ಮಿನಾ/ಹೊಸದಿಲ್ಲಿ, ಸೆ.26: ಸೌದಿ ಅರೇಬಿಯದಲ್ಲಿ ಹಜ್ ಯಾತ್ರೆಯ ಸಂದರ್ಭದಲ್ಲಿ ಗುರುವಾರ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಭಾರತೀಯರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಭಾರತದ 22 ಮಂದಿ ಹಜ್ ಯಾತ್ರಿಕರು ಕಾಲ್ತುಳಿತ ದಲ್ಲಿ ಮೃತಪಟ್ಟಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಇವರಲ್ಲಿ ಒಂಭತ್ತು ಮಂದಿ ಗುಜರಾತ್ನವರು, ಮೂವರು ತಮಿಳುನಾಡಿನವರು ಹಾಗೂ ತೆಲಂಗಾಣ ಮತ್ತು ಕೇರಳಗಳಿಂದ ತಲಾ ಒಬ್ಬರಾಗಿದ್ದಾರೆ. ಎಂಟು ಮಂದಿಯನ್ನು ಇನ್ನೂ ಗುರುತಿಸಲಾಗಿಲ್ಲ. ಘಟನೆಯಲ್ಲಿ ಕಡೇಪಕ್ಷ 13 ಮಂದಿ ಭಾರತೀಯರು ಗಾಯಗೊಂಡಿದ್ದಾರೆ. ಹಜ್ ಕಾಲ್ತುಳಿತದಿಂದ ಈವರೆಗೆ 717 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ, 800ಕ್ಕೂ ಮಿಕ್ಕಿ ಜನರು ಗಾಯಗೊಂಡಿದ್ದಾರೆ. ಈ ಮಧ್ಯೆ, ಸೌದಿ ದೊರೆ ಸಲ್ಮಾನ್, ಮಕ್ಕಾದಲ್ಲಿ ಹಜ್ ಯಾತ್ರೆಯ ಸುರಕ್ಷತಾ ಕ್ರಮಗಳ ಪರಾಮರ್ಶೆಗೆ ಆದೇಶ ನೀಡಿದ್ದಾರೆ.