ಬಂಟ್ವಾಳ,ಸೆ.26 : ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಚಿನ್ನಾಭರಣ ಕಳವು ನಡೆಸಿದ ಘಟನೆ ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ಸುಮತಿ ಮಾರ್ಲ ಎಮಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಸುಮಾರು 25 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಬಳೆ ಕಳ್ಳರ ಪಾಲಾಗಿದೆ.
ಮನೆಯಲ್ಲಿ ಸುಮಾತಿ ಮಾರ್ಲ ಒಬ್ಬಂಟಿಯಾಗಿ ಜೀವಿಸುತ್ತಿದ್ದು ಈ ಬಗ್ಗೆ ಮಾಹಿತಿ ಪಡೆದುಕೊಂಡ ಕಳ್ಳರು ಹಂಚು ತೆಗೆದು ಒಳನುಗ್ಗಿ ಕಪಾಟಿನ ಬೀಗ ಮುರಿದು ಲಾಕರ್ನಲ್ಲಿದ್ದ ಚಿನ್ನಾಭರಣವನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ.
ಒಳ ಕೊಠಡಿಯಲ್ಲಿ ಮಲಗಿದ್ದ ಸುಮತಿ ಮಾರ್ಲ ಅವರಿಗೆ ಕಳ್ಳರು ಮನೆ ಪ್ರವೇಶಿಸಿ ಕಪಾಟು ಜಾಲಾಡಿದ್ದರೂ ಅದ್ಯಾವುದು ಗಮನ ಬಂದಿರಲ್ಲಿ. ಬೆಳಿಗ್ಗೆ ಎದ್ದು ನೋಡಿದಾಗ ಕಪಾಟಿನ ಬೀಗ ತೆರದೆದಿರುವುದು ಹಾಗೂ ಚಾವಡಿಯ ಹಂಚು ಸರಿಸಿರುವುದನ್ನು ಕಂಡು ಕಳ್ಳತನ ನಡೆದಿರುವುದು ಗೊತ್ತಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಘಟನಾ ಸ್ಥಳಕ್ಕೆ ಬಂಟ್ವಾಳ ಉಪವಿಭಾಗದ ಎಎಸ್ಪಿ ರಾಹುಲ್ ಕುಮಾರ್, ನಗರ ಠಾಣಾ ಎಸೈ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವನ್ನು ಕರೆಸಿಕೊಂಡು ತನಿಖೆ ನಡೆಸಲಾಗುತ್ತಿದೆ.