ಮೂಡುಬಿದಿರೆ,ಅ.16: ಮೂಡಬಿದ್ರೆಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗ ದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯ ಹತ್ಯೆಯನ್ನು ಕಣ್ಣಾರೆ ಕಂಡಿರುವ ಪ್ರಮುಖ ಪ್ರತ್ಯಕ್ಷದರ್ಶಿ ಯೊಬ್ಬರು ಆತ್ಮ ಹತ್ಯೆ ಮಾಡಿಕೊಂಡಿದ್ದು, ಮೃತರು ಪಾಕಿಸ್ಥಾನದಿಂದ ಬಂದ ಕರೆಗಳನ್ನು ಸ್ವೀಕರಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.
ಶುಕ್ರವಾರ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಳನೀರು ವ್ಯಾಪಾರಿಯಾಗಿರುವ ವಾಮನ ಕೋಟ್ಯಾನ್ (60) ಅವರ ಕಣ್ಣೆದುರೇ ಪ್ರಶಾಂತ್ ಪೂಜಾರಿಯ ಹತ್ಯೆಯಾಗಿದೆ, ಈ ಕೊಲೆಯ ಪ್ರತ್ಯಕ್ಷದರ್ಶಿಯಾಗಿದ್ದ ವಾಮನ ಕೋಟ್ಯಾನ್ ಅವರಿಗೆ ಕೊಲೆ ನಡೆದ ಮರುದಿನದಿಂದಲೇ ಪಾಕಿಸ್ಥಾನದಿಂದ ದೂರವಾಣಿ ಕರೆಗಳು ಬರಲು ಆರಂಭಿಸಿದೆ. ಈ ಬಳಿಕ ಅಕ್ಟೋಬರ್ 9 ರಂದು ಬೆಳಗ್ಗೆ ನಗರದ ಕಡ್ದಬೆಟ್ಟುವಿನಲ್ಲಿರುವ ತನ್ನ ಮಗಳ ಮನೆಯ ಶೆಡ್ಡಿನಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿಸಿದರು.
ಕೊಲೆ ನಡೆದ ಮರುದಿನದಿಂದ ವಾಮನ ಕೋಟ್ಯಾನ್ರಿಗೆ ಪಾಕಿಸ್ಥಾನದಿಂದ ದೂರವಾಣಿ ಕರೆಗಳು ಬರುತ್ತಿದ್ದು, ಕರೆ ಮಾಡಿದವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ವಾಮನ ಕೋಟ್ಯಾನ್ ಅವರ ಕುಟುಂಬ ಸದಸ್ಯರು ತಿಳಿಸಿದ್ದು, ಇದರ ಹಿಂದೆ ಯಾವೂದು ಬಲವಾದ ಪಿತೂರಿ ಇರಬೇಕು ಎಂದು ನಳಿನ್ ಕುಮಾರ್ ದೂರಿದ್ದಾರೆ.
ಪ್ರಶಾಂತ್ ಪೂಜಾರಿ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ರಾಜ್ಯ ನಾಯಕರ ಬೆಂಬಲೊಂದಿಗೆ ಅಕ್ಟೋಬರ್ 20 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನಳಿನ್ ಕುಮಾರ್ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಆರೋಪಿಗಳನ್ನು ಹಿಡಿಯುವಲ್ಲಿ ವಿಫಲವಾಗಿದೆ. ಕೇವಲ ಮೂರು ತಿಂಗಳಲ್ಲಿ ಏಳು ಬಾರಿ ಹಿಂದೂಗಳ ಮೇಲೆ ದಾಳಿ ನಡೆದಿದೆ. ಇದೇ ರೀತಿ ಹಿಂದೂಗಳ ಮೇಲೆ ನಡೆಡ ಒಂದು ದಾಳಿಯಲ್ಲಿ ಹಿಂದೂ ಸಂಘಟನೆಗಳ ಮುಂಚೂಣಿಯ ನಾಯಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೆ ಕಾಂಗ್ರೆಸ್ನ ಯಾವೂದೇ ನಾಯಕರು ಕೊಲೆಯಾದ ವ್ಯಕ್ತಿಯ ಮನೆಗೆ ಭೇಟಿ ನೀಡಿಲ್ಲ. ಯಾವೂದೇ ಪರಿಹಾರ ಘೋಷಿಸಿಲ್ಲ. ಆಲದೇ ಪೊಲೀಸರು ಈ ಕೊಲೆ ಪ್ರಕರಣದ ಆರೋಪಿಗಳ ಬಗ್ಗೆ ಇದುವರೆಗೆ ಯಾವೂದೇ ಮಾಹಿತಿ ಸಂಗ್ರಹಿಸಿಲ್ಲ. ಯಾರನ್ನೂ ಬಂಧಿಸಿಲ್ಲ.
ಈ ಘಟನೆಯ ಪೂರ್ವ ಮೂಡಬಿದ್ರೆ ವಿಧಾನಸಭೆಯ 3 ಕಡೆಗಳಲ್ಲಿ ಹಿಂದೂಗಳ ಮೇಲೆ ಹಲ್ಲೆಗಳಾಗಿವೆ. ಪೆರ್ಮುಡೆ ಎಂಬಲ್ಲಿ ವ್ಯಾಪಾರ ಮುಗಿಸಿ ಹೋಗುತ್ತಿದ್ದ ಯುವಕರ ಮೆಲೆ ಹಿಂದೂ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ, ಆದರೆ ಆರೋಪಿಗಳ ಬಂಧನವಾಗಿಲ್ಲ. ಹಂಡೇಲು ಎಂಬಲ್ಲಿ ಕೂಡ 2 ಯುವಕರ ಮೇಲೆ ನಿಲ್ಲಿಸಿ ಹಲ್ಲೆ ನಡೆದಿದೆ, ಆರೋಪಿಗಳ ಬಂಧನವಾಗಿಲ್ಲ. ಆ ಘಟನೆ ಆದ 1 ವಾರದ ಬಳಿಕ ಹಿಂದೂ ಸಂಘಟನೆ ವಿರುದ್ಧವಾಗಿ ಮೂಡಬಿದ್ರೆಯ ಬಸ್ ನಿಲ್ದಾಣದಲ್ಲಿ ಸಂಘಟನೆಯವರು ಹೋರಾಟ ಮಾಡಿದರು. ಹನೀಫ್ ಎಂಬಾತ ನಮ್ಮ ವಿರುದ್ಧ ಹೋರಾಟ ಮಾಡುವವರಿಗೆ 1 ವಾರದೊಳಗೆ ಉತ್ತರ ನೀಡುತ್ತೇವೆ, ಅವರನ್ನು ಇಲ್ಲಿಯೇ ಮುಗಿಸುತ್ತೇವೆ ಎಂದಿದ್ದರು.
ಅದೇ ಜಾಗದಲ್ಲಿ ಪ್ರಶಾಂತನ ಹತ್ಯೆಯಾಗಿದೆ. ಹೀಗಾಗಿ ಈ ಘಟನೆಗಲ ನಡುವೆ ಸಂಬಂಧ ಕಾಣುತ್ತವೆ. ಆದರೆ ಅಂದು ಭಾಷಣ ಮಾಡಿದ ಭಾಷಣಕಾರರನ್ನು ಬಂಧಿಸಿಲ್ಲ, ಅವರ ತನಿಖೆಯಾಗಿಲ್ಲ. ಜಿಲ್ಲೆಯಲ್ಲಿ ಇಲ್ಲಿ 6 – 7 ಘಟನೆಗಳು ನಡೆದರೂ ತನಿಖೆಯ ಪರಿಣಾಮ ಕಾಣುತ್ತಿಲ್ಲ. ದ.ಕ ದಲ್ಲಿ ಪೊಲೀಸ್ ಇಲಾಖೆ ರಾಜಕಾರಾಣಿಗಳ ಕೈಗೊಂಬೆಯಾಗಿದೆ. ಆಡಳಿತಮಾಡುವ ಕಾಂಗ್ರೆಸ್ ಮತ ಬ್ಯಾಂಕ್ ಗೋಸ್ಕರ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುವ ಕಾಂಗ್ರೆಸ್ ಪ್ರಶಾಂತ್ ಹತ್ಯೆಯನ್ನು ಖಂಡಿಸಿಲ್ಲ, ತನಿಖೆಗೆ ಮಾಡಲು ಯಾರಿಗೂ ಏನು ಹೇಳಿಲ್ಲ. ಪೊಲೀಸ್ ಇಲಾಖೆ ಮೌನವಾಗಿದೆ.
ನಮ್ಮ ಸರ್ಕಾರವಿದ್ದಾಗ ಜಾರಿ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಿದ್ದು ಸರಕಾರ ಹಿಂದಕ್ಕೆ ಪಡೀತು ಅದರ ಪರಿಣಾಮ ದ.ಕ.ಜಿಲ್ಲೆಯಲ್ಲಿ 100 ಕ್ಕೂ ಗೋಹತ್ಯೆ ಕೇಸು ನಡೀದಿದೆ. ಎಲ್ಲವನ್ನು ಪರಿಪೂರ್ಣವಾಗಿ ತನಿಖೆ ಮಾಡುದರಲ್ಲಿ ಸರ್ಕಾರ ವಿಫಲವಾಗಿದೆ. ಗೃಹ ಸಚಿವರು ಹಂತಕರಿಗೆ ಪ್ರೇರಣೆಯಾಗಿದ್ದಾರೆ ಎಂಬ ಭಾವನೆ ಜನತೆಗೆ ಬಂದಿದೆ. ಇಂದು ಜಿಲ್ಲೆಯ ಜಿಲ್ಲೆಯ ಜನತೆ ಭಯಗೊಂಡಿದ್ದು, ಸಂಜೆ ನಂತರ ಬೀದಿಗಿಳಿದು ನಡೆಯಲು ಆತಂಕಗೊಂಡಿದ್ದಾರೆ. ದನವಿದ್ದ ಮನೆಯವರು ಮಲಗಲು ಭಯಪಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಅಕ್ಟೋಬರ್ 20 ರಂದು ಮಂಗಳೂರಿನ ಪುರಭವನದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪುರಭವನದ ಎದುರಿನ ಮಹಾತ್ಮ ಗಾಂಧಿ ಪ್ರತಿಮೆಗೆ ಹಾರ ಹಾಕಿ, ಪಕ್ಕದಲ್ಲಿರುವ ಸಂವಿಧಾನಶಿಲ್ಪಿ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ಕೂರುತ್ತೇವೆ.” ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ, ಮಾಜಿ ಸಚಿವರಾದ ಈಶ್ವರಪ್ಪ, ಆರ್.ಆಶೋಕ್, ಸುರೇಶ್ ಕುಮಾರ್, ಸಂಸದೆ ಶೋಭಾ ಕರಾಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲ್ಲಿದ್ದಾರೆ ಎಂದು ನಳಿನ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರೀಷತ್ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ಮುಂತಾದವರು ಉಪಸ್ಥಿತರಿದ್ದರು.