಉಳಿದರೆ ಒಟ್ಟಿಗಿದ್ದ ಚರಣ್ ಮತ್ತು ಅಭಿಲಾಷ್ ಜೀವ ಉಳಿಸಿಕೊಳ್ಳಲು ಓಡಿದ್ದು, ಈ ಸಂದರ್ಭದಲ್ಲಿ ಸೈಕೋ ಮತ್ತು ತಂಡ ಅನಾಯಾಸವಾಗಿ ವಿಕ್ಕಿ ಬೋಳಾರ್ನನ್ನು ಮುಗಿಸಿ ಹಾಕಿತ್ತು.
ಪೊಲೀಸರಿಂದ ಠಾಣೆಗೆ ಮಾಹಿತಿ
ಘಟನೆಗೆ ಮುನ್ನ ಕುಂಪಲದಿಂದ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಸ್ಕಾರ್ಪಿಯೋ ಮತ್ತು ಬೈಕನ್ನು ನೋಡಿದ ತೊಕ್ಕೊಟ್ಟಿನ ರಾತ್ರಿ ಪಾಳಿಯ ಪೊಲೀಸರು ಈ ಕುರಿತು ಉಳ್ಳಾಲ ಪೊಲೀಸ್ ಪಿಸಿಆರ್ಗೆ ಮಾಹಿತಿ ನೀಡಿದ್ದರು. ತತ್ಕ್ಷಣ ಧಾವಿಸಿ ಬಂದ ಪೊಲೀಸರು ವಿನಮ್ರ ಹೊಟೇಲ್ ಬಳಿ ರಕ್ತಸಿಕ್ತವಾಗಿ ಬಿದ್ದಿದ್ದ ವಿಕ್ರಂನನ್ನು ಆಸ್ಪತ್ರೆಗೆ ದಾಖಲಿಸಿದರು.
ಅಪರಾಧಿಗಳ ಪತ್ತೆಗೆ ವಿವಿಧ ತಂಡ ರಚನೆ
ಗ್ಯಾಂಗ್ವಾರ್ನಿಂದ ಹತ್ಯೆಗೀಡಾಗಿರುವ ವಿಕ್ಕಿ ಯಾನೆ ವಿಕ್ರಮ್ ಬೋಳಾರ್ನ ಹತ್ಯೆಯ ಆರೋಪಿಗಳನ್ನು ಪತ್ತೆಹಚ್ಚಲು ಉಳ್ಳಾಲ, ಕೊಣಾಜೆ, ಸೇರಿದಂತೆ ವಿವಿಧ ತಂಡಗಳನ್ನು ರಚಿಸಿ ಶೋಧಕಾರ್ಯ ಮುಂದುವರಿಸಿದ್ದು, ಸಿಸಿಬಿ ಪೊಲೀಸರು ಆರೋಪಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜನರ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತೊಕ್ಕೊಟ್ಟು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪರಾಧಿಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಹತ್ಯೆ ಪೂರ್ವಯೋಜಿತವಲ್ಲ
ವಿಕ್ಕಿ ಬೋಳಾರ್ ಹತ್ಯೆ ಪೂರ್ವ ಯೋಜಿತವಾಗಿರಲಿಲ್ಲ. ಎರಡೂ ತಂಡಗಳ ನಡುವೆ ವೈಷಮ್ಯ ಇದ್ದರೂ ರವಿವಾರವೇ ಹತ್ಯೆ ನಡೆಸುವ ಯೋಜನೆ ಹಾಕಿರಲಿಲ್ಲ. ವಿಕ್ಕಿ ಬೋಳಾರ್ ತಾನಾಗಿಯೇ ಸೈಕೋ ವಿಕ್ಕಿಯ ಬಳಿ ತೆರಳುವ ಮೂಲಕ ಹತ್ಯೆಗೀಡಾಗಿದ್ದಾನೆ. ಸೈಕೋ ವಿಕ್ಕಿ ಸೇರಿದಂತೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಂಡ ವಿಕ್ಕಿ ಶೆಟ್ಟಿ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದರು ಎನ್ನುವ ಮಾಹಿತಿ ಇದೆ. ಆದರೆ ಈ ಹತ್ಯೆಯಲ್ಲಿ ಅವರ ಕೈವಾಡವಿಲ್ಲ ಎನ್ನುತ್ತಿದೆ ಮೂಲವೊಂದು. ಇನ್ನೊಂದು ಮೂಲದ ಪ್ರಕಾರ ವಿಕ್ಕಿ ಬೋಳಾರ್ ತಂಡ ರವಿ ಪೂಜಾರಿ ಗ್ಯಾಂಗ್ನಲ್ಲಿ ಗುರುತಿಕೊಂಡಿತ್ತು ಎನ್ನುವ ಮಾಹಿತಿ ಇದೆ. ಎರಡೂ ತಂಡಗಳು ಮೇಲ್ನೋಟಕ್ಕೆ ಮಂಗಳೂರಿನಲ್ಲಿಯೇ ಗ್ಯಾಂಗ್ವಾರ್ನಲ್ಲಿ ತೊಡಗಿಸಿಕೊಂಡಿರುವುದು ಮಾಹಿತಿಯಿಂದ ತಿಳಿದು ಬಂದಿದೆ.
ಲೆಕ್ಕಾಚಾರ ತಪ್ಪಿತ್ತು
ಮೆಹಂದಿ ಪಾರ್ಟಿಯಲ್ಲಿ ನಡುರಾತ್ರಿ ಸುಮಾರು 1 ಗಂಟೆಯ ಬಳಿಕ ವಿಕ್ಕಿ ಬೋಳಾರ್ಗೆ ದೂರವಾಣಿ ಕರೆ ಬಂದಿತ್ತು. ದೂರವಾಣಿ ಕರೆಯಂತೆ ತನ್ನ ಆಪ್ತರಿಬ್ಬರೊಂದಿಗೆ ಸೈಕೋನಿಗೆ ಮುಹೂರ್ತ ಇಡಲು ಹೊರಟಿದ್ದರು. ಮೆಹಂದಿ ಪಾರ್ಟಿ ನಡೆಯುವ ಮನೆ ಬಳಿಯೇ ಸೈಕೋನಿಗೆ ಸ್ಕೆಚ್ ಹಾಕಿ ಹೊರಟಿದ್ದ ತಂಡದ ಲೆಕ್ಕಾಚಾರ ತಪ್ಪಿದ್ದು, ಮದುವೆ ಮನೆಯವರ ಒತ್ತಡದಿಂದ ಇತ್ತ ಸೈಕೋ ತಂಡ ಮತ್ತು ಸ್ಥಳೀಯ ತಂಡಕ್ಕೆ ಮಾತಿನ ಚಕಮಿಕಿ ನಡೆದು ವಿಕೋಪಕ್ಕೆ ತೆರಳುತ್ತಿದ್ದಾಗ, ಮದುವೆ ಮನೆಯಲ್ಲಿ ಗಲಾಟೆ ನಡೆದರೆ ಪೊಲೀಸರು ಬಂದು ಮದುವೆಗೆ ಅಡ್ಡಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮದುಮಗನ ವಿನಂತಿಯಂತೆ ಕಾರ್ಯಕ್ರಮದ ನಡುವೆಯೇ ಸೈಕೋ ವಿಕ್ಕಿ ಮತ್ತು ಆತನ ತಂಡದಲ್ಲಿದ್ದ ಸ್ನೇಹಿತರು ಹೊರಟಿದ್ದರು. ಇತ್ತ ಸೈಕೋನಿಗೆ ಪಾಠ ಕಲಿಸುವ ಹುಮ್ಮಸ್ಸಿನಲ್ಲಿ ಬರುತ್ತಿದ್ದ ವಿಕ್ಕಿ ಬೋಳಾರ್ಗೆ ಸೈಕೋ ವಿಕ್ಕಿ ಎದುರು ಬದುರಾದಾಗ ಎಲ್ಲ ಲೆಕ್ಕಾಚಾರ ತಪ್ಪಿ ತನ್ನ ಸಾವಿಗೆ ತಾನೇ ಮುನ್ನುಡಿ ಬರೆದಂತಾಗಿದೆ.
