ಕುಂದಾಪುರ: ಕೊಲ್ಲೂರು-ಕುಂದಾಪುರ ರಾಜ್ಯ ಹೆದ್ದಾರಿಯ ಇಡೂರು ಎಂಬಲ್ಲಿನ ಹಾರ್ಡ್ವೇರ್ ಅಂಗಡಿಯೊಂದಕ್ಕೆ ಶುಕ್ರವಾರ ಸಂಜೆ ವೇಳೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಂಗಡಿ ಸಂಪೂರ್ಣ ಹಾನಿಯಾಗಿದ್ದಲ್ಲದೇ ಸಮೀಪದ ದಿನಸಿ ಅಂಗಡಿ ಹಾಗೂ ಎರಡು ಬಾಡಿಗೆ ಮನೆಗಳಿಗೆ ಬೆಂಕಿ ವ್ಯಾಪಿಸಿ ನಷ್ಟ ಸಂಭವಿಸಿದ ಪರಿಣಾಮ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಗುಲಾಬಿ ಶೆಡ್ತಿಯವರ ಕಾಂಪ್ಲೆಕ್ಸ್ ಇದಾಗಿದೆ ಎನ್ನಲಾಗಿದ್ದು ಭಾಸ್ಕರ್ ಶೆಟ್ಟಿ ಎನ್ನುವವರು ಹಾರ್ಡ್ವೇರ್ ಅಂಗಡಿಯಲ್ಲಿ ಈ ಅವಘಡ ಸಂಭವಿಸಿ ಬಳಿಕ ದಿನಸಿ ಅಂಗಡಿ ಹಾಗೂ ಎರಡು ಬಾಡಿಗೆ ಮನೆಗಳಿಗೂ ಅಗ್ನಿ ಅನಾಹುತದಲ್ಲಿ ನಷ್ಟವಾಗಿದೆ. ಅಂದಾಜು 40 ಲಕ್ಷಕ್ಕೂ ಅಧಿಕ ಈ ಅವಘಡದಿಂದ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಸಂಜೆ 7.00 ರ ಸುಮಾರಿಗೆ ಈ ಹಾರ್ಡ್ವೇರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಂಗಡಿಯೊಳಗೆ ಪೇಂಟ್ ಹಾಗೂ ಇತರೇ ರಾಸಾಯನಿಕ ವಸ್ತುಗಳಿದ್ದ ಕಾರಣ ಶೀಘ್ರದಲ್ಲಿಯೇ ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿದ್ದಲ್ಲದೇ ಸಮೀಪದ ಅಂಗಡಿ ಹಾಗೂ ಬಾಡಿಗೆ ಮನೆಗೂ ಬೆಂಕಿ ಜ್ವಾಲೆ ವ್ಯಾಪಿಸಿದೆ. ಸ್ಥಳೀಯರು ಕುಂದಾಪುರ ಅಗ್ನಿಶಾಮಕಕ್ಕೆ ಕೂಡಲೇ ಫೋನಾಯಿಸಿ ಮಾಹಿತಿ ನೀಡಿದ್ದು ಅವರು ಆಗಮಿಸುವುದರೊಳಗಾಗಿ ಭಾಗಶಃ ಸುಟ್ಟು ಕರಕಲಾಗಿ ಅಪಾರ ನಷ್ಟ ಸಂಭವಿಸಿದೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.