ಗೆಳೆಯರು ವಿರೋಧಿಗಳಾದರು
ಮೃತ ವಿಕ್ಕಿ ಬೋಳಾರ್ ಮತ್ತು ಸೈಕೋ ವಿಕ್ಕಿ ನಾಲ್ಕು ವರ್ಷದ ಹಿಂದೆ ಗೆಳೆಯರಾಗಿದ್ದರು. ವಿಕ್ಕಿ ಬೋಳಾರ್ ಕೋರಿ ಅಶೋಕನ ವಿರುದ್ಧ ಮಾತನಾಡಿದ ವಿಚಾರವನ್ನು ಸೈಕೋ ವಿಕ್ಕಿ ಅಶೋಕ್ನಿಗೆ ತಿಳಿಸಿದ್ದು ಈ ವಿಚಾರದಲ್ಲಿ ವಿಕ್ಕಿ ಬೋಳಾರ ನೇತೃತ್ವದ ತಂಡ ಸೈಕೋ ವಿಕ್ಕಿಯನ್ನು ಅಳಕೆ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿತ್ತು. ಈ ಘಟನೆಯ ಬಳಿಕ ಸೈಕೋ ವಿಕ್ಕಿಯು ವಿಕ್ರಮ್ ಬೋಳಾರ್ನನ್ನು ಮುಗಿಸುವ ಯೋಜನೆ ರೂಪಿಸಿದ್ದ, ನಾಲ್ಕು ತಿಂಗಳ ಹಿಂದೆ ಬೋಳಾರ ತಂಡದ ಲತೇಶ್ನ ಕೊಲೆಗೆ ಯತ್ನಿಸಿದ್ದ ಸೈಕೋ ವಿಕ್ಕಿ ವಿಫಲನಾಗಿದ್ದ, ಅದೇ ತಂಡದ ಪ್ರಮುಖನಾಗಿದ್ದ ವಿಕ್ಕಿ ಬೋಳಾರ್ ಅನಾಯಾಸವಾಗಿ ಸೈಕೋ ಕೈಗೆ ಸಿಗುವ ಮೂಲಕ ಹತನಾಗಿದ್ದಾನೆ.
ತನ್ನ ಸಾವನ್ನು ತಾನೇ ಆಹ್ವಾನಿಸಿದ ವಿಕ್ಕಿ ಬೋಳಾರ್
ವಿಕ್ಕಿ ಬೋಳಾರ್ ತನ್ನ ಸಾವನ್ನು ತಾನೇ ಆಹ್ವಾನಿಸಿದಂತಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿದ್ದ ವಿಕ್ಕಿ ಬೋಳಾರ್ ಕುಂಪಲಕ್ಕೆ ಹೊರಡುವಾಗ ಆತನ ಸ್ನೇಹಿತರು ಎಚ್ಚರಿಸಿದ್ದರು. ಕುಂಪಲದಲ್ಲಿ ಕಡಿಮೆ ಎಂದರೂ ಸುಮಾರು 20ಕ್ಕೂ ಹೆಚ್ಚು ಸೈಕೋ ವಿಕ್ಕಿಯ ಸ್ನೇಹಿತರಿರುವಾಗ ನೀನು ಹೇಗೆ ಅವರನ್ನು ಎದುರಿಸುತ್ತಿ ಎಂದು ಕೇಳಿದ್ದರು ಎಂದು ಮೂಲವೊಂದು ತಿಳಿಸಿದೆ. ಆದರೆ ಅದಾವುದನ್ನೂ ಲೆಕ್ಕಿಸದೆ ತನ್ನ ಆಯುಧಗಳೊಂದಿಗೆ ಬೈಕ್ನಲ್ಲಿ ಹೊರಟಿದ್ದ ಆತನಿಗೆ ಸಾವು ಎದುರಾಗಿ ಬಂದು ನಿಂತಿತ್ತು.







